ಲಂಕಾ ವಿರುದ್ಧದ ಸರಣಿಗೆ ಇಶಾನ್ ಕಿಶನ್​ ಆಯ್ಕೆಯ ಹಿಂದಿದೆ ಒಂದು ದೊಡ್ಡ ಶಕ್ತಿ..!


ವಿಂಡೀಸ್​​​ ಸರಣಿಯಲ್ಲಿ ನಿರೀಕ್ಷೆ ಹುಟ್ಟು ಹಾಕಿ ಹುಸಿಗೊಳಿಸಿದ ಇಶಾನ್​ ಕಿಶನ್​ರನ್ನ ಲಂಕಾ ಸರಣಿಗೂ ಆಯ್ಕೆ ಮಾಡಿದ್ದಕ್ಕೆ ಇದೀಗ ಆಕ್ರೋಶ ವ್ಯಕ್ತವಾಗಿದೆ. ದೇಶಿ ಕ್ರಿಕೆಟ್​​ನಲ್ಲಿ ರನ್ ​​ಹೊಳೆ ಹರಿಸಿದ್ದ ಋತುರಾಜ್​ ಇದ್ದರೂ ಇಶಾನ್​ಗೆ ಪ್ರಾಮುಖ್ಯತೆ ನೀಡಿದ್ದು ಕ್ರಿಕೆಟ್​​ ತಜ್ಞರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಿದ್ರೂ, ಮ್ಯಾನೇಜ್​ಮೆಂಟ್​​ ಬೆಂಬಲಕ್ಕೆ ನಿಂತಿದೆ.

ವೆಸ್ಟ್​ ಇಂಡೀಸ್​​ ಸರಣಿ ಮುಗಿದ ಬೆನ್ನಲ್ಲೇ ಟೀಮ್​ ಇಂಡಿಯಾ, ಶ್ರೀಲಂಕಾ ಎದುರಿನ ಚುಟುಕು ಕದನಕ್ಕೆ ಸಜ್ಜಾಗ್ತಿದೆ. ಸಿಂಹಳೀಯರ ವಿರುದ್ಧ ಘರ್ಜಿಸಿ, ಮತ್ತೊಂದು ಸರಣಿಗೆ ಗೆಲುವಿಗೆ ಮುತ್ತಿಕ್ಕಲು ಭಾರೀ ಸಿದ್ಧತೆ ನಡೆಸಿದೆ. ಇದರ ನಡುವೆಯೇ ವಿಂಡೀಸ್​​ ಸರಣಿಯಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದ ಇಶಾನ್​​ ಕಿಶನ್​​​ಗೆ ಮಣೆ ಹಾಕಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇಶಾನ್​ ಆಯ್ಕೆಯ ಹಿಂದಿರೋ ಶಕ್ತಿ ಯಾವುದು?
ಫೆಲ್ಯೂರ್​​ ಆದಾಗ ವಿಶ್ರಾಂತಿ ನೀಡದೆ ಆಯ್ಕೆ ಮಾಡಿದ್ದು ಯಾಕೆ..? ವೈಫಲ್ಯ ಅನುಭವಿಸಿದರೂ ಇಷ್ಟರ ಮಟ್ಟಿಗೆ ಪ್ರಾಶಸ್ತ್ಯ ನೀಡ್ತಿರೋದು ಸರಿಯೇ? ಎಂಬ ಪ್ರಶ್ನೆಗಳನ್ನ ಮಾಜಿ ಕ್ರಿಕೆಟರ್ಸ್​ ಕೇಳ್ತಿದ್ದಾರೆ. ಇಷ್ಟೆಲ್ಲಾ, ಟೀಕೆಗಳು ಕೇಳಿ ಬರೋದು ತಿಳಿದಿದ್ರೂ, ದ್ವೀಪ ರಾಷ್ಟ್ರದ ಸರಣಿಗೆ ಇಶಾನ್​ ಕಿಶನ್​ರನ್ನ ಆಯ್ಕೆ ಮಾಡಲಾಗಿದೆ. ಇದಕ್ಕೆ ಕಾರಣವಾಗಿದ್ದು, ಹೆಡ್​ ಕೋಚ್​ ರಾಹುಲ್​ ದ್ರಾವಿಡ್ ಕೃಪಾಕಟಾಕ್ಷ.

ಟಿ20 ವಿಶ್ವಕಪ್​​ ಸಂಯೋಜನೆಗೆ ದ್ರಾವಿಡ್​ ಪ್ಲಾನ್​..!
ಹೌದು..! ಅಕ್ಟೋಬರ್​​ನಲ್ಲಿ ನಡೆಯುವ ಟಿ20 ವಿಶ್ವಕಪ್​​​ಗೆ ಸಿದ್ಧತೆಯ ಭಾಗವಾಗಿ ಇಶಾನ್​​ ಆಯ್ಕೆಗೆ ದ್ರಾವಿಡ್​ ಒಲವು ತೋರುತ್ತಿದ್ದಾರಂತೆ. T20 ವಿಶ್ವಕಪ್​ ಶೋಪೀಸ್​​ ಈವೆಂಟ್​ಗಾಗಿ ತಂಡವನ್ನ ಸಂಯೋಜಿಸಲು ಮ್ಯಾನೇಜ್ಮೆಂಟ್​ ಸಿದ್ಧತೆ ನಡೆಸ್ತಿದೆ. ಅದರ ಸಲುವಾಗಿಯೇ ಹೋಮ್​ ಅಸೈನ್ಮೆಂಟ್​​​ನಲ್ಲಿ ಚಾನ್ಸ್​​ ನೀಡಲಾಗ್ತಿದೆ. ಇದು ಮ್ಯಾನೇಜ್​ಮೆಂಟ್​​ ಸ್ಪಷ್ಟವಾದ ಪ್ಲಾನ್​ ಅಂತೆ.

