ಭಾರತದಿಂದ ಕಳುವಾದ ವಿಗ್ರಹಗಳನ್ನು ವಾಪಾಸ್ ತರಲು ಸರ್ಕಾರದಿಂದ ಎಸ್​ಟಿಎಫ್ ರಚನೆ | Indian Government has set up a Special Task Force STF to brink Back Stolen Idols to India


ಭಾರತದಿಂದ ಕಳುವಾದ ವಿಗ್ರಹಗಳನ್ನು ವಾಪಾಸ್ ತರಲು ಸರ್ಕಾರದಿಂದ ಎಸ್​ಟಿಎಫ್ ರಚನೆ

18ನೇ ಶತಮಾನದ ಅನ್ನಪೂರ್ಣೇಶ್ವರಿ ದೇವಿ ವಿಗ್ರಹ

ನವದೆಹಲಿ: ಭಾರತದಿಂದ ವಿದೇಶಕ್ಕೆ ಸ್ಮಗ್ಲಿಂಗ್ ಮಾಡಲಾಗಿರುವ ಮೂರ್ತಿಗಳು, ವಿಗ್ರಹಗಳನ್ನು ಭಾರತಕ್ಕೆ ವಾಪಾಸ್ ತರಲು ಕೇಂದ್ರ ಸರ್ಕಾರವು ಈಗ ಎಸ್‌ಟಿಎಫ್ ರಚಿಸಿದೆ. ಕೇಂದ್ರದ ವಿದೇಶಾಂಗ ಇಲಾಖೆ, ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಎಸ್‌ಟಿಎಫ್ ಈಗ ವಿದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ವಿದೇಶಿ ಸರ್ಕಾರಗಳ ವಶದಲ್ಲಿರುವ ಭಾರತದ ಕಲಾಕೃತಿ, ವಿಗ್ರಹ, ಮೂರ್ತಿಗಳನ್ನು ಭಾರತಕ್ಕೆ ವಾಪಸ್ ತರುವ ಪ್ರಕ್ರಿಯೆಗೆ ಇದರಿಂದ ವೇಗ ನೀಡಲಾಗಿದೆ.

ದಶಕಗಳಿಂದ ಭಾರತದಿಂದ ವಿದೇಶಕ್ಕೆ ಕಳ್ಳಸಾಗಣೆಯಾದ ಪುರಾತನ ವಸ್ತುಗಳು, ವಿಗ್ರಹ, ಮೂರ್ತಿ, ಕಲಾಕೃತಿಗಳನ್ನು ತ್ವರಿತವಾಗಿ ಭಾರತಕ್ಕೆ ವಾಪಸ್ ತರಲು ಕೇಂದ್ರ ಸರ್ಕಾರವು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಅನ್ನು ಸ್ಥಾಪಿಸಿದೆ. ಇದು ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಸಚಿವಾಲಯಗಳ ಅಧಿಕಾರಿಗಳನ್ನು ಒಳಗೊಂಡಿದೆ. ಕಾರ್ಯಪಡೆಯ ಸದಸ್ಯರು ವಿದೇಶಗಳ ಸ್ವಾಧೀನದಲ್ಲಿರುವ ಅಥವಾ ಅಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿರುವ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸಲು ವಿದೇಶಗಳಲ್ಲಿನ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಅಕ್ರಮವಾಗಿ ಹಡಗಿನಲ್ಲಿ ಕೊಂಡೊಯ್ಯಲಾದ ಪ್ರಾಚೀನ ವಸ್ತುಗಳನ್ನು ತರುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ದೇಶಗಳಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಮತ್ತು ವಿದೇಶಗಳಲ್ಲಿನ ನಮ್ಮ ರಾಯಭಾರ ಕಚೇರಿಗಳಿಗೆ ಅಲ್ಲಿನ ಸರ್ಕಾರಗಳೊಂದಿಗೆ ಚರ್ಚೆಯನ್ನು ನಡೆಸಲು ಮತ್ತು ನಮ್ಮ ಸಾಂಸ್ಕೃತಿಕ ಸಂಪತ್ತನ್ನು ಗುರುತಿಸಲು ಜವಾಬ್ದಾರಿಯನ್ನು ವಹಿಸಲಾಗಿದೆ. ಇದರಿಂದ ಪ್ರಾಚೀನ ವಸ್ತುಗಳು, ವಿಗ್ರಹ, ಮೂರ್ತಿ, ಕಲಾಕೃತಿಗಳನ್ನ ಮರಳಿ ತರಲು ಸಾಧ್ಯವಾಯಿತು. ಮುಂದಿನ ವರ್ಷದ ವೇಳೆಗೆ 200 ವಿಗ್ರಹಗಳು, ಅಮೂಲ್ಯವಾದ ವರ್ಣಚಿತ್ರಗಳು ಮತ್ತು ಇತರ ಕಲಾಕೃತಿಗಳು ಭಾರತಕ್ಕೆ ಮರಳುತ್ತವೆ ಎಂದು ಸಚಿವ ಕಿಶನ್ ರೆಡ್ಡಿ ಹೇಳಿದರು.

