ಕಂಚಿನ ಕಾಸು ತಾಯಿ-ಮಕ್ಕಳನ್ನೇ ಅಗಲಿಸಿ ಬಿಡುತ್ತೆ ಅನ್ನೋ ಗಾದೆ ಮಾತು ಬಹುಶಃ ಎಲ್ಲ ಕೇಳಿರ್ತೀರಾ.. ಇದರ ಅರ್ಥ ಅಂದ್ರೆ ಹಣ ಹೆತ್ತವರನ್ನೂ ದೂರ ಮಾಡುತ್ತೆ ಅಂತ. ಅದು ಅಕ್ಷರಶಃ ವಿಜಯ್ಪತ್ ಸಿಂಘಾನಿಯಾ ಅವರ ಜೀವನದಲ್ಲಿ ನಡೆದು ಹೋಗಿ ಬಿಡುತ್ತೆ. ಆದ್ರೆ ರೇಮಂಡ್ನಂಥ ಅಗ್ರಗಣ್ಯ ಸಂಸ್ಥೆ ಕಟ್ಟಿ ಬೆಳೆಸಿದ ಈ ಹಿರಿ ಜೀವ ಸೋಲನ್ನ ಒಪ್ಪಿಕೊಳ್ಳಲ್ಲ.. ತನ್ನ ಮಗನ ವಿರುದ್ಧವೇ ಕೋರ್ಟ್ ಮೆಟ್ಟಿಲು ಏರಿಬಿಡ್ತಾರೆ.
ವಿಶೇಷ ಸೂಚನೆ: ಮಗನಿಂದಲೇ ಬೀದಿಗೆ ಬಿದ್ದ ಶತಕೋಟಿ ಒಡೆಯ ವಿಜಯಪತ್ ಸಿಂಘಾನಿಯಾ ಕುರಿತ ಭಾಗ-1 ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ. ಭಾಗ-1: ಮಗನಿಂದಲೇ ಬೀದಿಗೆ ಬಿದ್ದ ಶತ ಕೋಟಿ ಒಡೆಯ; ರೇಮಂಡ್ ಸಂಸ್ಥಾಪಕನ ಜೀವನ ಹೇಗಿತ್ತು?
ಅನಿವಾರ್ಯವಾಗಿ ಕೋರ್ಟಿನಲ್ಲಿ ಮಗನ ವಿರುದ್ಧನೇ ಅರ್ಜಿ ಸಲ್ಲಿಸುತ್ತಾರೆ. ಮುಂಬೈನ ಮಲಬಾರ್ ಹಿಲ್ ನಲ್ಲಿರುವ 36 ಅಂತಸ್ತಿನ ಜೆಕೆ ಹೌಸ್ ನಲ್ಲಿ ಒಂದು ಡುಫ್ಲೆಕ್ಸ್ ಮನೆ, ಕಾರು ಹಾಗೂ ಪ್ರತಿ ತಿಂಗಳು 7 ಲಕ್ಷ ರುಪಾಯಿ ಹಣವನ್ನು ಕೊಡಿಸುವಂತೆ ಕೋರಿ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ರು.

ಮಗನಿಗೆ ಆಸ್ತಿ ಬರೆದುಕೊಟ್ಟು 2018 ರಲ್ಲಿ ಮನೆಯಿಂದ ಹೊರ ಬಿದ್ದಿದ್ದ ವಿಜಯಪತ್ ಮುಂದೆ ಕೋರ್ಟ್ ಹೋರಾಟದ ಜೊತೆಗೆ ಈಗ ಪುಸ್ತಕವನ್ನೂ ಬರೆದಿದ್ದಾರೆ. ವಿಪರ್ಯಾಸ ಅಂದ್ರೆ ದಿ ಕಂಪ್ಲೀಟ್ ಮ್ಯಾನ್ ಅಂತಾ ಸಂಸ್ಥೆ ಕಟ್ಟಿದ ಆ ಹಿರಿಜೀವ, ಈಗ ದಿ ಇನ್ಕಂಪ್ಲೀಟ್ ಲೈಫ್ ಅನ್ನೋ ಹೆಸರಿನಲ್ಲಿ ಪುಸ್ತಕಬರೆಯುವಂತಾ ಆಗುತ್ತೆ. ಆ ಪುಸ್ತಕದಲ್ಲಿ ತಾನು ಕಟ್ಟಿದ್ದ ಸಾಮ್ರಾಜ್ಯಕ್ಕೆ ಯಾರು ವಾರಸುದಾರ ಆಗ್ಬೇಕು ಅನ್ನೋದನ್ನ ವಿವರಿಸುತ್ತಾರೆ. ಹಾಗಾದ್ರೆ ವಿಜಯ್ಪತ್ ಬರೆದ ಪುಸ್ತಕದಲ್ಲಿ ಏನಿದೆ..?
