ಬೆಂಗಳೂರು: ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಇಂದಿಗೆ 9 ದಿನಗಳು ಕಳೆದಿದೆ. ಅಪ್ಪು ಅಕಾಲಿಕವಾಗಿ ನಮ್ಮಿಂದ ದೂರವಾದ ನೋವು ಇನ್ನು ಕಾಡುತ್ತಲೇ ಇದೆ. ಈ ನಡುವೆ ರಾಜ್ ಕುಟುಂಬಸ್ಥರಿಗೆ ಸಂತ್ವಾನ ಹೇಳಿ, ಧೈರ್ಯ ತುಂಬುವ ಕಾರ್ಯವನ್ನು ಹಲವು ಹಿರಿಯ ನಟರು, ಕಲಾವಿದರು ಮಾಡುತ್ತಿದ್ದಾರೆ. ಇಂದು ಪಂಚ ಭಾಷಾ ನಟಿ ಪ್ರಿಯಾಮಣಿ ಹಾಗೂ ಡಾ.ರಾಜ್ ಅವರೊಂದಿಗೆ ನಟಿಸಿದ್ದ ಹಿರಿಯ ನಟಿ ಗೀತಾ ಅವರು ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದರು.
ಪತಿಯೊಂದಿಗೆ ಪುನೀತ್ ನಿವಾಸಕ್ಕೆ ಆಗಮಿಸಿದ್ದ ಪ್ರಿಯಾಮಣಿ ಅವರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಈ ವೇಳೆ ಹಿರಿಯ ನಟಿ ಗೀತಾ ಅವರು ಕೂಡ ಅವರೊಂದಿಗಿದ್ದರು. ಅಂದಹಾಗೇ ಪ್ರಿಯಾಮಣಿ ಅವರು ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್ಕುಮಾರ್ ಅವರ ರಾಮ್ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಅಣ್ಣಾ ಬಾಂಡ್ ಸಿನಿಮಾದಲ್ಲಿ ಮತ್ತೆ ಎರಡನೇ ಬಾರಿ ನಟನೆ ಮಾಡಿದ್ದರು. ಇನ್ನು ಪ್ರಿಯಾಮಣಿ ಅವರು ಆಗಮಿಸಿದ್ದ ಕಾರಣ ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಕೂಡ ಅಪ್ಪು ನಿವಾಸಕ್ಕೆ ಆಗಮಿಸಿದ್ದರು. ಆ ಬಳಿಕ ಮನೆಯಿಂದ ಹೊರಟ ಪ್ರಿಯಾಮಣಿ ಅವರು, ಮಾತನಾಡಲು ಮನಸ್ಸಿಲ್ಲ ಎಂದು ಹೇಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಕಣ್ಣಲ್ಲಿ ನೀರು ತುಂಬಿಕೊಂಡು ತೆರಳಿದರು.