ಸ್ಯಾಂಡಲ್ವುಡ್ ಖ್ಯಾತ ನಟ ಪುನೀತ್ ರಾಜ್ಕುಮಾರ್ ನಿಧನ ಹೊಂದಿರುವ ವಿಚಾರ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಶಾಕ್ ನೀಡಿದೆ. ಪುನೀತ್ ನಿಧನ ಹೊಂದಿ ತಿಂಗಳೇ ಕಳೆದರೂ ಕುಟುಂಬದ ದುಃಖ ಕಡಿಮೆ ಆಗಿಲ್ಲ. ಅವರ ಕುಟುಂಬಕ್ಕೆ ಸಾಂತ್ವನ ಹೇಳೋಕೆ ಬೇರೆ ಚಿತ್ರರಂಗದ ಅನೇಕ ಸ್ಟಾರ್ಗಳು, ಮಠದ ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ. ಡಿಸೆಂಬರ್ 1ರಂದು ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅವರು ಪುನೀತ್ ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳಿದ್ದರು. ಇಂದು (ನವೆಂಬರ್ 2) ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪುನೀತ್ ಮನೆಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ರಾಜ್ಕುಮಾರ್ ಕುಟುಂಬಕ್ಕೂ ಮಠಕ್ಕೂ ಅವಿನಾಭಾವ ಸಂಬಂಧ ಇದೆ. ಅವರು ಅಗಲಿದ ಮೇಲೆ ಪಾರ್ಥಿವ ಶರೀರ ನೋಡಿದ್ದೆವು. ಒಂದು ತಿಂಗಳ ಬಳಿಕ ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿದ್ದೇನೆ. ಅವರ ನೋವಿನ ಸಂದರ್ಭದಲ್ಲಿ ಮಠ ಸಹಾಯಕ್ಕೆ ನಿಲ್ಲಲಿದೆ’ ಎಂದಿದ್ದಾರೆ.