ಕಣ್ಣೀರೂ ಕಟ್ಟಿಸುವಂಥ ವಾಸ್ತವ ತೆರೆದಿಟ್ಟ ಪುಸ್ತಕ
ತಮ್ಮ ಈ ಇಳಿವಯಸ್ಸಿನಲ್ಲಿ ವಿಜಯ್ಪತ್ ಸಿಂಘಾನಿಯ ತಮ್ಮ ಜೀವನದ ನೋವು ನಲಿವುಗಳ ಬಗ್ಗೆ ಪುಸ್ತಕವನ್ನ ಬರೆದಿದ್ದಾರೆ.. ಆ ಪುಸ್ತಕದಲ್ಲಿ ಕೋಟಿ ಕೋಟಿ ಮಾಡಿಟ್ಟ ಮೇಲೆ ಮಕ್ಕಳ ವಿಚಾರದಲ್ಲಿ ಜೋಪಾನವಾಗಿರಬೇಕು ಅನ್ನೋದನ್ನ ಸಾರಿ ಹೇಳಿದ್ದಾರೆ..
ನಾನು ಯಾವ ಆಸ್ತಿಗಾಗಿ ಹೋರಾಡುತ್ತಿದ್ದೇನೋ, ಆ ಆಸ್ತಿಯ ಮೇಲೆ ನನಗೆ ಹಕ್ಕಿದೆ. ಕಾನೂನಿನ ಪ್ರಕಾರ ಯಾವ್ಯಾವ ದಾಖಲೆಗಳು ಬೇಕು ಅವೆಲ್ಲವೂ ಇದೆ. ಆದ್ರೆ, ಅದಕ್ಕೆಲ್ಲಾ ಅವನು ಬೆಲೆ ಕೊಡ್ತಿಲ್ಲ. ನಾನು ಕಟ್ಟಿದ ಸಂಸ್ಥೆಯನ್ನು ನನ್ನ ಮೂರ್ಖತನದಿಂದ ಅವನಿಗೆ ಉಡುಗೊರೆಯಾಗಿ ನೀಡಿದೆ. 2015ರ ಫೆಬ್ರವರಿ 8ರಂದು ನನ್ನ ಜೀವನದಲ್ಲಿ ಏನೇನು ಸಂಪಾದನೆ ಮಾಡಿದ್ನೋ ಎಲ್ಲವನ್ನೂ ಕೊಟ್ಟೆ. ಆದರೆ, ನಾನು ಅಂದುಕೊಂಡಿದ್ದಂತಹ ಹುಡುಗ ಅವನಾಗಿ ಉಳಿದಿಲ್ಲ. ಇರಲಿ ಎಲ್ಲರೂ ವಿಧಿ ನಡೆಸಿದಂತೆ ನಡೆಯಬೇಕಷ್ಟೇ –ವಿಜಯ್ ಸಿಂಘಾನಿಯ, ರೇಮಂಡ್ ಮಾಜಿ ಛೇರ್ಮನ್
ಇಳಿ ವಯಸ್ಸಿನಲ್ಲಿ ಇವರಾಡ್ತಿರೋ ಮಾತುಗಳನ್ನ ಕೇಳ್ತಿದ್ರೆ, ಎಂತಹ ಕಟುಹೃದಯಕ್ಕೂ ಕರುಣೆ ಬಾರದೇ ಇರದು.. ಅದ್ರಲ್ಲೂ, ವಸ್ತ್ರ ವ್ಯಾಪಾರದಲ್ಲಿ ಕ್ರಾಂತಿ ಮಾಡಿದ ರೇಮಂಡ್ ಗ್ರೂಪ್ನ ಮಾಜಿ ಛೇರ್ಮನ್ ಎಲ್ಲರೂ ವಿಧಿ ನಡೆಸಿದಂತೆ ನಡೆಯಬೇಕು ಅಂತಿದ್ರೆ, ಕರಳು ಹಿಂಡಿದಂತಾಗುತ್ತದೆ.. ಅಷ್ಟಕ್ಕೂ ವಿಜಯ್ಪತ್ ಸಿಂಘನಿಯ ಈ ಮಾತುಗಳನ್ನ ಆಡಿದ್ದು, ಈಗಲ್ಲ.. 4 ವರ್ಷಗಳ ಹಿಂದೆ..
