ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶಾಲಾ ಕಾಲೇಜು ಬಂದ್ ಮಾಡೋದಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ನ್ಯೂಸ್ಫಸ್ಟ್ಗೆ ಸ್ಪಷ್ಟನೆ ನೀಡಿದ್ದಾರೆ.
ಶಾಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಎಂದಿನಂತೆ ಶಾಲಾ ಕಾಲೇಜು ತರಗತಿಗಳು ಮುಂದುವರೆಯುತ್ತವೆ. ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಯಾವುದೇ ಗೊಂದಲ ಬೇಡ. ಮೂರನೇ ಅಲೆ ಹಾಗೂ ಒಮಿಕ್ರಾನ್ ವೈರಸ್ ಬಗ್ಗೆ ಮಾಹಿತಿ ಪಡೆಯಲಾಗಿದೆ. ಆರೋಗ್ಯ ತಜ್ಞರೊಂದಿಗೆ ಚರ್ಚೆ ಮಾಡಲಾಗಿದೆ. ತಜ್ಞರೇ ಹೇಳುವಂತೆ ಫೆಬ್ರವರಿ ಅಂತ್ಯದಲ್ಲಿ ಮೂರನೇ ಅಲೆ ಎಂದಿದ್ದಾರೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ವಿಶೇಷವಾದ SOP ಜಾರಿ ಮಾಡಲಾಗಿದೆ ಎಂದರು.
ಶಾಲಾ, ಕಾಲೇಜುಗಳಲ್ಲಿ ಸ್ವಚ್ಛತೆ, ಸ್ಯಾನಿಟೈಸ್, ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಮಾಸ್ಕ್ ಇಲ್ಲದಿದ್ರೆ ತರಗತಿಗಳಿಗೆ ಬರಲು ಅವಕಾಶವಿಲ್ಲ. ಇಡೀ ರಾಜ್ಯದ ಎಲ್ಲಾ ಶಾಲಾ-ಕಾಲೇಜು ಮಕ್ಕಳ ಪೋಷಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದು, ಪೋಷಕರಿಗೆ ಎರಡು ಡೋಸ್ ಕಡ್ಡಾಯ ಮಾಡಲಾಗಿದೆ. ಎರಡು ಡೋಸ್ ತೆಗೆದುಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ. ಹೀಗಾಗಿ ಪೋಷಕರಿಗೆ ಮನವಿ ಮಾಡಿ ಎರಡು ಡೋಸ್ ತೆಗೆದುಕೊಳ್ಳುವಂತೆ ತಿಳಿ ಹೇಳಲಾಗುತ್ತಿದೆ ಎಂದರು.
ಶಾಲಾ ಕಾಲೇಜು ಬಂದ್ ಬಗ್ಗೆ ಯಾವುದೇ ಗೊಂದಲ ಬೇಡ. ಧೈರ್ಯವಾಗಿ ಶಾಲಾ ಕಾಲೇಜು ಗಳಿಗೆ ಮಕ್ಕಳನ್ನ ಕಳುಹಿಸಿ. ನಿಮ್ಮ ಪರವಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ ತಿಳಿಸಿದರು.