ರಾಮನಗರ: 2023ರ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸ್ತಿವೆ. ಅದರಲ್ಲೂ ಸದ್ಯ ಆಡಳಿತ ನಡೆಸ್ತಿರೋ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯೋಕೆ ಎಲ್ಲಿಲ್ಲದ ಪ್ರಯತ್ನ ಆರಂಭಿಸಿವೆ. ಕೈಪಡೆ, ದಳಪತಿಗಳ ಭದ್ರಕೋಟೆಗಳ ಮೇಲೆ ಕಮಲ ಪಡೆ ಕಣ್ಣಿಟ್ಟಿದ್ದು, ರೇಷ್ಮೆ ನಗರಿಯನ್ನು ವಶಪಡಿಸಿಕೊಳ್ಳೋಕೆ ಸಖತ್ ಪ್ಲಾನ್ ರೂಪಿಸಿದೆ.
ರಾಮನಗರದಲ್ಲಿ ಕಮಲ ಅರಳಿಸಲು ಸಿಎಂ ಬೊಮ್ಮಾಯಿ ರಣತಂತ್ರ
ಇತ್ತೀಚಿಗಷ್ಟೇ ರಾಮನಗರಕ್ಕೆ ಸಿಎಂ ಬೊಮ್ಮಾಯಿ ಭೇಟಿ ಕೊಟ್ಟಿದ್ರು. ಭೇಟಿ ವೇಳೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆ ಬೆಂಬಲಿಗರು ಕಾರ್ಯಕ್ರಮದುದ್ದಕ್ಕೂ ಕ್ಯಾತೆ ತೆಗೆದಿದ್ರು. ಇದೇ ಕಾರಣಕ್ಕೆ ಅಂದು ಸಚಿವ ಅಶ್ವತ್ಥ್ ನಾರಾಯಣ ಕೂಡ ವೇದಿಕೆಯ ಮೇಲೆಯೇ ಗಂಡಸುತನದ ಪ್ರಶ್ನೆ ಎತ್ತಿದ್ರು. ಅಶ್ವತ್ಥ್ ನಾರಾಯಣರ ಬಾಯಲ್ಲಿ ಗಂಡಸುತನದ ಮಾತು ಹೊರಬಿದ್ದಿದ್ದೆ ತಡ, ವೇದಿಕೆಯಲ್ಲೆ ಇದ್ದ ಸಂಸದ ಡಿ.ಕೆ ಸುರೇಶ್ ಸಿಡಿದೆದ್ದಿದ್ರು. ಬಳಿಕ ನಡೆದಿದ್ದೆಲ್ಲವೂ ಹೈಡ್ರಾಮಾ.
ರಾಮನಗರದಲ್ಲಿ ಅಂದು ಸಿಎಂ ಬೊಮ್ಮಾಯಿ ಎದುರೇ ನಡೆದ ಹೈಡ್ರಾಮಾ ಬಳಿಕ ಕಮಲ ಪಡೆ ಸಖತ್ ಪ್ಲಾನ್ ರೂಪಿಸಿದೆ. ಹೇಗಾದರೂ ಸರಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕೈಪಡೆ ಮತ್ತು ದಳಪತಿಗಳ ಭದ್ರಕೋಟೆಯಾಗಿರೋ ರೇಷ್ಮೆ ನಾಡು ರಾಮನಗರಲ್ಲಿ ಕಮಲ ಅರಳಿಸಲೇಬೇಕು ಅನ್ನೊ ಜಿದ್ದಿಗೆ ಬಿದ್ದಿದ್ದಾರೆ. ಈ ಕಾರಣದಿಂದಲೇ ಸಿಎಂ ಬೊಮ್ಮಾಯಿ ಈಗಾಗ್ಲೆ ತೆರೆಮರೆಯಲ್ಲಿ ಸೈಲೆಂಟ್ ಆಗಿಯೇ ಸಾಕಷ್ಟು ರಣತಂತ್ರಗಳನ್ನ ರೂಪಿಸ್ತಿದ್ದಾರೆ. ರಾಮನಗರದಲ್ಲಿ ಗದ್ದುಗೆ ಏರಲು ಸೈನಿಕನಿಗೆ ಜವಾಬ್ದಾರಿ ನೀಡುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಟಾಂಗ್ ಕೊಡಲು ಪ್ಲಾನ್ ಸಿದ್ಧವಾಗಿದೆ.