ವರ್ಷಗಳಿಂದಲೂ ಅಪ್ಪ–ಮಗನ ನಡುವೆ ಆಸ್ತಿ ಕಲಹ
ಮಗನ ವಿರುದ್ಧ ಕಾನೂನು ಸಮರ ನಿಲ್ಲಿಸದ ಸಿಂಘಾನಿಯ
ನಿಮಗೊಂದು ವಿಷ್ಯ ಗೊತ್ತಿರಲಿ, ವಿಜಯ್ ಸಿಂಘಾನಿಯ ಹಾಗೂ ಮಗನ ನಡುವೆ ಬರೋಬ್ಬರಿ 5 ವರ್ಷಗಳಿಂದ ಆಸ್ತಿ ವಿಚಾರವಾಗಿ ಕಲಹ ನಡೀತಾನೇ ಇದೆ. ಇವತ್ತು, ವಿಜಯ್ ಸಿಂಘಾನಿಯ ಅವರ ಪರಿಸ್ಥಿತಿ ಹೇಗಿದೆ ಅಂದ್ರೆ, ಒಂದೊಂದು ಪೈಸೆ ಪೈಸೆಗೂ ಯೋಚನೆ ಮಾಡಬೇಕಾಗಿದೆ. ಒಂದು ಕಾಲದಲ್ಲಿ ವಿಜಯಪತ್ ಸಿಂಘಾನಿಯ ಅವರ ವೈಭೋಗ ಹೇಗಿತ್ತು ಗೊತ್ತಾ? ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರಿಗಿಂತಲೂ ಸಿಂಘಾನಿಯಾ ಸಿರಿವಂತರಾಗಿದ್ರು. ಆದ್ರೆ, ಯಾವಾಗ ಮಗನಿಗೆ ತಮ್ಮ ರೇಮಂಡ್ ಸಂಸ್ಥೆಯ ಬಹುಪಾಲು ಶೇರ್ ಬಿಟ್ಟುಕಟ್ರೋ, ಅಲ್ಲಿಂದ ಅವರ ಟೈಮ್ ಕೆಟ್ ಹೋಯ್ತು.. ಚಿನ್ನದ ತಟ್ಟೆಯಲ್ಲಿ ಊಟ ಮಾಡೋ ತಾಕತ್ ಇದ್ದ ಕುಬೇರ, ಇವತ್ತು ಸಣ್ಣ ಕೋಣೆಯಲ್ಲಿ ಮಲಗೋ ಹಾಗಾಯ್ತು.. ರೇಮಂಡ್ ದಿ ಕಂಪ್ಲೀಟ್ ಮ್ಯಾನ್ ಅನ್ನೋ ಸಾಮ್ರಾಜ್ಯ ಕಟ್ಟಿ ಮೆರೆದವರು An Incomplete Life ಅನ್ನೋ ಹಾಗಾಯ್ತು…
ಜೀವನದ ನೋವು–ನಲಿವುಗಳ ಪುಸ್ತಕ ಬರೆದ ಸಿಂಘನಿಯ
ಕೊನೆಗೂ ‘ಌನ್ ಇನ್ಕಂಪ್ಲೀಟ್ ಲೈಫ್’ ಬುಕ್ ರಿಲೀಸ್
ವಿಜಯ್ಪತ್ ಸಿಂಘಾನಿಯ ತಮ್ಮ ಜೀವನದಲ್ಲಿ ಮಕ್ಕಳಿಂದ ಸಾಕಷ್ಟು ನೋವುಂಡವರು. ರೇಮಂಡ್ ಎಂಬ ಸಂಸ್ಥೆಯನ್ನ ಕಟ್ಟಿ ಬೆಳೆಸಿ ಜಗತ್ವಿಖ್ಯಾತಿಗಳಿಸಲು ಕಾರಣರಾದ ಅವರಿಗೆ, ಈ ಗತಿ ಬರಬಾರದಿತ್ತು ಅನ್ನೋದು ಹಲವರ ಕೊರಗು. ಆದ್ರೆ, ವಿಜಯ ಸಿಂಘಾನಿಯ ಅವರು ತಾವು ಮಾಡಿದ ಸಾಧನೆ, ಅನುಭವಿಸಿದ ನರಕ ಹಾಗೂ ಕಳೆದ ಸಂತೋಷದ ಕ್ಷಣಗಳನ್ನ ಮನೆ ಮನೆಗೂ ತಲುಪಿಸಲು ಮುಂದಾಗಿದ್ದಾರೆ. ತಮ್ಮ ಆತ್ಮಕಥನ An Incomplete Life ಅನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಮ್ಮ ಜೀವನದ ಬಗೆಗಿನ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ..
