ಟೀಮ್ ಇಂಡಿಯಾದಲ್ಲಿ ಒಂದೊಂದು ಸ್ಥಾನಕ್ಕಾಗಿ ನೇರಾನೇರ ಪೈಪೋಟಿ ಏರ್ಪಟ್ಟಿದೆ. ಇಷ್ಟಿದ್ದರೂ ತಂಡದಲ್ಲಿ ಫಿಟ್ನೆಸ್ ಸಮಸ್ಯೆ ಎದುರಿಸ್ತಿರೋ ಆಟಗಾರರಿಗೆ, ಸ್ಥಾನ ನೀಡಲಾಗ್ತಿದೆ. ಇದು ಪ್ರತಿಭಾನ್ವಿತ ಆಟಗಾರರಿಗೆ ಮಾಡ್ತಿರುವ ಮೋಸ ಅಂತ, ಮಾಜಿ ಸೆಲೆಕ್ಟರ್ ಗುಡುಗಿದ್ದಾರೆ. ಹಾಗೇ ಫಿಟ್ನೆಸ್ ವಿಷಯದಲ್ಲಿ ಆಟಗಾರನನೊಬ್ಬ ಮಾಡ್ತಿರುವ ಮೋಸದ ಗುಟ್ಟೊಂದನ್ನೂ, ಬಹಿರಂಗಪಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ.. ಟೀಮ್ ಇಂಡಿಯಾದ ಗ್ರೇಟ್ ಆಲ್ರೌಂಡರ್. ಇದು ಎರಡು ವರ್ಷಗಳ ಹಿಂದಿನ ಮಾತು. ಆದರೀಗ ಪ್ರತಿ ಸರಣಿ-ಟೂರ್ನಿಗಳಲ್ಲೂ ಹಾರ್ದಿಕ್ಗೆ ಕಾಡ್ತಿದೆ ಫಿಟ್ನೆಸ್ ಸಮಸ್ಯೆ. ಬೌಲಿಂಗ್ ಮಾಡೋದಕ್ಕೂ ಅನ್ಫಿಟ್, ಬ್ಯಾಟಿಂಗ್ನಲ್ಲೂ ಫೆಲ್ಯೂರ್..! ಹೀಗಾಗಿ ಬರೋಡಾ ಸ್ಟಾರ್ ಫಿಟ್ನೆಸ್ ಬಗ್ಗೆ, ಆರೋಪಗಳ ಮೇಲೆ ಆರೋಪಗಳು ಎದ್ದಿದ್ವು. ಇದೀಗ ಈ ಆಲ್ರೌಂಡರ್ ಮೇಲೆ ಮತ್ತೊಂದು ದೊಡ್ಡ ಆರೋಪ ಬಂದಿದೆ.
ಸದ್ಯ ಹಾರ್ದಿಕ್ ಮೇಲೆ ಆರೋಪ ಮಾಡಿರೋದು, ಮಾಜಿ ಸೆಲೆಕ್ಟರ್ ಸರಣ್ದೀಪ್ ಸಿಂಗ್.! IPL, T20 ವಿಶ್ವಕಪ್ನಲ್ಲಿ ಬೌಲ್ ಮಾಡದ ಈ ಮಧ್ಯಮ ವೇಗಿ, ಪಾಕ್ ವಿರುದ್ಧದ ಪಂದ್ಯದಲ್ಲಿ ಭುಜದ ನೋವಿಗೆ ತುತ್ತಾದ್ರು. ಹಾರ್ದಿಕ್ ಇನ್ನು ಫಿಟ್ ಆಗಿಲ್ಲ ಅನ್ನೋದನ್ನ ಇದು ಸೂಚಿಸ್ತಿದೆ. ಹೀಗಾಗಿ ಸರಣ್ದೀಪ್, ಸೆಲೆಕ್ಷನ್ ಕಮಿಟಿ ಮತ್ತು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಗುಡುಗಿದ್ದಾರೆ. ಮನಸ್ಸಿಗೆ ಬಂದಂತೆ ಆಟಗಾರರ ಆಯ್ಕೆ ಮಾಡಲಾಗ್ತಿದೆ ಅಂತಾನೂ ಕಿಡಿಕಾರಿದ್ದಾರೆ.
