ಇಂಡೋ-ವಿಂಡೀಸ್ ನಡುವೆ ಇಂದು ಅಂತಿಮ ಟಿ20 ಪಂದ್ಯ. ಒಂದೆಡೆ ಟೀಮ್ ಇಂಡಿಯಾ ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿದ್ರೆ, ಮತ್ತೊಂದೆಡೆ ಒಂದು ಪಂದ್ಯವನ್ನಾದರೂ ಗೆದ್ದು ಪ್ರವಾಸ ಮುಕ್ತಾಯಗೊಳಿಸಲು ವಿಂಡೀಸ್ ಪಣ ತೊಟ್ಟಿದೆ. ಹಾಗಾದ್ರೆ ಕೊನೆ ಟಿ20 ಕದನಕ್ಕೆ ಭಾರತ ತಂಡದಲ್ಲಿ ಆಗುವ ಬದಲಾವಣೆಗಳೇನು ನಿರೀಕ್ಷಿಸಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ, ಟಿ20 ಸರಣಿ ಗೆದ್ದಿದೆ. ಒಂದು ಪಂದ್ಯ ಬಾಕಿ ಇರುವಂತೆಯೇ 2-0 ರಲ್ಲಿ ಸರಣಿ ವಶಪಡಿಸಿಕೊಂಡಿದೆ. ಇದೀಗ ಇಂದು ನಡೆಯಲಿರುವ 3ನೇ ಟಿ20 ಪಂದ್ಯದ ಸವಾಲಿಗೆ ರೋಹಿತ್ ಪಡೆ ಸಜ್ಜಾಗ್ತಿದೆ. ಆ ಮೂಲಕ ವಿಂಡೀಸ್ ಎದುರು ಸರಣಿ ಕ್ಲೀನ್ ಸ್ವೀಪ್ ಸಾಧನೆಗೆ ಭಾರತ ಸಿದ್ಧವಾಗ್ತಿದೆ. ಅತ್ತ ವಿಂಡೀಸ್ ಕೂಡ ಅಂತಿಮ ಪಂದ್ಯವನ್ನಾದ್ರೂ ಗೆದ್ದು ಮರ್ಯಾದೆ ಉಳಿಸಿಕೊಳ್ಳಲು ಪಣ ತೊಟ್ಟಿದೆ. ಹಾಗಾಗಿ ಈ ಪಂದ್ಯ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಅಲ್ಲದೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ.
ಅಂತಿಮ ಟಿ20 ಪಂದ್ಯಕ್ಕೆ ಕೊಹ್ಲಿ, ಪಂತ್ಗೆ ವಿಶ್ರಾಂತಿ..!
ಹೌದು..! ಅಂತಿಮ ಪಂದ್ಯಕ್ಕೆ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಈಗಾಗಲೇ ಬಯೋಬಬಲ್ ತೊರೆದಿರುವ ಕೊಹ್ಲಿ ಮತ್ತು ಪಂತ್ 10 ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಒತ್ತಡ ಮತ್ತು ಮಾನಸಿಕ ಆರೋಗ್ಯ ಗಮನದಲ್ಲಿಟ್ಟುಕೊಂಡು ಎಲ್ಲ ಮಾದರಿ ಕ್ರಿಕೆಟ್ನಲ್ಲಿ ತಂಡವನ್ನು ಪ್ರತಿನಿಧಿಸುವ ಆಟಗಾರರಿಗೆ ವಿಶ್ರಾಂತಿ ನೀಡುವುದು ಬಿಸಿಸಿಐ ಉದ್ದೇಶವಾಗಿದೆ. ಹಾಗಾಗಿ ಈ ಇಬ್ಬರಿಗೆ ರೆಸ್ಟ್ ನೀಡಿದೆ.
ಋತುರಾಜ್ ಗಾಯಕ್ವಾಡ್ ಕಣಕ್ಕಿಳಿಯೋದು ಕನ್ಫರ್ಮ್..!
ತಂಡಕ್ಕೆ ಆಯ್ಕೆಯಾದ್ರೂ ಬೆಂಚ್ಗೆ ಸೀಮಿತವಾಗ್ತಿದ್ದ ಯುವ ಆಟಗಾರ ಋತುರಾಜ್ ಗಾಯಕ್ವಾಡ್, ಅಂತಿಮ ಟಿ20 ಕದನಕ್ಕೆ ಕಣಕ್ಕಿಳಿಯೋದು ಕನ್ಫರ್ಮ್ ಆಗಿದೆ. ಇಶಾನ್ ಕಿಶನ್ ವೈಫಲ್ಯ ಅನುಭವಿಸ್ತಿದ್ರೂ, ಗಾಯಕ್ವಾಡ್ಗೆ ಅವಕಾಶ ನೀಡದಿರೋದು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಾಗಿ ಈಗಾಗಲೇ ಸರಣಿ ಗೆದ್ದಿದ್ದೇವೆ. ಯುವ ಆಟಗಾರರಿಗೆ ಚಾನ್ಸ್ ನೀಡಬೇಕೆಂದು ಮ್ಯಾನೇಜ್ಮೆಂಟ್ ಚಿಂತಿಸಿದೆ.