ವಿಜಯಪತ್ ಅವರು ತಮ್ಮ ಪರಿವಾರದಲ್ಲಿ ಆಸ್ತಿಯ ವಿಚಾರವಾಗಿ ನಡೆದ ಬಿರುಕಿನ ಬಗ್ಗೆಯೂ ಸಹ ಆ ಪುಸ್ತಕದಲ್ಲಿ ಬರೆದಿದ್ದಾರೆ. ಆದ್ರೆ, ಪುಸ್ತಕ ರಿಲೀಸ್ ಆಗಬಾರದು ಅಂತಲೂ ತಂದೆಯ ವಿರುದ್ಧ ಗೌತಮ್ ಸಿಂಘನಿಯ ಕೋರ್ಟ್ ಮೆಟ್ಟಿಲೇರಿದ್ದು ತುಂಬಾ ಜನರಿಗೆ ಗೊತ್ತಿಲ್ಲ
ತಮ್ಮ ಜೀವನದ ಬಗ್ಗೆ ವಿಜಯ್ಪತ್ ಆತ್ಮಕಥನ ಸಿದ್ಧಪಡಿಸಿದ್ದಾರೆ. ಪುಸ್ತಕಕ್ಕೆ ಌನ್ ಇನ್ಕಂಪ್ಲೀಟ್ ಲೈಫ್ ಅಂತಾ ಹೆಸರಿಡಲಾಗಿದ್ದು, ಪುಸ್ತಕ ಬಿಡುಗಡೆ ವಿರುದ್ಧ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಜಯ್ಪತ್ ವಿರುದ್ಧ ರೇಮಂಡ್ ಸಂಸ್ಥೆಯೇ ಕೋರ್ಟ್ ಮೆಟ್ಟಿಲೇರಿತ್ತು. ಪುಸ್ತಕದಲ್ಲಿ ಸತ್ಯವನ್ನು ಮರೆಮಾಚಲಾಗಿದ್ದು, ಹಲವು ಸುಳ್ಳುಗಳನ್ನು ಪ್ರಸ್ತುತಪಡಿಸಲಾಗಿದೆ ಅಂತಾ ನ್ಯಾಯಲಯದಲ್ಲಿ ವಾದಿಸಲಾಗಿತ್ತು. ಬಾಂಬೆ ಹೈಕೋರ್ಟ್ನಲ್ಲಿ ಕೇಸ್ನ ವಿಚಾರಣೆ ನಡೆದಿದ್ದು, ವಾದ ಪ್ರತಿವಾದ ಆಲಿಸಿದ ನ್ಯಾಯಲಯ ಪುಸ್ತಕ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ವಿಜಯಪತ್ ಪುಸ್ತಕ ಬಿಡುಗಡೆಗೆ ಯಾವುದೇ ತಕರಾರಿಲ್ಲ ಎಂದಿದೆ. ಇನ್ನು, ನ್ಯಾಯಾಲಯದಿಂದ ಆದೇಶ ಹೊರಬೀಳುತ್ತಿದ್ದಂತೆ ವಿಜಯ್ಪತ್ ಪುಸ್ತಕ ಕೊಂಡುಕೊಳ್ಳಲು ನಮ್ಮಲ್ಲಿ ಲಭ್ಯವಿದೆ ಅಂತಾ ಮ್ಯಾಕ್ಮಿಲನ್ ಪಬ್ಲಿಷರ್ಸ್ ಹೇಳಿದ್ದಾರೆ.
ಪೋಷಕರಿಗೆ ನೊಂದ ಹಿರಿಜೀವ ಹೇಳಿದ ಕಿವಿಮಾತೇನು?
