‘ದಿ ವಾಲ್’ ಖ್ಯಾತೀಯ ರಾಹುಲ್ ದ್ರಾವಿಡ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ NCA ಮುಖ್ಯಸ್ಥರಾಗಿ ಮುಂದೆ ಯಾರನ್ನ ಆಯ್ಕೆ ಮಾಡಬೇಕು ಅನ್ನೋ ವಿಚಾರದಲ್ಲಿ ಬಿಸಿಸಿಐ ಗೊಂದಲಕ್ಕೆ ಸಿಲುಕಿತ್ತು. ಕೊನೆಗೂ ಗಂಗೂಲಿ ಅವರ ತಲೆಬಿಸಿಯನ್ನ ರಾಹುಲ್ ದ್ರಾವಿಡ್ ಓಡಿಸಿದ್ದು, ಭಾರತ ತಂಡ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರನ್ನ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ. ದ್ರಾವಿಡ್ ಅವರ ಮಾತಿಗೆ ಮರು ಮಾತನಾಡದೇ ಗಂಗೂಲಿ ಸಮ್ಮತಿ ಸೂಚಿಸಿದ್ದಾರಂತೆ.
ಭವಿಷ್ಯದ ಕ್ರಿಕೆಟಿಗರನ್ನ ಸಿದ್ಧಪಡಿಸುವ ಕೇಂದ್ರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ. ಇಲ್ಲಿ ತರಬೇತಿ ಪಡೆದ ಅದೆಷ್ಟೋ ಯುವ ಕ್ರಿಕೆಟಿಗರು, ಟೀಮ್ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ. ಅದಕ್ಕೆ NCA ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡೇ ಕಾರಣ. ಯುವಕರ ಪ್ರತಿಭೆ ಗುರುತಿಸಿ, ಪ್ರತಿಭಾನ್ವಿತ ಕ್ರಿಕೆಟಿಗರನ್ನಾಗಿ ರೂಪಿಸುತ್ತಿದ್ದ ದ್ರಾವಿಡ್, ಇದೀಗ ಟೀಮ್ ಇಂಡಿಯಾದ ಹೆಡ್ಕೋಚ್ ಆಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೆ NCA ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಹುಡುಕಾಟ ನಡೆಸಿದೆ. ಆದರೆ ದ್ರಾವಿಡ್, ಲಕ್ಷ್ಮಣ್ರನ್ನ ನೇಮಿಸುವಂತೆ ಮನವಿ ಮಾಡಿದ್ದಾರೆ.
ಏಕೆಂದರೆ NCA ಪರಂಪರೆ ಉಳಿಸಿ ಬೆಳೆಸೋದು ಇದರ ಹಿಂದಿನ ಉದ್ದೇಶವಾಗಿದೆ. ಹಾಗಾಗಿ ಹಿರಿಯ ಹಾಗೂ ಅನುಭವಿ ಆಟಗಾರ ಲಕ್ಷ್ಮಣ್ ತನ್ನ ಉತ್ತರಾಧಿಕಾರಿಯಾಗಲು ಬಯಸಿದ್ದಾರೆ ದ್ರಾವಿಡ್.
