
ಸೆಹ್ವಾಗ್-ಧೋನಿ
Virender Sehwag: ಸಚಿನ್ ನನ್ನ ಬಳಿ ಬಂದು ,ಇದು ನಿಮ್ಮ ಕಳಪೆ ಫಾರ್ಮ್ ಮಾತ್ರ. ಈ ಪ್ರವಾಸದ ನಂತರ ಮನೆಗೆ ಹೋಗಿ ನಂತರ ಯೋಚಿಸಿ, ಅನಂತರ ಏನು ಮಾಡಬೇಕೆಂದು ನಿರ್ಧರಿಸಿ ಎಂಬ ಸಲಹೆ ನೀಡಿದ್ದರು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಕೆಲವು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಧೋನಿ ತನ್ನ ನಾಯಕತ್ವದಲ್ಲಿ ಟೀಂ ಇಂಡಿಯಾ (Team India)ಗೆ ಅನೇಕ ದೊಡ್ಡ ಪಂದ್ಯಾವಳಿಗಳನ್ನು ಗೆದ್ದು ಟೀಮ್ ಇಂಡಿಯಾಕ್ಕೆ ಯಶಸ್ಸನ್ನು ತಂದರು. ಈ ವೇಳೆ ಹಲವು ಬಾರಿ ಹಿರಿಯ ಆಟಗಾರರನ್ನು ತಂಡದಿಂದ ಹೊರಹಾಕಿದ ಆರೋಪವೂ ಧೋನಿ ವಿರುದ್ಧ ಕೇಳಿ ಬಂದಿತ್ತು. ಇದಕ್ಕೆ ಪೂರಕವೆಂಬಂತೆ ಈಗ ಸುಮಾರು 10 ವರ್ಷಗಳ ನಂತರ, ವೀರೇಂದ್ರ ಸೆಹ್ವಾಗ್ (Virender Sehwag) ಕೂಡ ತಮ್ಮ ಮನದಾಳದ ನೋವನ್ನು ವಿವರಿಸಿದ್ದಾರೆ. ಒಂದು ಸಮಯದಲ್ಲಿ ಧೋನಿ ಮಾಡಿದ ಕೆಲಸದಿಂದ ತಾನು ನಿವೃತ್ತಿ ಘೋಷಿಸಲು ಮುಂದಾಗಿದ್ದೆ ಎಂಬ ಶಾಕಿಂಗ್ ಸತ್ಯವನ್ನ ವೀರೂ ಈಗ ಬಾಯ್ಬಿಟ್ಟಿದ್ದಾರೆ.
2007 ರಲ್ಲಿ ಧೋನಿಗೆ ಟೀಮ್ ಇಂಡಿಯಾದ ನಾಯಕತ್ವವನ್ನು ನೀಡಲಾಯಿತು. ಧೋನಿ, ಮೊದಲು ಟಿ 20 ಮತ್ತು ನಂತರ ODI ಸ್ವರೂಪದಲ್ಲಿ ನಾಯಕತ್ವವನ್ನು ವಹಿಸಿಕೊಂಡರು. ಆದರೆ, ಈ ಸಮಯದಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ವೀರೇಂದ್ರ ಸೆಹ್ವಾಗ್, ಧೋನಿಯ ಕೆಲವು ಶಿಸ್ತುಬದ್ಧ ಕ್ರಮಗಳಿಗೆ ಸಿಲುಕಿ ಒದ್ದಾಡಬೇಕಾಯಿತು. ನಾಯಕನಾದ ಬಳಿಕ ಧೋನಿ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಆರಂಭಿಸಿದರು. ಅವರ ನಿರ್ಧಾರಗಳಿಗೆ ಸೆಹ್ವಾಗ್ ಕೂಡ ಬಲಿಯಾಗಬೇಕಾಯಿತು. ಇದು ಸೆಹ್ವಾಗ್ಗೆ ಇನ್ನಿಲ್ಲದ ನೋವು ನೀಡಿತ್ತು. ಇದರಿಂದ ನೊಂದಿದ್ದ ಸೆಹ್ವಾಗ್ ODI ಸ್ವರೂಪಕ್ಕೆ ಶಾಶ್ವತವಾಗಿ ವಿದಾಯ ಹೇಳುವ ಆಲೋಚನೆಯನ್ನು ಮಾಡಿದ್ದರು.