ಮಕ್ಕಳಿಗೆ ಎಂದೆಂದಿಗೂ ಆಸ್ತಿ ಮಾಡಿ ಕೊಡಬೇಡಿ
ಇಷ್ಟೆಲ್ಲಾ, ಬೆಳವಣಿಗೆಗಳಿಂದ ನೊಂದು ಹೋಗಿರುವ ಹಿರಿಜೀವ ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಎಲ್ಲಾ ಪೋಷಕರಿಗೊಂದು ಕಿವಿಮಾತು ಹೇಳಿದ್ದಾರೆ.. ಯಾವಾಗ ತಮ್ಮ ಮಕ್ಕಳಿಂದ ಇವರು ಪಡಬಾರದ ಚಿತ್ರಹಿಂಸೆ ಪಟ್ಟರೋ, ಪೋಷಕರು ಆಸ್ತಿ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಅಂತಾ ಸಿಂಘಾನಿಯಾ ಹೇಳಿದ್ದಾರೆ. ಮಕ್ಕಳಿಗೆ ಎಂದೆಂದಿಗೂ ಆಸ್ತಿ ಮಾಡಿ ಕೊಡಬೇಡಿ ಎಂದಿದ್ದಾರೆ. ಅಲ್ಲದೇ, ಮಕ್ಕಳಿಗೆ ಒಳ್ಳೆದಾಗಲೆಂದು ಆಸ್ತಿ ಮಾಡಿಕೊಟ್ಟ ನಾನು ಜೀವನದಲ್ಲಿ ತುಂಬಾ ಪಾಠ ಕಲಿತಿದ್ದೇನೆ ಅಂತಾ ಅವಲತ್ತುಕೊಂಡಿದ್ದಾರೆ.
ಯಾವುದೇ ಪೋಷಕರು ಜೀವಂತ ಇರುವಾಗಲೇ ಮಕ್ಕಳ ಹೆಸರಿಗೆ ತಮ್ಮ ಆಸ್ತಿ ಮಾಡವಾಗ ಕೇರ್ಫುಲ್ ಆಗಿರಬೇಕು.. ಇಲ್ಲವೇ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ ಅನ್ನೋದು ವಿಜಯ್ಪತ್ರವರ ಮಾತಿನ ಅರ್ಥವಾಗಿದೆ. ಯಾವುದೇ ತಂದೆ, ತಾಯಿ ಕೂಡ ನನ್ನಂತೆ ಕೋರ್ಟ್ ಕಟಕಟೆ ಅಲೆಯಬಾರದು ಅಂತಾ ಡೈರೆಕ್ಟಾಗಿ ಮಕ್ಕಳಿಂದಾದ ಅನ್ಯಾಯದ ಬಗ್ಗೆ ವಿಜಯ್ಪತ್ ಅಳಲು ತೋಡಿಕೊಂಡಿದ್ದಾರೆ.
ವಿಜಯ್ಪತ್ರವರ ಈ ಮಾತುಗಳನ್ನ ಕೇಳ್ತಿದ್ರೆ ಎಂತಹವರಿಗೇ ಆದ್ರೂ ಹೃದಯ ಭಾರವಾಗುತ್ತೆ, ಯಾಕಂದ್ರೆ, ಸಕಲವನ್ನೂ ಮಕ್ಕಳಿಗಾಗಿ ಧಾರೆ ಎರೆದ ವಿಜಯ್ಪತ್ರವರ ಸ್ಥಿತಿ ದಯನೀಯವಾಗಿದೆ. ರೇಮಂಡ್ ಒಡೆಯನಿಗೆ ಇಂದು ತಾನು ಕಟ್ಟಿದ ಕಚೇರಿಗೆ ಕಾಲು ಇಡೋಕೆ ಆಗ್ತಿಲ್ಲ…ಅಲ್ಲಿರುವ ಯಾವುದೇ ಡಾಕ್ಯೂಮೆಂಟ್ಸ್ ನೋಡಲಾಗ್ತಿಲ್ಲ.. ಹುಟ್ಟು ಬಟ್ಟೆಯಲ್ಲಿ ಮನೆಬಿಟ್ಟು ಬಂದ ಇವರು, ತಮ್ಮ ಸ್ವಂತ ಕಾರನ್ನೂ ತರಲಾಗ್ಲಿಲ್ಲ. ಇನ್ನು, ವಿದೇಶದಲ್ಲಿರುವ ವಿಜಯ್ಪತ್ರವರ ಆಸ್ತಿ ಮೇಲೆಯೂ ಯಾವುದೇ ಹಕ್ಕಿಲ್ಲದಂತೆ ಮಾಡಿಬಿಟ್ಟಿದ್ದಾನೆ ಪಾಪಿ ಮಗ.
