ಶಾರುಖ್ ಖಾನ್
ಆರ್ಯನ್ ಖಾನ್ ಬಂಧನದ (Aryan Khan) ನಂತರದಲ್ಲಿ ಶಾರುಖ್ ಖಾನ್ (Shah Rukh Khan) ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಸಿನಿಮಾ ಕೆಲಸಗಳಲ್ಲಿಯೂ ಅವರು ತೊಡಗಿಕೊಳ್ಳುತ್ತಿಲ್ಲ. ಈ ಮಧ್ಯೆ ಅವರ ನಿರ್ಮಾಣದ ಸಿನಿಮಾ ಈಗ ಚಿತ್ರಮಂದಿರಕ್ಕೆ ಬರದೆ ನೇರವಾಗಿ ಒಟಿಟಿ (OTT Platform) ಮೊರೆ ಹೋಗಿರುವ ಸುದ್ದಿ ಹೊರ ಬಿದ್ದಿದೆ. ಸಾಲುಸಾಲು ಸಿನಿಮಾಗಳು ರಿಲೀಸ್ ಆಗುತ್ತಿರುವ ಈ ಸಂದರ್ಭದಲ್ಲಿ ಒಟಿಟಿ ನಿರ್ಧಾರ ಅನಿವಾರ್ಯ ಎನ್ನುವ ಅಭಿಪ್ರಾಯವನ್ನು ಶಾರುಖ್ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಯಾವುದು ಆ ಸಿನಿಮಾ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
2019ರಲ್ಲಿ ಶಾರುಖ್ ಖಾನ್ ಅವರು ತಮ್ಮ ನಿರ್ಮಾಣ ಸಂಸ್ಥೆ ‘ರೆಡ್ ಚಿಲ್ಲೀಸ್’ ಅಡಿಯಲ್ಲಿ ‘ಬಾಬ್ ಬಿಸ್ವಾಸ್’ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಭಿಷೇಕ್ ಬಚ್ಚನ್ ಸಿನಿಮಾದಲ್ಲಿ ಲೀಡ್ ರೋಲ್ ನಿರ್ವಹಿಸಿದ್ದಾರೆ. 2020ರಲ್ಲೇ ಸಿನಿಮಾ ಶೂಟಿಂಗ್ ಪೂರ್ಣಗೊಂಡಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ಮಾಡೋಕೆ ಸಾಧ್ಯವಾಗಿರಲಿಲ್ಲ. ಈಗ ಎಲ್ಲ ಕಡೆಗಳಲ್ಲೂ ಚಿತ್ರಮಂದಿರ ತೆರೆದಿದೆ. ಆದರೆ, ಸಾಲುಸಾಲು ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ಈ ಕಾರಣಕ್ಕೆ ಶಾರುಖ್ ಒಟಿಟಿ ಮೊರೆ ಹೋಗಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಜೀ5 ಜತೆ ಶಾರುಖ್ ಮಾತುಕತೆ ಮಾಡಿದ್ದಾರೆ. ಇದರ ಡೀಲ್ ಕುದುರಿದ್ದು, ಶೀಘ್ರವೇ ರಿಲೀಸ್ ದಿನಾಂಕ ಘೋಷಣೆ ಆಗಲಿದೆ. ಅಭಿಷೇಕ್ ಬಚ್ಚನ್ ಈ ಸಿನಿಮಾಗಾಗಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಚಿತ್ರಾಂಗದ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಹೇಗಿರಲಿದೆ ಎಂಬುದು ಇನ್ನೂ ಗುಟ್ಟಾಗಿದೆ.
ವಿದ್ಯಾ ಬಾಲನ್ ನಟನೆಯ ‘ಕಹಾನಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಬರುವ ಬಾಬ್ ಬಿಸ್ವಾಸ್ ಹೆಸರಿನ ಪಾತ್ರವನ್ನು ಶಾಶ್ವತ್ ಚಟರ್ಜಿ ನಿರ್ವಹಿಸಿದ್ದರು. ಇದೇ ಪಾತ್ರ ಆಧರಿಸಿ ‘ಬಾಬ್ ಬಿಸ್ವಾಸ್’ ಸಿದ್ಧಗೊಂಡಿದೆ. ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ಸಿದ್ಧವಾಗಿರುವ ಈ ಸಿನಿಮಾಗೆ ಶಾರುಖ್ ಪತ್ನಿ ಗೌರಿ ಖಾನ್, ಸುಜಯ್ ಘೋಷ್ ಮತ್ತು ಗೌರವ್ ವರ್ಮಾ ಬಂಡವಾಳ ಹೂಡಿದ್ದಾರೆ. ದಿಯಾ ಘೋಷ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ: ಎನ್ಸಿಬಿ ವಿಚಾರಣೆಯಿಂದ ತಪ್ಪಿಸಿಕೊಂಡ ಆರ್ಯನ್ ಖಾನ್; ಶಾರುಖ್ ಮಗ ಕೊಟ್ಟ ಕಾರಣ ಏನು?