ವಿಜಯನಗರ : ಸ್ಯಾಂಡಲ್ವುಡ್ಗೆ ಪವರ್ ಆಗಿದ್ದ ಅಭಿಮಾನಿಗಳ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಸುಮಾರು 2 ತಿಂಗಳು ಕಳೆದಿವೆ. ಆದರೆ ಅಪ್ಪು ಇಲ್ಲ ಅನ್ನೋ ಸತ್ಯವನ್ನು ಮಾತ್ರ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ನಮ್ಮ ಮಧ್ಯೆಯೇ ಇದ್ದಾರೆ ಎಂದು ಬದುಕುತ್ತಿದ್ದಾರೆ ಅಪ್ಪು ಅಭಿಮಾನಿಗಳು. ಹೌದು ಅಪ್ಪು ಅಭಿಮಾನಿಗಳು ದೂರದ ವಿಜಯನಗರದಿಂದ ಪುನೀತ್ ಸಮಾಧಿ ದರ್ಶನಕ್ಕೆ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.
ವಿಜಯನಗರದದಿಂದ ಸಿಲಿಕಾನ್ ಸಿಟಿಗೆ ಸುಮಾರ 280 ಕಿಮೀಗಳ ಅಂತರವಿದ್ದು ಅಪ್ಪು ಮೇಲಿನ ಅಭಿಮಾನಕ್ಕಾಗಿ ಫ್ಯಾನ್ಸ್ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಹೊಸಪೇಟೆಯ 13 ಜನ ಯುವಕರ ತಂಡದಿಂದ ಈ ಯಾತ್ರೆ ಶುರುಗೊಂಡಿದ್ದು ನಗರದ ಪುನೀತ್ ರಾಜ್ಕುಮಾರ್ ಸರ್ಕಲ್ನಿಂದ ಯಾತ್ರೆ ಆರಂಭವಾಗಿದೆ.
ಇನ್ನು ವಿಶೇಷ ಎಂಬಂತೆ ಪುನೀತ್ ರಾಜ್ಕುಮಾರ್ ಕಟ್ಟಾಭಿಮಾನಿಗಳಾಗಿರುವ ಈ ಯುವಕರು ಪ್ರತಿ ವರ್ಷ ಈ ಸಮಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ, ಶ್ರೀಶೈಲಕ್ಕೆ ಸೈಕಲ್ ಯಾತ್ರೆ ಮಾಡ್ತಿದ್ದರಂತೆ. ಆದರೆ ಹೋದ ವರ್ಷ ತಮ್ಮ ನೆಚ್ಚಿನ ನಟ ಬಾರದೂರಿಗೆ ತೆರಳಿದ್ದು ಅವರ ಸಮಾಧಿ ದರ್ಶನ ಪಡೆಯಲು ಬೆಂಗಳೂರಿಗೆ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.