ಅಪ್ಪನ ಎಲ್ಲಾ ಆಸ್ತಿ ಅಂತಸ್ತು ಕಿತ್ತುಕೊಂಡ ಮಗ, ಈ ಇಳಿವಯಸ್ಸಿನಲ್ಲಿ ಇವರ ಆರೋಗ್ಯದ ಮೇಲೂ ಕರುಣೆ ತೋರ್ತಿಲ್ಲ. ಅನ್ನ ಹಾಕೋದು ಬಿಡಿ, ಕೋರ್ಟು ಕಟಕಟೆ ಅಂತಾ ಇವರನ್ನ ಸುತ್ತಾಡಿಸುತ್ತಿರೋದು ನೋಡಿದ್ರೆ ಎಂತಹ ನೀಚನಪ್ಪ ಅಂತಾ ಅನಿಸದೇ ಇರೋದಿಲ್ಲ.. ಅದೇನೇ ಇರಲಿ, ಒಂದು ಕಾಲದಲ್ಲಿ ರಾಜನಂತೆ ಮೆರೆದು, ಹೆತ್ತ ಮಕ್ಕಳೂ ಅದೇ ರೀತಿ ಬಾಳಬೇಕೆಂದು ಆಸೆಪಟ್ಟು ಆಸ್ತಿ ಕೊಟ್ಟ ವಿಜಯ್ಪತ್ ಇವತ್ತು ಅಕ್ಷರಶಃ ದಿಕ್ಕು ದೆಸೆಯಿಲ್ಲದವರಂತಾಗಿದ್ದಾರೆ..ಇವರ ಈ ಪರಿಸ್ಥಿತಿ ನೋಡಿದ ಹಲವರಿಗೆ ಯಾಕ್ ಬೇಕಪ್ಪಾ ಮಕ್ಕಳು ಅಂತಾ ಅನಿಸೋಕೆ ಶುರುವಾಗಿದೆ.
ಜಗತ್ತಿನಲ್ಲಿರೋ ಎಲ್ಲಾ ಪೋಷಕರು ಮಕ್ಕಳನ್ನ ದ್ವೇಷಿಸೋದಿಲ್ಲ.. ಎಲ್ಲಾ ಮಕ್ಕಳು ತಂದೆ ತಾಯಿಯ ಆಸ್ತಿಗೆ ಆಸೆ ಪಡೋದಿಲ್ಲ. ಆದ್ರೆ, ವಿಜಯ್ಪತ್ ಪುತ್ರ ಗೌತಮ್ರಂತಹ ಕ್ರಿಮಿಗಳು ಅಲ್ಲಲ್ಲಿ ಇರೋದರ ಬಗ್ಗೆ ನಾವು ಹಲವು ತೋರಿಸಿದ್ದೇವೆ. ಬಟ್… ಸಿರಿತನದ ಪಲ್ಲಕ್ಕಿಯಲ್ಲೇ ಮಕ್ಕಳನ್ನು ಬೆಳೆಸಿದ ಒಬ್ಬ ಧೀಮಂತ ಉದ್ಯಮಿಗೆ ಈ ಗತಿ ಬಂದಿರೋದು ನಿಜಕ್ಕೂ ದುರಂತ ಅಲ್ಲವೇ?
ಇದನ್ನೂ ಓದಿ: ಭಾಗ-1: ಮಗನಿಂದಲೇ ಬೀದಿಗೆ ಬಿದ್ದ ಶತ ಕೋಟಿ ಒಡೆಯ; ರೇಮಂಡ್ ಸಂಸ್ಥಾಪಕನ ಜೀವನ ಹೇಗಿತ್ತು?
The post ಪಾರ್ಟ್-2: ಸಿಂಘಾನಿಯಾಗೆ ಪುತ್ರನೇ ವಿಲನ್; ಇಳಿವಯಸ್ಸಿನಲ್ಲಿ ಯಾರಿಗೂ ಬೇಡ ಇಂಥ ಹೋರಾಟ appeared first on News First Kannada.