T20 ವಿಶ್ವಕಪ್ಗೆ ಟೀಮ್ ಇಂಡಿಯಾ ಆಯ್ಕೆಯ ಸಂದರ್ಭದಲ್ಲಿ, ಹಾರ್ದಿಕ್ ಬಗ್ಗೆ ಪ್ರಶ್ನೆಗಳು ಎದ್ದಿದ್ವು. ಆದ್ರೆ ವಿಶ್ವಕಪ್ ಮುಕ್ತಾಯದ ಹಂತಕ್ಕೆ ಬಂದರೂ, ಈ ಪ್ರಶ್ನೆಗಳು ನಿಂತಿಲ್ಲ. ಇದೀಗ ಟೀಮ್ ಇಂಡಿಯಾ ಮಾಜಿ ಸೆಲೆಕ್ಟರ್ಸ್, ಐದು ಪ್ರಶ್ನೆಗಳನ್ನ ಆಯ್ಕೆ ಸಮಿತಿ, ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ಗೆ ಹಾಕಿದ್ದಾರೆ. ಇವರ ವಿರುದ್ಧ ಗುಡುಗಿದ್ದಾರೆ ಕೂಡ.
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಲೀಗ್ ಹಂತದಲ್ಲೇ ಭಾರತ ಹೊರ ಬಿದ್ದು, ಸಾಕಷ್ಟು ನಿರಾಸೆ ಮೂಡಿಸಿದೆ. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಆಯ್ಕೆಯ ಕುರಿತು ಪ್ರಶ್ನೆ ಎದ್ದಿದೆ. ಹೌದು, ಭಾರತ ತಂಡದ ಮಾಜಿ ಆಯ್ಕೆ ಸಮಿತಿ ಸದಸ್ಯರಾದ MSK ಪ್ರಸಾದ್, ಸರಣ್ದೀಪ್ ಸಿಂಗ್, ಆಶಿಶ್ ಕಪೂರ್, ಕೀರ್ತಿ ಆಜಾದ್, ಸಂದೀಪ್ ಪಾಟೀಲ್ BCCI ವಿರುದ್ಧ ಸಿಡಿದೆದ್ದಿದ್ದಲ್ಲದೆ, ಪ್ರಶ್ನೆಗಳನ್ನೇ ಸುರಿಸಿಬಿಟ್ಟಿದ್ದಾರೆ.
ಸೆಲೆಕ್ಟರ್ಸ್ಗೆ ಹಾರ್ದಿಕ್ ಫಿಟ್ನೆಸ್ ಬಗ್ಗೆ ಗೊತ್ತಿರಲಿಲ್ಲವೇ..?
ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಕುರಿತು ಮೊದಲ ಪ್ರಶ್ನೆ ಎತ್ತಿರೋದು ಸರಣ್ದೀಪ್ ಸಿಂಗ್. ವಿಶ್ವಕಪ್ಗೆ ತಂಡದ ಆಯ್ಕೆ ಮಾಡೋವಾಗ ಪಾಂಡ್ಯ ಫಿಟ್ನೆಸ್ ಕುರಿತು ಆಯ್ಕೆ ಸಮಿತಿಗೆ ಗೊತ್ತಿರಲಿಲ್ಲವೇ..? ಒಂದು ವೇಳೆ ಗೊತ್ತಿದ್ದರೆ ಆಯ್ಕೆ ಮಾಡಿದ್ಯಾಕೆ.? ಇಲ್ಲ, ಹಾರ್ದಿಕ್ ಇಂಜುರಿ ಬಗ್ಗೆ ಸೆಲೆಕ್ಷನ್ ಕಮಿಟಿಗೆ ತಿಳಿದಿತ್ತಾ.? ಹೀಗೆ ಪ್ರಶ್ನೆ ಕೇಳಿದ್ದಲ್ಲದೆ, ಆಯ್ಕೆ ಸಮಿತಿ ಮುಖ್ಯಸ್ಥರು ಉತ್ತರಿಸಬೇಕು ಅಂತ ಸಿಂಗ್ ಒತ್ತಾಯಿಸಿದ್ದಾರೆ.
ಆರನೇ ಬೌಲರ್ ಆಯ್ಕೆ ಮಾಡದಿರೋದಕ್ಕೆ ಕಾರಣವೇನು..?
