ರವಿಚಂದ್ರನ್ ಅಶ್ವಿನ್, ಹನುಮ ವಿಹಾರಿ.. ಈ ಇಬ್ಬರು ಆಟಗಾರರನ್ನ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯಾವ ದೃಷ್ಟಿಯಲ್ಲಿ ನೋಡ್ತಾ ಇದೆ? ಸಾಮರ್ಥ್ಯ ಪ್ರೂವ್ ಮಾಡಿದ್ರೂ ನಿರ್ಲಕ್ಷ್ಯ ಸರೀನಾ? ಈ ಎರಡು ಪ್ರಶ್ನೆಗಳು ಮತ್ತೆ ಚರ್ಚೆಯಲ್ಲಿ ಮುನ್ನೆಲೆಗೆ ಬಂದಿವೆ. ಹಾಗಾದ್ರೆ, ಈ ಇಬ್ಬರ ಭವಿಷ್ಯದ ಕತೆಯೇನು?
ಕಳೆದ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್ ಪಂದ್ಯವನ್ನ ಮರೆಯೋಕೆ ಸಾಧ್ಯವಿಲ್ಲ. 407 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ 272 ರನ್ಗಳಿಸುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ತುಳಿದಿತ್ತು. ಆಗ ಕ್ರೀಸ್ನಲ್ಲಿ ಜೊತೆಯಾದ ಆರ್.ಅಶ್ವಿನ್, ಹನುಮ ವಿಹಾರಿ ಜೋಡಿ ಆಸ್ಟ್ರೇಲಿಯಾ ವೇಗಿಗಳ ಬೆಂಕಿ ಬಿರುಗಾಳಿಯಂತಹ ಎಸೆತಗಳನ್ನ ದಿಟ್ಟ ಎದುರಿಸಿದ್ರು. ಅದರಲ್ಲಿ ಅದೆಷ್ಟೋ ಎಸೆತಗಳು ನೇರವಾಗಿ ಇಬ್ಬರ ದೇಹಕ್ಕೆ ತಗುಲಿದ್ವು. ಇಂಜುರಿ ಸಮಸ್ಯೆಯೂ ಕಾಡಿತ್ತು.
ಅಂದು ಅಷ್ಟು ನೋವಿನ ನಡುವೆಯೂ ಈ ಜೋಡಿ 40ಕ್ಕೂ ಹೆಚ್ಚು ಓವರ್ ಎದುರಿಸಿ ದಿಟ್ಟ ಹೋರಾಟ ನಡೆಸಿತ್ತು. ವಿಪರ್ಯಾಸ ಎಂಬಂತೆ ಅಂದು ಹೀಗೆ ಹೋರಾಟ ಮಾಡಿ ಡ್ರಾಗೆ ಕಾರಣವಾದ ವಿಹಾರಿ ಹಾಗೂ ಅಶ್ವಿನ್ ಈಗ ತಂಡದಲ್ಲಿ ತಮ್ಮ ಸ್ಥಾನಕ್ಕೆ ಹೋರಾಡ್ತಾ ಇದ್ದಾರೆ.
ವಿರಾಟ್ ಕೊಹ್ಲಿ ಕಮ್ಬ್ಯಾಕ್, ಹನುಮ ವಿಹಾರಿ ಡ್ರಾಪ್..!
ಜೊಹಾನ್ಸ್ ಬರ್ಗ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದ ಕಾರಣಕ್ಕೆ ಹನುಮ ವಿಹಾರಿ ಚಾನ್ಸ್ ಪಡೆದುಕೊಂಡಿದ್ರು. ಆದ್ರೆ, ಕೇಪ್ ಟೌನ್ ಟೆಸ್ಟ್ಗೆ ಕೊಹ್ಲಿ ಕಮ್ಬ್ಯಾಕ್ ಮಾಡಿದ್ದೇ ತಡ ವಿಹಾರಿ ಡ್ರಾಪ್ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಎಕ್ಸ್ ಟ್ರಾ ಪ್ಲೇಯರ್ ಆಗೇ ಗುರುತಿಸಿಕೊಂಡಿರೋ ವಿಹಾರಿ, ಖಾಯಂ ಆಟಗಾರರ ಅಲಭ್ಯತೆಯಲ್ಲಿ ಮಾತ್ರ ಸ್ಥಾನ ಪಡೀತಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿದ್ದರೂ ರಹಾನೆ, ಪೂಜಾರ ಮಾತ್ರ ಅವಕಾಶದ ಅವಕಾಶ ಪಡೀತಿದ್ದಾರೆ.
ಜಡೇಜಾ ಇದ್ದಿದ್ರೆ ಅಶ್ವಿನ್ಗೆ ಸಿಗ್ತಿತ್ತಾ ಅವಕಾಶ?
‘ಅಶ್ವಿನ್ ಸ್ಪಿನ್ ಆಲ್ರೌಂಡರ್ ಸ್ಥಾನವನ್ನ ಸಮರ್ಥವಾಗಿ ತುಂಬಬಲ್ಲರು’ ಇದು ಮೊನ್ನೆ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹೇಳಿದ ಮಾತು. ಸ್ಥಾನವನ್ನ ತುಂಬಬಲ್ಲರು ಎಂಬ ಮಾತಿನ ಅರ್ಥವೇನು? ಹಾಗಾದ್ರೆ ಅಶ್ವಿನ್ ಸಮರ್ಥ ಆಲ್ರೌಂಡರ್ ಅಲ್ವಾ? ಈ ಎರಡು ಪ್ರಶ್ನೆಗಳು ಈಗ ಹುಟ್ಟಿವೆ. ಜೊತೆಗೆ ಒಂದು ವೇಳೆ ಜಡೇಜಾ ಫಿಟ್ ಇದ್ದಿದ್ರೆ, ಇಂಗ್ಲೆಂಡ್ನಂತೆ ಅಶ್ವಿನ್ ಸೌತ್ ಆಫ್ರಿಕಾದಲ್ಲೂ ಬೆಂಚ್ ವಾರ್ಮ್ ಮಾಡ್ತಾ ಇದ್ರಾ..? ಎಂಬ ಚರ್ಚೆಗೆ ಕಾರಣವಾಗಿದೆ.
ಅಂತಿಮವಾಗಿ ಟೀಮ್ ಇಂಡಿಯಾ ಈ ಇಬ್ಬರಿಂದ ಏನನ್ನ ಬಯಸ್ತಾಯಿದೆ ಅನ್ನೋದು ಪ್ರಶ್ನೆಯಾಗಿದೆ. ಟಫ್ ಕಂಡೀಷನ್ನಲ್ಲಿ ದಿಟ್ಟ ಹೋರಾಟ ನಡೆಸಿ ವಿಹಾರಿ ಗೆದ್ದಿದ್ದಾರೆ. ಅಶ್ವಿನ್, ತಾನೆಂತ ಪ್ಲೇಯರ್ ಅಂತಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪ್ರೂವ್ ಮಾಡಿದ್ದಾರೆ. ಹಾಗಿದ್ರೂ ಈ ಇಬ್ಬರು ಕಡೆಗಣನೆಗೆ ಒಳಗಾಗುತ್ತಲೇ ಇದ್ದಾರೆ. ಈ ಬಗ್ಗೆ ಎಷ್ಟೇ ಚರ್ಚೆ ನಡೆದ್ರೂ ಉತ್ತರವೇ ಸಿಗ್ತಿಲ್ಲ.