ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ; ಉತ್ತಮ ಸ್ಥಾನ ಪಡೆದು, ಸಮಾಜವನ್ನ ಮರೆತಿದ್ದಾರೆ – ಸಿ ಎಂ ಬೊಮ್ಮಾಯಿ ವಿಷಾದ
ಬೆಂಗಳೂರು: ಇಂದು (ಏಪ್ರಿಲ್ 14) ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ (ಭೀಮ್ ಜಯಂತಿ). ಇಂದು ಬಿ.ಆರ್ ಅಂಬೇಡ್ಕರ್ ಅವರ 131ನೇ ಜನುಮ ದಿನ (April 14, 1891). ಇದರ ಅಂಗವಾಗಿ ವಿಧಾನೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ. 2018, 2019, 2020, 2021 ಮತ್ತು 2022ನೇ ಸಾಲಿ ಅಂಬೇಡ್ಕರ್ ಪ್ರಶಸ್ತಿಯನ್ನು ಎಸ್. ಸಿದ್ಧಾರ್ಥ, ಆರ್.ಎಸ್. ಸರಸ್ವತಮ್ಮ, ಡಿ. ರಾಮಾ ನಾಯ್ಕ್, ಗುರುವಪ್ಪ ಎನ್.ಟಿ. ಬಾಳೇಪುಣಿ ಮತ್ತು ಬಿ.ಎಂ. ಗಿರಿರಾಜ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ (Ambedkar Jayanti or Bhim Jayanti). ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ವೈ.ಎ. ನಾರಾಯಣಸ್ವಾಮಿ, ಅ. ದೇವೇಗೌಡ, ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದಾರೆ. ಈ ವೇಳೆ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ. ಉತ್ತಮ ಸ್ಥಾನಗಳನ್ನು ಪಡೆದು, ಸಮಾಜವನ್ನೇ ಮರೆತಿದ್ದಾರೆ. ಇವರೆಲ್ಲಾ ಪಟ್ಟಭದ್ರ ಹಿತಾಸಕ್ತರು. ಈ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು (Basavaraj Bommai).
ನಮ್ಮಸರ್ಕಾರವನ್ನು ನಮ್ಮ ಕೆಲಸದಿಂದ ಅಳೆಯಿರಿ. ಎಲ್ಲಾ ಎಸ್ಸಿ ಎಸ್ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. ಇದುವರೆಗೆ ಈ ಕೆಲಸ ಯಾರೂ ಮಾಡಿರಲಿಲ್ಲ. ರಾಜ್ಯದಲ್ಲಿ ಅಂಬೇಡ್ಕರ್ ಓಡಾಡಿದ ಸ್ಫೂರ್ತಿಯ ಸೆಲೆಗಳಾಗಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿ ಎಂ ಬೊಮ್ಮಾಯಿ ಹೇಳಿದರು.
ಈ ದೇಶದ ರಕ್ಷಾ ಕವಚ ಸಂವಿಧಾನ. ಈ ದೇಶದ ಭವಿಷ್ಯ ಸಂವಿಧಾನ. ಸೂರ್ಯ ಚಂದ್ರ ಇರೋವರೆಗೆ ಸಂವಿಧಾನ ಇರುತ್ತದೆ. ಹಿಂದಿನ, ಈಗಿನ, ಮುಂದಿನ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲೇ ಸಿಎಂ ಬೊಮ್ಮಾಯಿಗೆ ಪ್ರತಿಭಟನೆಯ ಬಿಸಿ:
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಿಎಂ ಬೊಮ್ಮಾಯಿ ಭಾಷಣ ಆರಂಭಿಸುತ್ತಿದ್ದಂತೆಯೇ ಘೋಷಣೆ ಕೇಳಿಬಂದಿದ್ದು, ಪ್ರತಿಭಟನೆಯ ಬಿಸಿ ತಾಕಿದೆ. ಸಭಿಕರ ಮಧ್ಯದಿಂದ ಓಡಿ ಬಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಪಿಟಿಸಿಎಲ್ ಕಾಯ್ದೆ ಜಾರಿಗೊಳಿಸಲು ಆಗ್ರಹ ಮಾಡಿದರು. ಎಲ್ಲಾ ಕಡೆ ಇದೇ ಮಾಡ್ತೀರಿ, ಈಗ ಸುಮ್ಮನಿರಿ ಎಂದು ಸಿಎಂ ಬೊಮ್ಮಾಯಿ ಆ ವೇಳೆ ವಿನಂತಿಸಿದರು. ಜೊತೆಗೆ, ಪಿಟಿಸಿಎಲ್ ಕಾಯ್ದೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದೂ ಸಿಎಂ ಬೊಮ್ಮಾಯಿ ಭರವಸೆ ನೀಡಿದರು. ಕೂಡಲೇ ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ಕರೆದೊಯ್ದರು.
ಇದೂ ಓದಿ:
ನನ್ನ ಸಿಡಿ ತಯಾರಿಸಿದ್ದ ‘ಮಹಾನ್ ನಾಯಕನೇ’ ಸಂತೋಷ್ ಪ್ರಕರಣದಲ್ಲೂ ಭಾಗಿ: ರಮೇಶ್ ಜಾರಕಿಹೊಳಿ ಹೊಸ ಬಾಂಬ್
ಇದೂ ಓದಿ:
ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ: ಸಿಎಂ ಮನೆಗೆ ಬಿಗಿ ಭದ್ರತೆ