“2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶಕ್ಕೆ ನೈಜ ಸ್ವಾತಂತ್ರ್ಯ ಬಂದಿದ್ದು, 1947ರಲ್ಲಿ ಅಲ್ಲ” ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಕಂಗನಾಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಪಡೆಯಿರಿ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಕೇಂದ್ರಕ್ಕೆ ಒತ್ತಾಯಿಸಿ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡಿದ್ದರು. ಈ ವಿಚಾರ ತಾರಕಕ್ಕೇರುತ್ತಿದ್ದಂತೆಯೇ ಕಂಗನಾ ರಣಾವತ್ ಪದ್ಮಶ್ರೀ ಪ್ರಶಸ್ತಿ ಮರಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.
ಈ ಸಂಬಂಧ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದು ಹಾಕಿರುವ ಕಂಗನಾ ರಣಾವತ್, ನಾನು ಪದ್ಮಶ್ರೀ ಪ್ರಶಸ್ತಿ ವಾಪಸ್ಸು ನೀಡಲು ತಯಾರಿದ್ದೇನೆ. ಆದರೆ, ನನಗೆ 1947ರಲ್ಲಿ ಯಾವ ಸ್ವಾತಂತ್ರ ಸಂಗ್ರಾಮ ನಡೆಯಿತು ಎಂದು ಬಿಡಿಸಿ ಹೇಳಬೇಕು. ನನಗೆ ಗೊತ್ತಿರುವಂತೆ 1857ರ ದಂಗೆಯನ್ನು ಭಾರತೀಯ ಸ್ವಾತಂತ್ರ್ಯದ ಮೊದಲ ಸಂಗ್ರಾಮ ಎಂದು ಕರೆಯುತ್ತಾರೆ. ಈ ದೇಶಕ್ಕೆ ಸ್ವಾತಂತ್ರ ಬಂದಿದ್ದು ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ರಾಣಿ ಲಕ್ಷ್ಮೀಬಾಯಿ ನಾಯಕತ್ವದಲ್ಲಿ ಎಂದು ಬರೆದುಕೊಂಡಿದ್ದಾರೆ.
ನನಗೆ 1857ರ ದಂಗೆ ಅಂದರೆ ಭಾರತೀಯ ಸ್ವಾತಂತ್ರ್ಯದ ಮೊದಲ ಸಂಗ್ರಾಮದ ಬಗ್ಗೆ ಅರಿವಿದೆ. 1947ರಲ್ಲಿ ಏನು ನಡೀತು ಎಂಬ ಬಗ್ಗೆ ಗೊತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಂಗನಾಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿ ವಾಪಸ್ಸು ಪಡೆಯಿರಿ; ಕೇಂದ್ರದ ವಿರುದ್ಧ ಕಾಂಗ್ರೆಸ್ ಅಭಿಯಾನ