‘ಆಯ್ಕೆ ಸಮಿತಿ ನಿರ್ಧಾರ ಪ್ರಶ್ನಿಸುವಂತಿದೆ’
‘ಹಾರ್ದಿಕ್ ಫಿಟ್ನೆಸ್ ಸಮಸ್ಯೆ ಬಗ್ಗೆ ಚರ್ಚೆ ನಡೀತಿದ್ದು, ಈ ಕುರಿತು ಆಯ್ಕೆ ಸಮಿತಿಯನ್ನ ಪ್ರಶ್ನಿಸಬೇಕಾಗಿದೆ. ಹಾರ್ದಿಕ್ ಸಂಪೂರ್ಣ ಫಿಟ್ ಅಂತ ಆಯ್ಕೆ ಸಮಿತಿಯ ಅಧ್ಯಕ್ಷರು ಹೇಳಿದ್ರು. ಇದೀಗ ಫಿಟ್ನೆಸ್ ಎಲ್ಲಿದೆ ಎಂದು ಪ್ರಶ್ನಿಸುವಂತಾಗಿದೆ. ಸೆಲೆಕ್ಷನ್ ಕಮಿಟಿ ಏನಾದ್ರು ಹೇಳಲಿ, ಪಾಂಡ್ಯ ಬೌಲಿಂಗ್ ಮಾಡೋದಕ್ಕೆ ಅನ್ಫಿಟ್ ಅನ್ನೋದು ಗೊತ್ತಾಗುತ್ತೆ. ಇದು ಯುವ ಆಟಗಾರರಿಗೆ ಮೋಸ ಮಾಡಿದಂತೆ ಅನ್ನೋದು ಭಾಸವಾಗ್ತಿದೆ’
-ಸರಣ್ದೀಪ್ ಸಿಂಗ್, ಮಾಜಿ ಸೆಲೆಕ್ಟರ್
ಇದಷ್ಟೆ ಅಲ್ಲ..! ಮಾಜಿ ಸೆಲೆಕ್ಟರ್ ಸರಣ್ ದೀಪ್ ಸಿಂಗ್, ಫಿಟ್ನೆಸ್ ಪರೀಕ್ಷೆಗೆ ಹಾರ್ದಿಕ್ NCAಗೆ ಹೋಗದಿರುವ ಗುಟ್ಟನ್ನೂ ಬಹಿರಂಗಪಡಿಸಿದ್ದಾರೆ.
ಹಾರ್ದಿಕ್ NCAಗೆ ಹೋಗೋದೇ ಇಲ್ಲ..!
‘ಫಿಟ್ನೆಸ್ ಸಮಸ್ಯೆ ಎದುರಿಸೋವಾಗ NCAಗೆ ಹೋಗೋದು ಕಡ್ಡಾಯ. ಆದ್ರೆ ಹಾರ್ದಿಕ್ NCAಗೆ ಹೋಗೋದೇ ಇಲ್ಲ. IPLನ ಮುಂಬೈ ಇಂಡಿಯನ್ಸ್ ಸಿಬ್ಬಂದಿಗೆ ಆಮೀಷ ತೋರಿಸಿ ಚಿಕಿತ್ಸೆ ಪಡೆದು ಸಿದ್ಧರಾಗ್ತಾರೆ. ರೋಹಿತ್ ಶರ್ಮಾಗೂ ಗೊತ್ತಾಗದಂತೆ ಈ ವಿಷಯ ಮುಚ್ಚಿಟ್ಟಿದ್ದಾರೆ. ಜೊತೆಗೆ ಸರಿಯಾದ ಆಯ್ಕೆಗೆ ಟೀಮ್ ಮ್ಯಾನೇಜ್ಮೆಂಟ್ ನಿರ್ಲಕ್ಷ್ಯವಹಿಸ್ತಿದೆ. ಆದರೆ ಆಯ್ಕೆ ಸಮಿತಿ ಕಟ್ಟುನಿಟ್ಟಾಗಿರಬೇಕು. ಆಟಗಾರರು ಫಿಟ್ ಆಗಿದ್ರೆ ಬಹಿರಂಗಪಡಿಸಿ, ಇಲ್ಲವಾದಲ್ಲಿ ಇಡೀ ತಂಡದ ಸಂಯೋಜನೆಗೆ ಅಡ್ಡಿಯಾಗುತ್ತೆ’
-ಸರಣ್ದೀಪ್ ಸಿಂಗ್, ಮಾಜಿ ಸೆಲೆಕ್ಟರ್
ಹಾರ್ದಿಕ್ ಬೇಜವಾಬ್ದಾರಿತನ, ಪ್ರತಿಸಲ ಇದನ್ನೇ ರಿಪೀಟ್ ಮಾಡೋದ್ರಿಂದ ಪದೆಪದೇ ಇಂಜುರಿಗೆ ಒಳಗಾಗ್ತಿದ್ದಾರೆ. ಇದರಿಂದ ಸಂಪೂರ್ಣ ಚೇತರಿಕೆ ಕಾಣುವಲ್ಲಿ ವಿಫಲರಾಗುತ್ತಿದ್ದಾರೆ. ಇಷ್ಟಾದರೂ ಆಯ್ಕೆ ಸಮಿತಿ ಮತ್ತು ಟೀಮ್ ಮ್ಯಾನೇಜ್ಮೆಂಟ್, ಹಾರ್ದಿಕ್ ಪಾಂಡ್ಯಾಗೇ ಹೆಚ್ಚು ಒಲವು ನೀಡೋದು ಸರಿಯಲ್ಲ. ಇದು ಪ್ರತಿಭಾನ್ವಿತ ಆಟಗಾರರಿಗೆ ಮೋಸ ಮಾಡಿದಂತಾಗುತ್ತೆ. ಹಾಗಾಗಿ ಮುಂದಾದರೂ ಸೆಲೆಕ್ಷನ್ ಕಮಿಟಿಯ ನಿರ್ಧಾರಗಳು ಬದಲಾಗಲಿ ಅನ್ನೋದೇ, ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.