ಇಡುಕ್ಕಿ: ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬಳು ಯುವಕನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ನವೆಂಬರ್ 16 ರಂದು ಕೇರಳದ ತಿರುವನಂತಪುರಂನಲ್ಲಿ ನಡೆದಿದ್ದು, ಯುವತಿ ಆ್ಯಸಿಡ್ ದಾಳಿ ನಡೆಸಿದ ದೃಶ್ಯಗಳು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ.
ಮಹಿಳೆಗೆ ಫೇಸ್ಬುಕ್ನಲ್ಲಿ ಯುವಕನ ಪರಿಚಯವಾಗಿದ್ದು, ಇಬ್ಬರ ನಡುವೆ ಕೆಲ ಸಮಯದ ಬಳಿಕ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಆದರೆ ಆಕೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದ ಬಳಿಕ ಯುವಕ ಮಹಿಳೆಯಿಂದ ದೂರವಾಗಲು ಮುಂದಾಗಿದ್ದನಂತೆ. ಮಹಿಳೆ ಮಾತ್ರ ಯುವಕನನ್ನು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳಂತೆ. ಇದಕ್ಕೆ ಯುವಕ ಒಪ್ಪದ ಕಾರಣ ಆ್ಯಸಿಡ್ ಮಾಡಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಸದ್ಯ ಆ್ಯಸಿಡ್ ದಾಳಿಗೆ ಒಳಗಾಗಿರುವ 28 ವರ್ಷದ ಯುವಕ ಅರುಣ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಆ್ಯಸಿಡ್ ದಾಳಿ ಮಾಡಿದ 35 ವರ್ಷದ ಮಹಿಳೆ ಷಿಬಾಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂದರ್ಭದಲ್ಲಿ ಮಹಿಳೆಗೂ ಆ್ಯಸಿಡ್ನಿಂದ ಗಾಯಗಳಾಗಿದ್ದು, ಯುವಕನ ದೂರಿನ ಅನ್ವಯ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವಕ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದು, ಮುಖ ಹಾಗೂ ಕುತ್ತಿಗೆ ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.