ಬೆಂಗಳೂರು: ಇತ್ತೀಚಿಗೆ ಕೊರೊನಾಗೆ ತುತ್ತಾಗಿದ್ದ ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಡಯಾಬಿಟಿಸ್ ನಿಂದ ಹಲವು ವರ್ಷಗಳಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಇತ್ತೀಚಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇಂದು ಬೆಳಗ್ಗೆ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ಪ್ರಶಾಂತ್ ಮಾಹಿತಿ ನೀಡಿದ್ದಾರೆ. 46 ವರ್ಷದ ಪ್ರದೀಪ್ ರಾಜ್ ಪತ್ನಿ ಹಾಗು ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಪಾಂಡಿಚೆರಿಯಲ್ಲಿ ಇಂದು ಮಧ್ಯಾಹ್ನ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
2011ರಲ್ಲಿ ತೆರೆಕಂಡ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕಿರಾತಕ’ ಸಿನಿಮಾವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದರು. ಈ ಸಿನಿಮಾ ಅಂದು ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ್ದು ಯಶ್ ಹಾಗೂ ಪ್ರದೀಪ್ ರಾಜ್ಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಇನ್ನು ಕಿರಾತಕ-2 ಸಿನಿಮಾವನ್ನು ಕೂಡ ಅವರೇ ನಿರ್ದೇಶಿಸಿದ್ದು ಸದ್ಯ ರಿಲೀಸ್ಗೆ ರೆಡಿಯಿದೆ. ಪ್ರದೀಪ್ ರಾಜ್ ನಿಧನಕ್ಕೆ ಈಡೀ ಚಿತ್ರರಂಗ ಕಂಬನಿ ಮಿಡಿದಿದೆ.