ನಮ್ಮ ಭಾವನೆಗಳನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಅನ್ನುವುದನ್ನು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ನಮಗೆ ದುಃಖವಾದಾಗ ಕಣ್ಣಲ್ಲಿ ನೀರು ಬರುತ್ತದೆ ಮತ್ತು ಸಂತೋಷವಾದಾಗಲೂ ಬರುತ್ತದೆ. ಒಂದನ್ನು ಅಳು ಎನ್ನುತ್ತೇವೆ ಮತ್ತೊಂದನ್ನು ಆನಂದಭಾಷ್ಪ ಎನ್ನುತ್ತೇವೆ, ಇವೆರಡು ನಾವು ಸೃಷ್ಟಿಸಿರುವ ಪದಗಳೇ ಅನ್ನುತ್ತಾರೆ ಡಾ ಸೌಜನ್ಯ. ನಮ್ಮ ಸಮಾಜದಲ್ಲಿ ಪುರುಷರ ಭಾವನೆಗಳಿಗೆ ಹೆಚ್ಚು ಗಮನ ಕೊಡೋದಿಲ್ಲ, ಅದರೆ ಮಹಿಳೆಯರ ಎಮೋಶನ್ಗಳಿಗೆ ಜಾಸ್ತಿ ಮಹತ್ವ ನೀಡಲಾಗುತ್ತದೆ. ಪುರುಷ ಯಾವುದೋ ಒಂದು ಕಾರಣಕ್ಕೆ ಅತ್ತರೆ, ಯಾಕೆ ಅಂತ ವಿಚಾರಿಸುವ ಬದಲು ಇದೇನು ಹೆಂಗಸರಂತೆ ಅಳ್ತೀಯಾ ಅಂತ ಛೇಡಿಸುತ್ತೇವೆ, ಹಾಗಾಗಿ ಪುರುಷ ತನ್ನ ಭಾವನೆಗಳನ್ನು ಅದುಮಿಟ್ಟುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.
ಬದುಕಿನುದ್ದಕ್ಕೂ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಸಾಗುವ ಪುರುಷರು, ಅವುಗಳನ್ನು ನಿಭಾಯಿಸಲು ಸಾಧ್ಯವಾಗದೆ ಹೋದಾಗ ಜೀವ ಕೊನೆಗಾಣಿಸುವ ಯೋಚನೆ ಮಾಡುತ್ತಾರೆ ಎಂದು ಸೌಜನ್ಯ ಹೇಳುತ್ತಾರೆ.
ಮಹಿಳೆಯರು ಭಾವನಾತ್ಮಕವಾಗಿ ದುರ್ಬಲರಾದರೂ ಅತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಮತ್ತು ಪ್ರಮಾಣ ಪುರುಷರಲ್ಲೇ ಜಾಸ್ತಿ. ಮಹಿಳೆಯರಲ್ಲಿ ಆತ್ಮಹತ್ಯೆ ಮಾಡಿಕೊಳ್ಳವ ಯೋಚನೆ ಬರುತ್ತದೆಯೇ ಹೊರತು ಅಂಕಿ-ಅಂಶಗಳನ್ನು ಗಮನಿಸಿದ್ದೇಯಾದರೆ, ಪುರುಷರೇ ಜಾಸ್ತಿ ಆತ್ಮಹತ್ಯೆ ಮಾಡಿಕೊಳ್ಳೋದು ಅಂತ ಡಾ ಸೌಜನ್ಯ ಹೇಳುತ್ತಾರೆ.
ಅಳು ಮತ್ತು ನಗು ಎರಡೂ ಎಮೋಶನ್ಗಳೇ, ಭಾವನೆ ಯಾವುದೇ ಅಗಿರಲಿ ಅದು ಕ್ಷಣಿಕ ಮತ್ತು ಅದನ್ನು ತಡೆಯಬಾರದು, ನಗುವ ಪರಿಸ್ಥಿತಿ ಇದ್ದರೆ ನಕ್ಕುಬಿಡಬೇಕು ಮತ್ತು ಅಳುವ ಹಾಗಿದ್ದರೆ ಅತ್ತುಬಿಡಬೇಕು ಅಂತ ಸೌಜನ್ಯ ಹೇಳುತ್ತಾರೆ. ಅತ್ತಾಗ ದುಃಖ ಶಮನಗೊಳ್ಳುತ್ತದೆ, ಮನಸ್ಸು ಹಗುರವಾಗುತ್ತದೆ ಮತ್ತು ನಿದ್ರೆಯೂ ಚನ್ನಾಗಿ ಬರುತ್ತದೆ ಎಂದು ಅವರು ಹೇಳುತ್ತಾರೆ. ಅಳುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ ಹಾಗಾಗಿ ಅಳುವುದು ಕೆಟ್ಟದಲ್ಲ.
ನಗು-ಅಳು, ಸುಖ-ದುಃಖಗಳನ್ನು ಒಳಗೊಂಡ ಬದುಕು ಒಂದು ಸುಂದರ ಪಯಣ, ಅದನ್ನು ಎಂಜಾಯ್ ಮಾಡುತ್ತಾ ಜೀವಿಸಬೇಕು ಅಂತ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.