ಬೆಂಗಳೂರು ಗ್ರಾಮಾಂತರ: ಊಟ ಖಾಲಿಯಾಗಿದೆ ಎಂದಿದ್ದಕ್ಕೆ ರೌಡಿಶೀಟರ್ ಓರ್ವ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದು ಗಂಭಿರವಾಗಿ ಗಾಯಗೊಳಿಸಿರುವ ಘಟನೆ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ರಸ್ತೆಯಲ್ಲಿನ ಶಿವಗಂಗಾ ಹೋಟೆಲ್ನಲ್ಲಿ ನಡೆದಿದೆ.
ನಿನ್ನೆ ರಾತ್ರಿ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು 10 ಗಂಟೆಯ ಸುಮಾರಿಗೆ ಹೋಟೆಲ್ಗೆ ಆಗಮಿಸಿದ ರೌಡಿಶೀಟರ್ ಯಲ್ಲಪ್ಪ ಊಟ ನೀಡುವಂತೆ ಹೇಳಿದ್ದಾನೆ. ಆಗ ಮಾಲೀಕ ಹೋಟೆಲ್ ಕ್ಲೋಸ್ ಮಾಡಲಾಗಿದ್ದು ಊಟ ಖಾಲಿಯಾಗಿದೆ ಎಂದಿದ್ದನಂತೆ. ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ನಿಂತಿದ್ದ ರೌಡಿ ಶೀಟರ್ ಊಟವಿಲ್ಲ ಎಂದಿದ್ದಕ್ಕೆ ಕುಪಿತಗೊಂಡು ಏಕಾಏಕಿ ದಾಳಿ ನಡೆಸಿ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ.
ಇನ್ನು ರೌಡಿಶೀಟರ್ ಯಲ್ಲಪ್ಪ ಕಳೆದ ಎರಡು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಗೆ ಬಂದಿದ್ದ ಎನ್ನಲಾಗಿದೆ. ಜೈಲಿನಿಂದ ಬಂದ ಕೆಲವೇ ದಿನಗಳಲ್ಲಿ ಮತ್ತೆ ಅದೇ ಹಳೇ ಚಾಳಿ ಮುಂದುವರಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.