ಗಾಯಕ್ವಾಡ್ಗೆ ಅವಕಾಶ ಸಿಗಲು ಪ್ರಮುಖ ಕಾರಣವೇನೆಂದರೆ ಕೊಹ್ಲಿ ಮತ್ತು ಪಂತ್ ವಿಶ್ರಾಂತಿ ಪಡೀತಿರೋದು. ಕೊಹ್ಲಿ ಅಲಭ್ಯತೆಯಿಂದ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆಯೋ ಸಾಧ್ಯತೆ ಇದ್ರೆ, ಪಂತ್ ಜಾಗದಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ ಎನ್ನಲಾಗ್ತಿದೆ. ಇದ್ರಿಂದ ಇಶಾನ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸೋದು ಕನ್ಫರ್ಮ್ ಎಂದೇ ಹೇಳಲಾಗ್ತಿದೆ. ಆದ್ರೆ ಆರಂಭಿಕ ರೋಹಿತ್ಗೆ ಯಾರು ಸಾಥ್ ನೀಡೋರು ಇರೋದಿಲ್ಲ. ಹಾಗಾಗಿ ಋತುರಾಜ್ಗೆ ಚಾನ್ಸ್ ನೀಡಲು ನಿರ್ಧರಿಸಲಾಗಿದೆ. ಇನ್ನ ಆಲ್ರೌಂಡರ್ ವಿಭಾಗದಲ್ಲಿ ವೆಂಕಟೇಶ್ ಅಯ್ಯರ್ ಮುಂದುವರಿಯಲಿದ್ದು, ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿದ್ದಾರೆ.
ಇವತ್ತಾದ್ರೂ ಪದಾರ್ಪಣೆ ಮಾಡ್ತಾರಾ ಆವೇಶ್ ಖಾನ್..?
ಹೌದು..! ವೇಗಿ ಆವೇಶ್ ಖಾನ್ ಕಳೆದ ಸರಣಿಗಳಿಂದ ಆಯ್ಕೆಯಾದ್ರೂ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುತ್ತಿಲ್ಲ. ಹಾಗಾಗಿ ಇವತ್ತಾದ್ರೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಕ್ರಿಕೆಟ್ ವಲಯದಲ್ಲಿ ಕೂಡ ಆವೇಶ್ಗೆ ಅವಕಾಶ ನೀಡದೇ ಇರೋದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹಾಗಾಗಿ ದೀಪಕ್ ಚಹರ್ ಬದಲಿಗೆ ಆವೇಶ್ ಖಾನ್ರನ್ನ ಕಣಕ್ಕಿಳಿಸಲು ಮುಂದಾಗಿದೆ ಮ್ಯಾನೇಜ್ಮೆಂಟ್.
ಸಾಕಷ್ಟು ಬಲಿಷ್ಠವಾಗಿದೆ ಟೀಮ್ ಇಂಡಿಯಾ ಬೌಲಿಂಗ್ ಯೂನಿಟ್
ಹೌದು..! ಟೀಮ್ ಇಂಡಿಯಾ ಬೌಲಿಂಗ್ ಯೂನಿಟ್ ಸಖತ್ ಬಲಿಷ್ಠವಾಗಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ವಿಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ. ಘಟಾನುಘಟಿ ಬ್ಯಾಟ್ಸ್ಮನ್ಗಳಿಗೇ ಭಾರತದ ಬೌಲರ್ಗಳು ಚಳ್ಳೆಹಣ್ಣು ತಿನ್ನಿಸಿದ್ದಾರೆ. ಅಲ್ಲದೆ, ಅಲ್ಪಮೊತ್ತವನ್ನೂ ಡಿಪೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ಸರಣಿಯಲ್ಲಿ ಪ್ರಸಿದ್ಧ್ ಕೃಷ್ಣ ಮಿಂಚಿದ್ರೆ, ಟಿ20 ಸರಣಿಯಲ್ಲಿ ಭುವನೇಶ್ವರ್ ಸ್ವಿಂಗ್ ವರ್ಕೌಟ್ ಆಗಿದೆ.
