
ಹಿಜಾಬ್ ಧರಿಸಿರುವ ಉಡುಪಿ ಕಾಲೇಜು ವಿದ್ಯಾರ್ಥಿನಿಯರು (ಸಂಗ್ರಹ ಚಿತ್ರ)
ಮಂಗಳೂರಿನ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹಿಜಾಬ್ ಧರಿಸಿ ಬಂದರೆ ಕಾಲೇಜಿಗೆ ಸೇರಿಸುವುದಿಲ್ಲ ಎಂದು ಮಂಗಳೂರಿನಲ್ಲಿ ಟಿವಿ9ಗೆ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಹಿಜಾಬ್ ವಿವಾದದ ಹಿಂದೆ ಹಲವು ಪಕ್ಷಗಳ ಕೈವಾಡ ಇದೆ ಎಂದರು.
ಮಂಗಳೂರು: ಕೆಲ ತಿಂಗಳ ಹಿಂದೆ ಕರಾವಳಿ ಹೊತ್ತಿಕೊಂಡ ಹಿಜಾಬ್ ದಂಗಲ್ ರಾಜ್ಯಾದ್ಯಂತ ಧಗಧಗಿಸಿತ್ತು. ಕೋರ್ಟ್ ಆದೇಶದ ಬಳಿಕ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಕೇಸ್ ಈಗ ಮತ್ತೆ ಧಗಧಗಿಸೋಕೆ ಆರಂಭಿಸಿದೆ. ಮತ್ತದೇ ಕರಾವಳಿಯಲ್ಲಿ ಹಿಜಾಬ್ ವಿವಾದ ಶುರುವಾಗಿದೆ. ಮೇ 10ರಂದು ಮಂಗಳೂರಿನ ವಿವಿ ಘಟಕ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಪೋಷಕರ ಸಭೆಯಲ್ಲಿ ಹಿಜಾಬ್ ಧರಿಸದಂತೆ ಮೌಖಿಕವಾಗಿ ಸೂಚಿಸಲಾಗಿತ್ತಾದ್ರೂ, ಕಾಲೇಜು ಆಡಳಿತ ಮಂಡಳಿ ಯಾವುದೇ ಆದೇಶ ಜಾರಿ ಮಾಡಿರಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಹಿಂದೂ ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ರು. ಇದಾದ ಬಳಿಕ ಅನೇಕ ಬೆಳವಣಿಗೆಗಳಾಗಿದ್ದು ಸದ್ಯ ಈ ಬಗ್ಗೆ ಸಭೆಗಳು, ಚರ್ಚೆಗಳು ನಡೆಯುತ್ತಿವೆ.
ಇನ್ನು ಮಂಗಳೂರಿನ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹಿಜಾಬ್ ಧರಿಸಿ ಬಂದರೆ ಕಾಲೇಜಿಗೆ ಸೇರಿಸುವುದಿಲ್ಲ ಎಂದು ಮಂಗಳೂರಿನಲ್ಲಿ ಟಿವಿ9ಗೆ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಹಿಜಾಬ್ ವಿವಾದದ ಹಿಂದೆ ಹಲವು ಪಕ್ಷಗಳ ಕೈವಾಡ ಇದೆ. ಎಸ್ಡಿಪಿಐ, ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳ ಕೈವಾಡ ಇದೆ. ಹಿಜಾಬ್ ಮೂಲಕ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ಯತ್ನ ನಡೆಯುತ್ತಿದೆ. ಕಾನೂನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಜೊತೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, DC ಅಲ್ಲ ಕಾಂಗ್ರೆಸ್ನ ಸಿಎಂ ಇದ್ರೂ ಅವಕಾಶ ಕೊಡಲು ಸಾಧ್ಯವಿಲ್ಲ. ಹಿಜಾಬ್ ಧರಿಸಲು ಕೆಲ ಅಧ್ಯಾಪಕರ ಕುಮ್ಮಕ್ಕು ಆರೋಪವಿದೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದ್ದೇವೆ. ಮಂಗಳೂರು ವಿವಿಯನ್ನು ಜೆಎನ್ಯು ರೀತಿ ಮಾಡಲು ಬಿಡಲ್ಲ. ನ್ಯಾಯಾಲಯ, ಕಾನೂನಿಗೆ ಗೌರವ ನೀಡಿ ಕಾಲೇಜಿಗೆ ಬನ್ನಿ. ಉಳಿದ ವಿಚಾರವನ್ನು ವಿದ್ಯಾರ್ಥಿಗಳ ಪೋಷಕರಿಗೆ ಬಿಟ್ಟಿದ್ದು ಎಂದರು.