ಆಂಧ್ರಪ್ರದೇಶ: ಫೆಬ್ರವರಿ 13 ರಂದು ಆಂಧ್ರ ಪ್ರದೇಶದಲ್ಲಿ ಎರಡು ವರ್ಷದ ಮಗು ಆಕಸ್ಮಿಕವಾಗಿ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಸಾವನ್ನಪ್ಪಿದೆ. ಈ ಘಟನೆಯು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಗ್ರಾಮದಲ್ಲಿ ನಡೆದಿದೆ.
ಚಿಕಿತ್ಸೆಗಾಗಿ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಗು ಸುಟ್ಟಗಾಯಗಳಿಂದ ಸಾವಿಗೀಡಾಗಿದ್ದಾಳೆ. ಶಿವ ಮತ್ತು ಭಾನುಮತ್ ಅವರ ಪುತ್ರಿ ತೇಜಸ್ವಿ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಮನೆಯ ಮುಂದೆ ಆಟವಾಡುತ್ತಿದ್ದಳು. ಆಕೆಯ ಪೋಷಕರು ಅತಿಥಿಗಳನ್ನು ಭೇಟಿ ಮಾಡಲು ಮತ್ತು ಊಟ ಬಡಿಸಲು ಹೋದಾಗ ತೇಜಸ್ವಿ ಅಡುಗೆ ಮನೆಗೆ ಹೋದಳು ಮತ್ತು ಆಟವಾಡುವಾಗ ಅವಳು ಕುರ್ಚಿಯನ್ನು ಹತ್ತಿ ಬಿಸಿ ಸಾಂಬಾರ್ ತುಂಬಿದ ಪಾತ್ರೆಯಲ್ಲಿ ಬಿದ್ದಳು ಎನ್ನಲಾಗಿದೆ.
ಇದನ್ನು ಗಮನಿಸಿದ ದಂಪತಿಗಳು ಆಕೆಯನ್ನು ತಿರುವುರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ವೈದ್ಯರ ಶಿಫಾರಸ್ಸಿನ ಮೇಲೆ ಆಕೆಯನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಯಿತು. ಆದರೆ ಸುಟ್ಟ ಗಾಯಗಳಿಂದ ತೇಜಸ್ವಿ ಮೃತಪಟ್ಟಿದ್ದಾಳೆ. ಇನ್ನು, ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.