ಎರಡೂ ಸರಣಿಗಳಲ್ಲಿ ಯಜುವೇಂದ್ರ ಚಹಲ್ ಕೂಡ ಮ್ಯಾಜಿಕ್ ಮಾಡಿದ್ದಾರೆ. ಡೆಬ್ಯೂಟೆಂಟ್ ರವಿ ಬಿಷ್ಣೋಯ್ ಗೂಗ್ಲಿ ಸ್ಪಿನ್ ಮೂಲಕ ಗಮನ ಸೆಳೆದಿದ್ದಾರೆ. ಹರ್ಷಲ್ ಪಟೇಲ್ ಮತ್ತು ದೀಪಕ್ ಚಹರ್ ಕಳೆದ ಪಂದ್ಯದಲ್ಲಿ ಕೊಂಚ ದುಬಾರಿಯಾದ್ರೂ, ಅದ್ಭುತ ಸ್ಪೆಲ್ ಮಾಡಿದ್ದಾರೆ. ಆದ್ರೆ ಈ ಇಬ್ಬರಲ್ಲಿ ಒಬ್ಬರನ್ನ ಬೆಂಚ್ ಕಾಯ್ಸಿಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹಾಗೇ ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಅವಕಾಶ ಪಡೆಯೋ ಸಾಧ್ಯತೆ ಹೆಚ್ಚಿದೆ.
ಎಚ್ಚರ ತಪ್ಪಿದರೆ ಟೀಮ್ ಇಂಡಿಯಾಗೆ ಅಪಾಯ ಗ್ಯಾರಂಟಿ..!
ಏಕದಿನ ಮತ್ತು ಟಿ20 ಸರಣಿ ಸೋತಿರುವ ವಿಂಡೀಸ್, ಇವತ್ತಿನ ಪಂದ್ಯ ಗೆಲ್ಲಲು ಪಣ ತೊಟ್ಟಿದೆ. ಏಕದಿನ ಮತ್ತು ಟಿ20 ಸರಣಿಯಲ್ಲಿ ವಿಂಡೀಸ್ ಅದ್ಭುತ ಪ್ರದರ್ಶನವನ್ನೇ ನೀಡಿದೆ. ಆದ್ರೆ ತೀರಾ ಸಮೀಪಕ್ಕೆ ಬಂದು ಸೋಲನುಭವಿಸಿದೆ. ಇದಕ್ಕೆ ಕಾರಣ ಆಟಗಾರರಲ್ಲಿ ಇರುವ ಒತ್ತಡ. ಏಕೆಂದ್ರೆ IPL ಫ್ರಾಂಚೈಸಿಗಳು ವಿಂಡೀಸ್ ಆಟಗಾರರ ಮೇಲೆ ಕೋಟಿ ಕೋಟಿ ಬಂಡವಾಳ ಸುರಿದಿವೆ. ಹೀಗಾಗಿ ಫ್ರಾಂಚೈಸಿಗಳ ನಂಬಿಕೆ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನದಲ್ಲಿ ವಿಫಲರಾಗಿದ್ದು, ಒತ್ತಡದಲ್ಲಿ ವಿಂಡೀಸ್ ಆಟಗಾರರು ಎಡವಿದ್ದಾರೆ.
ಹಾಗಂತ ಕೊನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ, ಎಚ್ಚರ ತಪ್ಪಿರೆ ಅಪಾಯ ಗ್ಯಾರಂಟಿ. ಸ್ಪಲ್ಪ ಯಾಮಾರಿದ್ರೆ 2ನೇ ಟಿ20 ಪಂದ್ಯವನ್ನ ವಿಂಡೀಸ್ ಗೆದ್ದು ಬೀಗುತ್ತಿತ್ತು. ಬೌಲಿಂಗ್ ಬ್ಯಾಟಿಂಗ್ನಲ್ಲಿ ಆಟಗಾರರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಹಾಗಾಗಿ ಈ ಹಿಂದಿನ ಪಂದ್ಯಗಳಲ್ಲಿ ಹೇಗೆ ಗೇಮ್ ಪ್ಲಾನ್ಗಳನ್ನ ರೂಪಿಸಲಾಗಿತ್ತೋ ಅದೇ ರೀತಿ ಪ್ಲಾನ್ಗಳನ್ನ ಎಕ್ಸಿಕ್ಯೂಟ್ ಮಾಡಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ನಾಯಕ ರೋಹಿತ್ ಪಡೆ ಎಚ್ಚರಿಕೆ ಹೆಜ್ಜೆ ಇಡೋದು ಅನಿವಾರ್ಯ.