
‘ಸಿರಿ ಕನ್ನಡ’ ವಾಹಿನಿಯ 3 ಧಾರಾವಾಹಿಗಳ ತಂಡದ ಸುದ್ದಿಗೋಷ್ಠಿ
Siri Kannada: ಸಿರಿ ಕನ್ನಡ ವಾಹಿನಿಯಲ್ಲಿ ‘ಯುಗಾಂತರ’, ‘ರಜಿಯಾ ರಾಮ್’ ಮತ್ತು ‘ಮರೆತು ಹೋದವರು’ ಧಾರಾವಾಹಿಗಳು ಪ್ರಸಾರ ಆರಂಭಿಸಲಿವೆ. ಮೇ 23ರಿಂದ ಬಿತ್ತರ ಆಗಲಿರುವ ಈ ಸೀರಿಯಲ್ಗಳಲ್ಲಿ ಡಿಫರೆಂಟ್ ಕಥಾಹಂದರ ಇದೆ.
ಸೀರಿಯಲ್ ಜಗತ್ತು ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಒಂದಕ್ಕಿಂತ ಒಂದು ಭಿನ್ನವಾದ ಧಾರಾವಾಹಿಗಳನ್ನು (Kannada Serial) ಪ್ರೇಕ್ಷಕರಿಗೆ ನೀಡಲಾಗುತ್ತಿದೆ. ಈ ವಿಚಾರದಲ್ಲಿ ಎಲ್ಲ ವಾಹಿನಿಗಳ ನಡುವೆ ಪೈಪೋಟಿ ಇದೆ. ಮನೆಮಂದಿಯೆಲ್ಲ ಕುಳಿತು ನೋಡುವಂತಹ ಧಾರಾವಾಹಿಗಳನ್ನು ನಿರ್ಮಿಸಿ, ಜನ ಮೆಚ್ಚುವಂತೆ ಪ್ರಸ್ತುತ ಪಡಿಸುವುದು ಸುಲಭದ ವಿಚಾರವಲ್ಲ. ‘ಸಿರಿ ಕನ್ನಡ’ (Siri Kannada) ವಾಹಿನಿ ಕೂಡ ಹಲವು ಸೀರಿಯಲ್ಗಳನ್ನು ಪ್ರಸಾರ ಮಾಡುತ್ತಿದೆ. ಈಗಾಗಲೇ ‘ಧ್ರುವ ನಕ್ಷತ್ರ’, ‘ಪ್ರೇಮ್ ಜೊತೆ ಅಂಜಲಿ’ ಧಾರಾವಾಹಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ‘ಸಿರಿ ಕನ್ನಡ’ ವಾಹಿನಿಯು ಈಗ ಮೂರು ಹೊಸ ಸೀರಿಯಲ್ಗಳ ಪ್ರಸಾರಕ್ಕೆ ಸಿದ್ಧತೆ ನಡೆಸಿದೆ. ಈ ಮೂರೂ ಧಾರಾವಾಹಿಗಳು ಒಂದೇ ದಿನ ಪ್ರಸಾರ ಆರಂಭಿಸಲಿವೆ ಎಂಬುದು ವಿಶೇಷ. ಹೌದು, ಮೇ 23ರಂದು ‘ಯುಗಾಂತರ’, ‘ರಜಿಯಾ ರಾಮ್’, ‘ಮರೆತು ಹೋದವರು’ ಧಾರಾವಾಹಿಗಳು ಪ್ರೇಕ್ಷಕರ ಎದುರು ಬರಲಿವೆ. ಈ ಸೀರಿಯಲ್ಗಳ ಕಥೆ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದೆ. ಮೂರು ತಂಡಗಳು ಜತೆಯಾಗಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡವು. ಈ ಸೀರಿಯಲ್ಗಳ ಕಥಾಹಂದರ ಏನು ಎಂಬ ಬಗ್ಗೆ ಇಲ್ಲಿದೆ ವಿವರ..
‘ಮರೆತು ಹೋದವರು’ ಧಾರಾವಾಹಿಗೆ ಮಧುಸೂದನ್ ನಿರ್ದೇಶನ ಮಾಡುತ್ತಿದ್ದಾರೆ. ‘ಇಂದಿನ ಕಾಲದ ಯುವ ಜನರಿಗೆ ತಮ್ಮ ಸಂಬಂಧಿಕರು ಯಾರು ಎಂಬುದೇ ಸರಿಯಾಗಿ ತಿಳಿದಿರುವುದಿಲ್ಲ. ಎಷ್ಟೋ ದಿನಗಳ ಕಾಲ ಒಬ್ಬರನೊಬ್ಬರು ನೋಡಿರುವುದಿಲ್ಲ. ಸಂಬಂಧಗಳೇ ಇಲ್ಲ ಅಂದ ಮೇಲೆ ಸಂಭ್ರಮ ಇರಲು ಹೇಗೆ ಸಾಧ್ಯ? ಮರೆಯಾದ ಸಂಬಂಧಗಳನ್ನು ಒಂದುಗೂಡಿಸಿ ಮದುವೆ ಮಾಡಿಕೊಳ್ಳುವ ಆಶಯ ಈ ಸೀರಿಯಲ್ ಕಥೆಯಲ್ಲಿದೆ. ಮರೆತು ಹೋದ ಸಂಬಂಧಗಳ ಹುಡುಕಾಟವೇ ‘ಮರೆತು ಹೋದವರು’ ಧಾರಾವಾಹಿಯ ಕಥಾ ಸಾರಾಂಶ ಎಂದಿದ್ದಾರೆ ಮಧುಸೂದನ್. ನಿಖಿಲ್ ಹಾಗೂ ಸಿರಿ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ಈ ಸೀರಿಯಲ್ ಮೇ 23ರಿಂದ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.