ಮಂಡ್ಯ: ರೈಲಿನಲ್ಲಿ ಪ್ರಯಾಣಿಸುವಾಗ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾನೆ.
ಮಂಡ್ಯ ಮೂಲದ ಅಭಿಷೇಕ್ (19) ಮೃತ ಯುವಕ. ಐದು ದಿನಗಳ ಹಿಂದೆ ಈ ಘಟನೆ ನಡೆದಿದೆ. ಉಪ್ಪಾರಪೇಟೆ, ರೈಲ್ವೆ, ಮಂಡ್ಯ ಪೊಲೀಸರ ಕಾರ್ಯಾಚರಣೆ ವೇಳೆ ಯುವಕನ ಶವ ಪತ್ತೆಯಾಗಿದೆ.
ಗಾಂಧಿನಗರದ ಬಾರ್ & ರೆಸ್ಟೋರೆಂಟ್ನಲ್ಲಿ ಸಹಾಯಕನಾಗಿ ಕೆಲಸ ಮಾಡ್ತಿದ್ದ ಅಭಿಷೇಕ್, ಊರಿಗೆ ಹೋಗಿ ಬರುವುದಾಗಿ ಹೇಳಿ ಸ್ನೇಹಿತರ ಜೊತೆ ಮಂಡ್ಯಕ್ಕೆ ಹೊರಟಿದ್ದ. ಅದರಂತೆ ನವೆಂಬರ್ 6ರ ರಾತ್ರಿ ಅಭಿಷೇಕ್ ಮತ್ತು ಆತನ ಸ್ನೇಹಿತರು ಮಂಡ್ಯಕ್ಕೆ ಹೊರಟಿದ್ದರು.
ರಾತ್ರಿ 2 ಗಂಟೆಗೆ ರೈಲಿನ ಬಾಗಿಲಿನಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಅಭಿಷೇಕ್ ಆಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದ. ಲೋಕಪಾವನಿ ನದಿಗೆ ಅಭಿಷೇಕ್ ಬಿದ್ದಿದ್ದ. ಸ್ನೇಹಿತರ ಹೇಳಿಕೆಯಂತೆ ಪೊಲೀಸರು ಅಭಿಷೇಕನ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ್ದರು.
ಆದರೆ ಕಳೆದ ಒಂದು ವಾರದಿಂದ ಸತತ ಮಳೆ ಆಗುತ್ತಿದೆ. ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ನೀರಿನ ರಭಸಕ್ಕೆ ಅಭಿಷೇಕ ಮೃತದೇಹ 6-7 ಕಿ.ಮೀವರೆಗೂ ಕೊಚ್ಚಿ ಹೋಗಿತ್ತು. ನವೆಂಬರ್ 14 ರಂದು ಶ್ರೀರಂಗಪಟ್ಟಣ ಬಳಿ ಅಭಿಷೇಕ್ ಶವ ಪತ್ತೆಯಾಗಿದೆ. ನವೆಂಬರ್ 10 ರಂದು ಉಪ್ಪಾರಪೇಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.