ಬುಧವಾರ ರಾತ್ರಿಯಿಂದಲೇ ಪ್ರತಿಭಟನೆ ಶುರುವಾಗಿದ್ದು, ವಿರೋಧ ಪಕ್ಷದ ನಾಯಕರು ಸಂಸತ್ ಹೊರಗೆ ಸಂಸದರು ಎರಡನೇ ರಾತ್ರಿ ಕಳೆದಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಂಸತ್ ಹೊರಗೆ ಸಂಸದರ ಪ್ರತಿಭಟನೆ
ನವದೆಹಲಿ: ರಾಜ್ಯಸಭಾ ಅಧಿವೇಶನದಲ್ಲಿ (Rajya Sabha Session) ಕಲಾಪಕ್ಕೆ ಅಡ್ಡಿಪಡಿಸಿದ ಕಾರಣದಿಂದ ವಿರೋಧಪಕ್ಷದ 20 ಸಂಸದರನ್ನು ಅಧಿವೇಶನದಿಂದ ಅಮಾನತು (Suspend) ಮಾಡಲಾಗಿತ್ತು. ಸಂಸದರ ಅಮಾನತು ವಿರೋಧಿಸಿ 50 ಗಂಟೆಗಳ ಕಾಲ ಪ್ರತಿಪಕ್ಷಗಳು ಸಂಸತ್ತಿನ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಬುಧವಾರ ರಾತ್ರಿಯಿಂದಲೇ ಪ್ರತಿಭಟನೆ ಶುರುವಾಗಿದ್ದು, ವಿರೋಧ ಪಕ್ಷದ ನಾಯಕರು ಸಂಸತ್ ಹೊರಗೆ ಸಂಸದರು ಎರಡನೇ ರಾತ್ರಿ ಕಳೆದಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೊಳ್ಳೆ ಪರದೆಗಳನ್ನು ತರಿಸಿಕೊಂಡು ಸಂಸದರು ನೆಲದ ಮೇಲೆ ಮಲಗಿರುವ ಫೋಟೋಗಳು ವೈರಲ್ ಆಗಿವೆ.
ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಈ ಫೋಟೋಗಳನ್ನು ನಿನ್ನೆ ಮಧ್ಯರಾತ್ರಿ 1 ಗಂಟೆಗೆ ಟ್ವೀಟ್ ಮಾಡಿದ್ದಾರೆ. ಬೆಲೆ ಏರಿಕೆ ಕುರಿತು ಚರ್ಚೆಗೆ ಕೋರಿದ್ದಕ್ಕಾಗಿ ಅಮಾನತುಗೊಂಡಿರುವ ಸಂಸದರ ಅಮಾನತು ರದ್ದುಗೊಳಿಸುವಂತೆ ಅವರು ಸಂಸತ್ನಲ್ಲಿ ಒತ್ತಾಯಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರತಿಭಟನೆ ಅಂತ್ಯಗೊಳ್ಳುವ ಸಾಧ್ಯತೆಯಿದೆ. ಈ 50 ಗಂಟೆಗಳ ಸುದೀರ್ಘ ಧರಣಿಯು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಸಂಸತ್ತಿಗೆ ಆಗಮಿಸಿದಾಗ ನೀಡಿದ ಭರವಸೆಯನ್ನು ಪ್ರತಿಭಟನಾಕಾರರು ನೆನಪಿಸಲು ಬಯಸಿದ ಕಾರಣ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಸಂಸತ್ಗೆ ಆಗಮಿಸಿದ ಮೊದಲ ದಿನ ಪ್ರಧಾನಿ ಮೋದಿ ಸಂಸತ್ನ ಹೊರಗಿರುವ ಮೆಟ್ಟಿಲುಗಳ ಮೇಲೆ ತಮ್ಮ ಹಣೆಯನ್ನು ಒತ್ತಿ ಒಳನಡೆದಿದ್ದರು. ಅಂದು ಅವರು ನೀಡಿದ ಭರವಸೆಯನ್ನು ನಾವು ಈ ಧರಣಿ ಮೂಲಕ ನೆನಪಿಸುತ್ತಿದ್ದೇವೆ ಎಂದು ವಿಪಕ್ಷಗಳ ನಾಯಕರು ಹೇಳಿದ್ದಾರೆ.