ಒಂದು ವರ್ಷದಲ್ಲಿ 56 ಚಿನ್ನ ಕದ್ದ ಪ್ರಕರಣಗಳನ್ನು ಪತ್ತೆ ಹಚ್ಚಿದ ರಾಮನಗರ ಪೊಲೀಸ್, 86 ಮಂದಿ ಅರೆಸ್ಟ್
ರಾಮನಗರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ರಾಮನಗರ ಜಿಲ್ಲಾ ಪೊಲೀಸರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದು, ಕಳೆದೊಂದು ವರ್ಷದಲ್ಲಿ 56 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಇದರೊಂದಿಗೆ 86 ಜನ ಆರೋಪಿಗಳನ್ನ ಜೈಲಿಗಟ್ಟುವಲ್ಲಿ ಯಶಸ್ಸಿಯಾಗಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಬರೊಬ್ಬರಿ 4 ಕೆಜಿ 771 ಗ್ರಾಂ ಚಿನ್ನವನ್ನು ಸಹ ವಶ ಪಡಿಸಿಕೊಂಡಿದ್ದಾರೆ.
ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 19 ಪೊಲೀಸ್ ಠಾಣೆಗಳಿದ್ದು, ಇವುಗಳಿಂದ ಒಟ್ಟಾರೆ 56 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಕೆಲ ದಿನಗಳಿಂದ ಕಳ್ಳರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಸರಗಳ್ಳರ ಹಾವಳಿ ಹೆಚ್ಚುತ್ತಲೇ ಇದೆ. ಇಂತಹ ಖದೀಮರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ನಿದ್ದೆಗೆಟ್ಟು ಕೆಲಸ ಮಾಡುತ್ತಿದೆ. 2020 ರ ಅಕ್ಟೊಂಬರ್ನಿಂದ 2021 ರ ನವೆಂಬರ್ ತಿಂಗಳ ಕೊನೆಯವರೆಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಒಟ್ಟು 56 ಚಿನ್ನದ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. ಇದರಲ್ಲಿ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತೀ ಹೆಚ್ಚಾಗಿ 11 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಮಾಗಡಿ ಪೊಲೀಸರು ಬರೊಬ್ಬರಿ 1031 ಗ್ರಾಂ ಚಿನ್ನ ವಶ ಪಡಿಸಿಕೊಂಡಿದ್ದಾರೆ.

ಒಂದು ವರ್ಷದಲ್ಲಿ 56 ಚಿನ್ನ ಕದ್ದ ಪ್ರಕರಣಗಳನ್ನು ಪತ್ತೆ ಹಚ್ಚಿದ ರಾಮನಗರ ಪೊಲೀಸ್
ಇದರೊಂದಿಗೆ ಚನ್ನಪಟ್ಟಣ ಪೂರ್ವ ಠಾಣೆಯೊಂದರಲ್ಲೆ 15 ಮಂದಿ ಕಳ್ಳರನ್ನು ಜೈಲಿಗೆ ಕಳುಹಿಸಿರುವುದು ವಿಶೇಷ. ಇದರೊಂದಿಗೆ ಹಾರೋಹಳ್ಳಿ ಹಾಗು ಸಾತನೂರು ಪೊಲೀಸ್ ಠಾಣೆಯಿಂದ ಕೇವಲ ಒಂದೊಂದು ಪ್ರಕರಣವನ್ನ ಬೇಧಿಸಿದ್ದಾರೆ. ರಾಮನಗರ ಪುರ ಠಾಣೆ, ಅಕ್ಕೂರು ಹಾಗು ಕೋಡಿಹಳ್ಳಿ ಠಾಣೆಗಳಿಂದ ಪ್ರಕರಣವೇ ಪತ್ತೆಯಾಗಿಲ್ಲ. ಅಂದಹಾಗೆ ಕಳೆದೊಂದು ವರ್ಷದಲ್ಲಿ 56 ಚಿನ್ನದ ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲು ಎನ್ನಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕುವಲ್ಲಿ ಇಡೀ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ನಮಗೆ ಇನ್ನೊಂದು ಸ್ವಲ್ಪ ದಿನ ಸಮಯ ನೀಡಿ, ಇರುವ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ಬಾಕಿ ಉಳಿದಿರುವ ಕಳ್ಳತನ ಪ್ರಕರಣಗಳನ್ನು ಆದಷ್ಟು ಶೀಘ್ರದಲ್ಲೇ ಪತ್ತೆ ಮಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ತಿಳಿಸಿದ್ದಾರೆ.
ಡಿಸೆಂಬರ್ 9 ರಂದು ಪ್ರದರ್ಶನ
ಅಂದಹಾಗೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಡಿಎಆರ್ ಗ್ರೌಂಡ್ನಲ್ಲಿ ಪೊಲೀಸ್ ಇಲಾಖೆ ಪ್ರಕರಣ ಸಂಬಂಧ ಪತ್ತೆಹಚ್ಚಿರುವ ವಸ್ತುಗಳ ಪ್ರದರ್ಶನ ಆಯೋಜಿಸಿದ್ದು, ಇಲಾಖೆ ವಶ ಪಡಿಸಿಕೊಂಡಿರುವ ಅಷ್ಟು ಪ್ರಮಾಣದ ಚಿನ್ನವನ್ನು ಪ್ರದರ್ಶನಕ್ಕಿಡಲಿದೆ. ಈ ಮೂಲಕ ಚಿನ್ನವನ್ನು ಮೂಲ ವಾರಸುದಾರರಿಗೆ ತಲುಪಿಸುವ ಕೆಲಸ ಮಾಡಲಿದೆ. ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶನ ನಡೆಯುತ್ತಿರುವುದು ಮತ್ತೊಂದು ವಿಶೇಷ.
ಎಚ್ಚರ ವಹಿಸಬೇಕು ಸಾರ್ವಜನಿಕರು
ಮನೆಯಲ್ಲಿ ಹೆಚ್ಚಿನ ಚಿನ್ನ ಇದ್ದರೆ, ಅವುಗಳನ್ನು ಬ್ಯಾಂಕ್ನಲ್ಲಿಡಿ. ಆದಷ್ಟು ಚಿನ್ನ ಪ್ರದರ್ಶನ ಕಡಿಮೆ ಮಾಡಿ, ಮನೆ ಬಿಟ್ಟು ಹೋಗುವಾಗ ಪೊಲೀಸ್ ಇಲಾಖೆ ಇಲ್ಲವೇ ಕನಿಷ್ಟ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿ ಹೋಗಿ. ಚಿನ್ನ ಕಳವಾಗಿದ್ದರೆ, ಪೊಲೀಸರೊಂದಿಗೆ ಸಹಕಾರ ನೀಡಿ, ವಿಚಾರಣೆಗೆ ಅನುಕೂಲ ಮಾಡಿಕೊಂಡಿ. ಎಲ್ಲದಕ್ಕಿಂತ ಮುಖ್ಯವಾಗಿ ಮನೆಯಲ್ಲಿ ಅನಗತ್ಯವಾಗಿ ಚಿನ್ನ ಇಡುವ ಬದಲು, ಬ್ಯಾಂಕ್ನಲ್ಲಿ ಸೇಫ್ ಆಗಿ ಇಡಿ ಎನ್ನುತ್ತಿದೆ ಪೊಲೀಸ್ ಇಲಾಖೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