ಇಬ್ಬರದ್ದೂ ಪರಿಪೂರ್ಣ ಸಂಯೋಜನೆ
‘ಎನ್ಸಿಎ ಮುಖ್ಯಸ್ಥ ಸ್ಥಾನಕ್ಕೆ VVS ಲಕ್ಷ್ಮಣ್ರ ನೇಮಿಸುವಂತೆ ದ್ರಾವಿಡ್ ಸೂಚಿಸಿದ್ದಾರೆ. ಇದು ಗಂಗೂಲಿ, ಜಯ್ ಶಾ ಇಬ್ಬರಿಗೂ ಇಷ್ಟವಾಗಿದೆ. ವಿಶೇಷ ಬಾಂಧವ್ಯ ಹೊಂದಿರುವ ದ್ರಾವಿಡ್ - ಲಕ್ಷ್ಮಣ್ ಒಟ್ಟಾಗಿ ಭಾರತೀಯ ಕ್ರಿಕೆಟ್ಗಾಗಿ ಮತ್ತೊಮ್ಮೆ ಸೇವೆ ಆರಂಭಿಸುವುದು ಅದಕ್ಕಿಂತ ಮಿಗಿಲಾದದ್ದು ಬೇರೆ ಏನೂ ಇಲ್ಲ. ಇಬ್ಬರ ಪರಿಪೂರ್ಣ ಸಂಯೋಜನೆಯಿಂದ ಪ್ರತಿಭಾನ್ವಿತ ಕ್ರಿಕೆಟಿಗರ ದಂಡು ಟೀಮ್ ಇಂಡಿಯಾದಲ್ಲಿ ತುಂಬಿರುತ್ತೆ ಅನ್ನೋದು ಬಿಸಿಸಿಐ ಲೆಕ್ಕಾಚಾರವಾಗಿದೆ.
ಅಂದ್ಹಾಗೆ ದ್ರಾವಿಡ್ ಮತ್ತು ಲಕ್ಷ್ಮಣ್, ಟೀಮ್ ಇಂಡಿಯಾಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಆಪತ್ಭಾಂದವರಾಗಿ ತಂಡವನ್ನ ರಕ್ಷಿಸುತ್ತಿದ್ದ ಈ ದಿಗ್ಗಜರು, ಆಪ್ತರು ಕೂಡ ಹೌದು. ಹಾಗೇ ಲಕ್ಷ್ಮಣ್ ಬಗ್ಗೆ ಎಲ್ಲವೂ ಗೊತ್ತಿರುವ ಕಾರಣ, ದ್ರಾವಿಡ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಲಕ್ಷ್ಮಣ್ ಎಲ್ಲಿಯೂ ಕೋಚ್ ಆಗದಿದ್ರೂ, ಮುಖ್ಯಸ್ಥರಾಗುವ ಎಲ್ಲಾ ಲಕ್ಷ್ಮಣ ಹೊಂದಿದ್ದಾರೆ ಎಂಬ ವಾದವನ್ನೂ ದ್ರಾವಿಡ್ ಮಂಡಿಸಿದ್ದಾರೆ. ಆ ಮೂಲಕ ಜೊತೆಯಾಗಿ ಮತ್ತೊಂದು ಇನ್ನಿಂಗ್ಸ್ ಪುನರಾರಂಭಿಸಲು ಉತ್ಸುಕತೆ ತೋರಿದ್ದು, ಭಾರತೀಯ ಕ್ರಿಕೆಟ್ಗೆ ಮತ್ತೊಂದು ಅಮೂಲ್ಯ ಕೊಡುಗೆ ನೀಡಲು ಮುಂದಾಗಿದ್ದಾರೆ.
ಲಕ್ಷ್ಮಣ್ರನ್ನ ದ್ರಾವಿಡ್ ಬೆಂಬಲಿಸಲು ಕಾರಣ..?
- ದೀರ್ಘಕಾಲ ಟೀಮ್ ಇಂಡಿಯಾದಲ್ಲಿ ಆಡಿದ ಅನುಭವ
- ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ
- SRHನಲ್ಲಿ ಮಾರ್ಗದರ್ಶಕರಾಗಿ VVS ಲಕ್ಷ್ಮಣ್ ಕಾರ್ಯ
- ಬೆಂಗಾಲ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ಕೆಲಸ
- ವಹಿಸಿದ ಕೆಲಸವನ್ನ ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ
- ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡುವ ಗುಣ ಹೊಂದಿದ್ದಾರೆ
- ಹೀಗಾಗಿ ಎನ್ಸಿಎ ಮುಖ್ಯಸ್ಥ ಸ್ಥಾನಕ್ಕೆ ಲಕ್ಷ್ಮಣ್ ಬೆಸ್ಟ್ ಚಾಯ್ಸ್