‘ನನ್ನ ಮೇಲೆ ಹಣ ಹಾಕಬೇಡಿ’ -ಸಿಎಸ್​​ಕೆಗೆ ಧೋನಿ ಶಾಕ್​


ಐಪಿಎಲ್​​ 2022ರ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸಹ ಮಾಲೀಕ ಎನ್​​​. ಶ್ರೀನಿವಾಸನ್​ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ ಭವಿಷ್ಯದ ಕುರಿತು ಶಾಕಿಂಗ್​ ಮಾಹಿತಿಯನ್ನು ಹೊರಹಾಕಿದ್ದಾರೆ.

ಬಿಸಿಸಿಐ 2022ರ ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಗೆ ಸಿದ್ದವಾಗಿದ್ದು, ಈ ಬಾರಿಯ ಆವೃತ್ತಿಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಎರಡು ಫ್ರಾಂಚೈಸಿಗಳಿಗೆ ತಂಡವನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ಅವಕಾಶ ಮಾಡಿಕೊಡಲು ಮುಂದಾಗಿದೆ. ಅಹ್ಮದಾಬಾದ್ ಹಾಗೂ ಲಕ್ನೋ ತಂಡಗಳ ಸೇರ್ಪಡೆಯಿಂದ ಈ ಬಾರಿಯ ಐಪಿಎಲ್​​ನಲ್ಲಿ 10 ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಲಿದೆ.

ಎರಡು ಹೊಸ ತಂಡಗಳ ಸೇರ್ಪಡೆಯಿಂದ ಆಟಗಾರರಿಗೆ ಬೇಡಿಕೆಯೂ ಕೂಡ ಹೆಚ್ಚಾಗಿದ್ದು, ಫ್ರಾಂಚೈಸಿಗಳು ರಿಟೈನ್ ಮಾಡಿಕೊಳ್ಳುವ ಆಟಗಾರರ ಪಟ್ಟಿ ನೀಡಲು ಬಿಸಿಸಿಐ ಸೂಚನೆ ನೀಡಿದೆ. ಸದ್ಯ ಇರೋ 8 ತಂಡಗಳಿಗೆ ತಲಾ 4 ಆಟಗಾರರನ್ನು ರಿಟೈನ್​ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅದರಲ್ಲಿ ಮೂವರು ಭಾರತೀಯ ಆಟಗಾರರು ಹಾಗೂ ಓರ್ವ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಮಾತ್ರ ಅವಕಾಶವಿದೆ.

ಅದರಲ್ಲೂ ಚೆನ್ನೈ ಕ್ಯಾಪ್ಟನ್​ ಧೋನಿ ರಿಟೈನ್ ಮಾಡಿಕೊಳ್ಳುವ ವಿಚಾರ ಈ ಬಾರಿ ಚರ್ಚೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸನ್​, ಧೋನಿ ಬಹಳ ನ್ಯಾಯಯುತ ವ್ಯಕ್ತಿ.. ಅವರನ್ನು ಸಿಎಸ್​​ಕೆ ರಿಟೈನ್​​ ಮಾಡಿಕೊಳ್ಳಲು ಸಿಎಸ್​ಕೆ ಹೆಚ್ಚು ಹಣ ಕಳೆದುಕೊಳ್ಳಬೇಕಾದ ಕಾರಣ, ಧೋನಿ ರಿಟೈನ್​ ನೀತಿಯಿಂದ ಹೊರಬರಲು ಬಯಸಿದ್ದಾರೆ. ಆದ್ದರಿಂದಲೇ ಅವರು ಜನರಿಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದರು. ಸಿಎಸ್​​ಕೆ ತಂಡವನ್ನು ಬಿಟ್ಟು ಹೋಗುತ್ತೀರಾ ಎಂದು ಕೇಳಿದಾಗ ನಾನು ಹೋಗಿಲ್ಲ ಅಂತಾ ಹೇಳುವ ಮೂಲಕ ಎಲ್ಲವನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಐಪಿಎಲ್​ ನಿಯಮಗಳ ಅನ್ವಯ ಆಟಗಾರರನ್ನು ತಂಡವನ್ನು ರಿಟೈನ್​ ಮಾಡಿಕೊಳ್ಳಬೇಕಾದರೆ 90 ಕೋಟಿ ರೂಪಾಯಿ ವ್ಯಯಿಸಬೇಕಾಗುತ್ತದೆ. ಅದರಲ್ಲೂ 4 ಆಟಗಾರರನ್ನು ರಿಟೈನ್​ ಮಾಡಿಕೊಳ್ಳಬೇಕಾದರೆ 42 ಕೋಟಿ ರೂಪಾಯಿ, ಮೂವರು ಆಟಗಾರರಿಗೆ 33 ಕೋಟಿ ರೂಪಾಯಿ, ಇಬ್ಬರು ಆಟಗಾರರನ್ನು ರಿಟೈನ್​ ಮಾಡಿಕೊಳ್ಳಬೇಕಾದರೆ 24 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.

ಅದರಲ್ಲೂ ಸಿಎಸ್​ಕೆ ಧೋನಿರನ್ನು ರಿಟೈನ್​ ಮಾಡಿಕೊಳ್ಳಲು ಈ ಬಾರಿ ಹೆಚ್ಚುವರಿಯಾಗಿ 6 ರಿಂದ 7 ಕೋಟಿ ರೂಪಾಯಿ ನೀಡಬೇಕಾಗುತ್ತದೆ. ಧೋನಿ ಮುಂದಿನ ಮೂರು ಆವೃತ್ತಿ (2022 ರಿಂದ 2025)ಗಳನ್ನು ಆಡೋದು ಅನುಮಾನ ಆಗಿರೋ ಕಾರಣ ಅವರ ಮೇಲೆ ಅಷ್ಟೋಂದು ಹಣ ಖರ್ಚು ಮಾಡೋದು ಸಿಎಸ್​ಕೆಗೆ ಇದು ತಲೆನೋವಾಗಿತ್ತು. ಇನ್ನು ಸಿಎಸ್​ಕೆ ನಾಯಕತ್ವದ ಭವಿಷ್ಯದ ಕುರಿತು ಉತ್ತರಿಸಲು ನಿರಾಕರಿಸಿದ ಶ್ರೀನಿವಾಸನ್​, ನನಗೆ ಮುಂದೇನಾಗುತ್ತೆ ಎಂಬ ಬಗ್ಗೆ ಗೊತ್ತಿದೆ. ಆದರೆ ನಾನು ಇದಕ್ಕೆ ಈಗ ಉತ್ತರ ನೀಡಬೇಕೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಖುಷಿ ವಿಚಾರವೇ ಆಗಿದೆ ಎಂದು ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *