ಬೆಂಗಳೂರು: ಮಗಳನ್ನ ಲವ್ ಮಾಡಿದ ಅಂತಾ ಪ್ರೇಮಿಯನ್ನ ಮರ್ಡರ್ ಮಾಡಿ ಕತೆ ಕಟ್ಟಿದ್ದ ಮಲ್ಟಿ ಟ್ಯಾಲೆಂಟೆಡ್ ಆರೋಪಿಯನ್ನು ಖಾಕಿ ಪಡೆ ಬಂಧಿಸಿದೆ.
ನಡೆದದ್ದೇನು?
ಕೊಲೆಯಾದ ಮೃತ ಯುವಕ ನಿವೇಶ್(19) ವಿನೋಬನಗರ ನಿವಾಸಿ ನಾರಾಯಣ್ ಮಗಳನ್ನು ಮಗಳನ್ನ ಪ್ರೀತಿಸುತ್ತಿದ್ದರಂತೆ. ಒಂದು ದಿನ ಆರೋಪಿ ನಾರಾಯಣ್ ಮನೆಯಲ್ಲಿರದಿದ್ದಾಗ ಮಗಳು ತನ್ನ ಲವರ್ನನ್ನು ಮನೆಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಅಚಾನಕ್ಕಾಗಿ ಮನೆಗೆ ಆಗಮಿಸಿದ ಆರೋಪಿ ನಾರಾಯಣ್ ಮನೆಯಲ್ಲಿ ಮಗಳು ಪ್ರಿಯಕರನ ಜೊತೆ ಇರೋದನ್ನು ಕಂಡಿದ್ದಾರೆ. ಇದರಿಂದ ಕೋಪಗೊಂಡು ಅಲ್ಲಿಯೇ ಇದ್ದ ಕಟ್ಟಿಗೆಯಿಂದ ನಿವೇಶ್ ತಲೆಗೆ ಬಲವಾಗಿ ಹೊಡೆದಿದ್ದಾರೆ.
ತೀವ್ರವಾದ ಪೆಟ್ಟಿನಿಂದ ಕುಸಿದು ಬಿದ್ದಿದ್ದ ನಿವೇಶ್ನನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಪರಿಚಿತ ಎಂದು ಹೇಳಿ ದಾಖಲಿಸಿ ಹೋಗಿದ್ದಾರೆ. ಆ ಬಳಿಕ ನಿವೇಶ್ ಮೃತಪಟ್ಟಿದ್ದಾನೆ. ಇದನ್ನ ತಿಳಿದ ಆಸ್ಪತ್ರೆ ಸಿಬ್ಬಂದಿ ಕಲಾಸಿಪಾಳ್ಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಅನಾಥ ಶವ ಅಂತಾ ಆಸ್ಪತ್ರೆ ಸಿಬ್ಬಂದಿ ಮೃತದೇಹ ಪರಿಶೀಲನೆ ನಡೆಸಿದಾಗ ಕೊಲೆಯಾಗಿರೋದು ಬೆಳಕಿಗೆ ಬಂದಿದೆ. ಈ ವೇಳೆ ಮಾಹಿತಿ ಕಲೆ ಹಾಕಿದ ಪೊಲೀಸರು ವಿವಿ ಪುರಂ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿರೋದು ಗೊತ್ತಾಗಿದೆ. ನಂತರ ಪ್ರಕರಣವನ್ನು ವಿವಿ ಪುರಂ ಪೊಲೀಸರಿಗೆ ವರ್ಗಾಯಿಸಿದ್ದಾರೆ.
ಇನ್ನು ವಿವಿ ಪುರಂ ಠಾಣೆಯಲ್ಲಿ ನಿವೇಶ್ ಪೋಷಕರು ಮಗ ಕಾಣೆಯಾಗಿದ್ದಾನೆ ಅಂತ ದೂರು ದಾಖಲಿಸಿದ್ದಾರೆ. ಆಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಮೃತದೇಹ ತೋರಿಸಿದಾಗ ನಿವೇಶ್ ಹೆಣವಾಗಿ ಬಿದ್ದಿದ್ದನ್ನು ಗುರುತಿಸಿದ್ದಾರೆ. ಇನ್ನು ತನಿಖೆಯನ್ನ ಚುರುಕುಗೊಳಿಸಿದ ಪೊಲೀಸರು ಆರೋಪಿ ನಾರಾಯಣ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಮೃತಯುವಕ ತನ್ನ ಮಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದದ್ದನ್ನು ಕಂಡು ಕೊಲೆ ಮಾಡಿರೋದಾಗಿ ಹೇಳಿದ್ದಾನೆ ಎನ್ನಲಾಗಿದೆ.