ಭಾರತಕ್ಕೆ ಸೇರಿದ ಮೂರ್ತಿ, ಕಲಾಕೃತಿಗಳನ್ನು ಕಳ್ಳಸಾಗಾಣಿಕೆ ಮಾಡಿ ಸಾಂಸ್ಕೃತಿಕ ವಸ್ತುಗಳನ್ನು ಸಂಗ್ರಹಿಸಲಾಗಿರುವ ಅಥವಾ ವಸ್ತುಸಂಗ್ರಹಾಲಯಗಳಲ್ಲಿ ಇರಿಸಲಾಗಿರುವ ಏಳು ದೇಶಗಳೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಆ ದೇಶಗಳೆಂದರೆ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಸಿಂಗಾಪುರ್, ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಫ್ರಾನ್ಸ್. ಈ ದೇಶಗಳ ಸರ್ಕಾರಗಳ ಜೊತೆಗೆ ಕೇಂದ್ರ ಸರ್ಕಾರದ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.

ಧಾರ್ಮಿಕ ಮುಖಂಡರು ಮತ್ತು ಸಂತರು ಮನವಿ ಮಾಡಿದ ನಂತರ ದೇವರು ಮತ್ತು ದೇವಿಯ ಪ್ರತಿಮೆಗಳನ್ನು ವಿದೇಶಗಳೊಂದಿಗೆ ವಾಪಸ್ ತರಲು ಪ್ರಧಾನಿ ಮೋದಿ ಪ್ರಯತ್ನಿಸಿದರು ಎಂದು ಸಚಿವ ಕಿಶನ್ ರೆಡ್ಡಿ ಹೇಳಿದರು.

“ಕೆಲವು ದೇಶಗಳೊಂದಿಗೆ, ಪ್ರಾಚೀನ ವಸ್ತುಗಳ ವಿನಿಮಯಕ್ಕಾಗಿ ಭಾರತವು ಈಗಾಗಲೇ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಆದರೆ ಕೆಲವು ಸಂದರ್ಭಗಳಲ್ಲಿ, ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ. ಅಧಿಕಾರಿಗಳು ಸಾಕ್ಷ್ಯವನ್ನು ನೀಡಬೇಕು, ಇತಿಹಾಸವನ್ನು ಹೇಳಬೇಕು ಮತ್ತು ವಸ್ತುವಿಗೆ ಲಗತ್ತಿಸಲಾದ ಸಾಂಸ್ಕೃತಿಕ ಮಹತ್ವವನ್ನು ವಿವರಿಸಬೇಕು. ಅಥವಾ ವಿದೇಶಗಳಿಗೆ ಮನವರಿಕೆ ಮಾಡಬೇಕು” ಎಂದು ಸಚಿವ ಕಿಶನ್ ರೆಡ್ಡಿ ವಿವರಿಸಿದರು.

ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಸರ್ಕಾರ 157 ಮೂರ್ತಿ, ವಿಗ್ರಹ, ಕಲಾಕೃತಿಗಳನ್ನ ಹಸ್ತಾಂತರಿಸಿದ್ದು, ಅವುಗಳನ್ನು ಭಾರತಕ್ಕೆ ಸಾಗಿಸಲಾಗುತ್ತಿದೆ. ಅವುಗಳಲ್ಲಿ ಹೆಚ್ಚಿನವು ಲೋಹ, ಕಲ್ಲು ಮತ್ತು ಟೆರಾಕೋಟಾದಿಂದ ಮಾಡಿದ ಪ್ರತಿಮೆಗಳಾಗಿವೆ, 63 ಮೂರ್ತಿ, ವಿಗ್ರಹ, ಕಲಾಕೃತಿಯನ್ನು ಒಳಗೊಂಡಿರುವ ಮೊದಲ ಬ್ಯಾಚ್ ಭಾರತಕ್ಕೆ ವಾಪಸ್ ಬಂದಿದ್ದು, ಮಂಗಳವಾರ ದೆಹಲಿಯನ್ನು ತಲುಪಿವೆ.

ಇದನ್ನೂ ಓದಿ:100 ವರ್ಷಗಳ ಹಿಂದೆ ಕಳವಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹ ಕೊನೆಗೂ ಭಾರತಕ್ಕೆ ವಾಪಾಸ್

Terrorists Encounter: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಯಿಂದ 3 ಉಗ್ರರ ಎನ್​ಕೌಂಟರ್

TV9 Kannada


Leave a Reply

Your email address will not be published. Required fields are marked *