ಇಶಾನ್​ ಕಿಶನ್​ ಟೀಕೆಗೆ ಗುರಿಯಾಗಿರುವ ಬಗ್ಗೆ ಮತ್ತು ಲಂಕಾ ಸರಣಿಗೆ ಆಯ್ಕೆ ಮಾಡಲಾದ ಕುರಿತು ಸ್ವತಃ ದ್ರಾವಿಡ್​ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಆಯ್ಕೆಯನ್ನೂ ಸಮರ್ಥನೆ ಮಾಡಿಕೊಂಡಿದ್ದಾರೆ. ವಿಂಡೀಸ್ ವಿರುದ್ಧ ಇಶಾನ್​​ ತಮ್ಮ ಮೇಲಿರುವ ನಿರೀಕ್ಷೆಗಳನ್ನು ಹುಸಿಗೊಳಿಸಿದ್ರೂ, ಯುವ ಆಟಗಾರನ ಬೆನ್ನಿಗೆ ದ್ರಾವಿಡ್ ನಿಂತಿದ್ದಾರೆ.

‘ಸಾಮರ್ಥ್ಯದ ಮೇಲೆ ಇಶಾನ್​ ಆಯ್ಕೆ’
‘ಸಾಮರ್ಥ್ಯ ಮತ್ತು ಪ್ರದರ್ಶನದ ಮೇಲೆ ಇಶಾನ್​ರನ್ನ ಆಯ್ಕೆ ಮಾಡಲಾಗಿದೆ. ಒಂದು ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ಬರಲಿಲ್ಲ ಎಂದ ಮಾತ್ರಕ್ಕೆ ಅವರ ಆಟವನ್ನ ನಿರ್ಣಯಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಆಟದಲ್ಲಿ ಏರಿಳಿತ ಕಾಣುವುದು ಸಹಜ. ವಿಶ್ವಕಪ್​​​ ದೃಷ್ಟಿಯಿಂದ ಸಾಧ್ಯವಾದಷ್ಟು ಅವಕಾಶ ನೀಡಲು ಪ್ರಯತ್ನಿಸುತ್ತೇವೆ’
ರಾಹುಲ್​​ ದ್ರಾವಿಡ್​, ಹೆಡ್​ಕೋಚ್​​

ರಾಹುಲ್​ ದ್ರಾವಿಡ್​ರ​​​ ಈ ಮಾತುಗಳು ಇಶಾನ್​​ರನ್ನ ಕೈ ಬಿಡಲ್ಲ ಎಂಬುದನ್ನ ಸ್ಪಷ್ಟವಾಗಿ ತಿಳಿಸುತ್ತೆ. ಆದರೆ ಇಶಾನ್​​​ ಮೇಲೆ ಮಾಡುವ ಪ್ರಯೋಗವನ್ನ ಮತ್ತೊಬ್ಬ ಆಟಗಾರನ ಮೇಲೆ ಯಾಕೆ ಮಾಡಲ್ಲ ಎಂಬುದು ಕ್ರಿಕೆಟ್​ ತಜ್ಞರ ಪ್ರಶ್ನೆ. ಇಶಾನ್​ ಕಿಶನ್​ಗೆ ಅವಕಾಶದ ಮೇಲೆ ಅವಕಾಶ ನೀಡ್ತಿರೋ ನೀವು , ಋತುರಾಜ್​ ಗಾಯಕ್ವಾಡ್​​ರನ್ನ ಕಡೆಗಣಿಸ್ತಾ ಇರೋದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರ್ತಿವೆ.

ತಂಡಕ್ಕೆ ಸಮರ್ಥ ಆಟಗಾರರು ಬೇಕು ನಿಜ. ಹಾಗಂತ ವೈಫಲ್ಯ ಕಂಡರೂ ಮತ್ತೆ ಮತ್ತೆ ಅವಕಾಶ ನೀಡೋದು, ಸಾಮರ್ಥ್ಯ ಪ್ರೂವ್​ ಮಾಡಿದ್ರೂ ಬೆಂಚ್​​ನಲ್ಲಿ ಕಾಯಿಸೋದು ಸರಿ ಅಲ್ಲ. ಇರುವ ಆಟಗಾರರಿಗೆ ಸರಿಸಮನಾದ ಅವಕಾಶ ಕೊಟ್ಟು, ಅವರ ಪ್ರದರ್ಶನವನ್ನ ತಾಳೆ ಹಾಕಿ, ಉತ್ತಮ ಪ್ರದರ್ಶನ ನೀಡಿದವರಿಗೆ ಅವಕಾಶ ನೀಡಬೇಕು ಅಂತಿದ್ದಾರೆ ಕ್ರಿಕೆಟ್ ಸ್ಪೆಷಲಿಸ್ಟ್ಸ್​​. ಮುಂದಾದ್ರೂ ಬೆಂಚ್​​ ಕಾದ ಆಟಗಾರರಿಗೆ ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ.

News First Live Kannada


Leave a Reply

Your email address will not be published. Required fields are marked *