ಚುಟುಕು ಕ್ರಿಕೆಟ್ನಲ್ಲಿ ಆರನೇ ಬೌಲರ್ ಅತ್ಯಗತ್ಯ. ಆದರೆ ಹಾರ್ದಿಕ್ ಅನ್ಫಿಟ್ ಇದ್ದರೂ, ಅವರನ್ನೇ ಆಯ್ಕೆ ಮಾಡಿದ್ಯಾಕೆ? ಐವರು ಬೌಲರ್ಗಳಿಂದ ನಿರೀಕ್ಷಿತ ಪ್ರದರ್ಶನ ಬರದಿದ್ದಾಗ, 6ನೇ ಬೌಲರ್ ಮೊರೆ ಹೋಗುತ್ತೇವೆ. ಆದ್ರೆ ಬೌಲಿಂಗ್ ಮಾಡದ ಹಾರ್ದಿಕ್ರಿಂದ ಏನು ನಿರೀಕ್ಷಿಸಲು ಸಾಧ್ಯವಾಗುತ್ತೆ.? ಬೌಲಿಂಗ್ನಲ್ಲಿ ಆನ್ಫಿಟ್ ಆದ ಹಾರ್ದಿಕ್ಗೆ ಚಾನ್ಸ್ ಕೊಟ್ಟಿದ್ಯಾಕೆ ಅನ್ನೋದಕ್ಕೆ ಸ್ಪಷ್ಟ ನೀಡಬೇಕು ಎಂದಿದ್ದಾರೆ ಕೀರ್ತಿ ಆಜಾದ್.
IPLನಲ್ಲಿ ಬೌಲಿಂಗ್ ಮಾಡದ ಹಾರ್ದಿಕ್ಗೆ ಮಣೆ ಹಾಕಿದ್ಯಾಕೆ?
IPLನಲ್ಲಿ ಹಾರ್ದಿಕ್ ಒಂದೇ ಒಂದು ಓವರ್ ಕೂಡ ಬೌಲಿಂಗ್ ಮಾಡಿರಲಿಲ್ಲ. ಆಗಲೇ ಇಂಜುರಿ ಕುರಿತು ಹಲವು ಪ್ರಶ್ನೆಗಳು ಬೆಳಕಿಗೆ ಬಂದಿದ್ವು. ಹೀಗಿದ್ರೂ ವಿಶ್ವಕಪ್ಗೆ ಮಣೆ ಹಾಕಿದ್ದು ಯಾವ ಕಾರಣಕ್ಕಾಗಿ? ಒಂದ್ವೇಳೆ IPLನಲ್ಲಿ ಬೌಲಿಂಗ್ ಮಾಡಿ ಸಂಪೂರ್ಣ ಫಿಟ್ ಆಗಿದ್ರೆ, ಚಾನ್ಸ್ ನೀಡುವುದರಲ್ಲಿ ಅರ್ಥವಿತ್ತು. ಆದರೆ ಇದರಲ್ಲಿ ವಿಫಲರಾದ ಹಾರ್ದಿಕ್ರನ್ನ ಯಾವ ಆಧಾರದಲ್ಲಿ ಸೆಲೆಕ್ಟ್ ಮಾಡಲಾಯ್ತು ಎಂದು ಹೇಳಬೇಕು ಅಂತ ಆಶಿಶ್ ಕಪೂರ್ ಕೇಳಿದ್ದಾರೆ.
ಆಲ್ರೌಂಡರ್ ಎಂದು ಆಯ್ಕೆ ಮಾಡಿ ಬ್ಯಾಟ್ಸ್ಮನ್ ಮಾಡಿದ್ದೇಕೆ?
ಹಾರ್ದಿಕ್ರನ್ನ ಆಲ್ರೌಂಡರ್ ಕೋಟಾದಲ್ಲಿ ಆಯ್ಕೆ ಮಾಡಲಾಯ್ತು. ಆದರೆ ಕೇವಲ ಬ್ಯಾಟ್ಸ್ಮನ್ ಆಗಿ ಉಳಿಸಿಕೊಂಡ್ರು. ಯಾವ ನಿರ್ಧಾರ ಈ ರೀತಿ ಮಾಡಲಾಯ್ತು.? ವಿಶ್ವಕಪ್ನಲ್ಲಿ ಬೌಲಿಂಗ್ ಮಾಡದಂತೆ ಸೂಚನೆ ನೀಡಿದ್ರಾ? ಹಾರ್ದಿಕ್ ವಿಷಯದಲ್ಲಿ ಆಯ್ಕೆ ಸಮಿತಿ ಆಲೋಚನಾ ಪ್ರಕ್ರಿಯೆಯೇ ಏನೆಂದು ಗೊತ್ತಾಗುತ್ತಿಲ್ಲ. ಇದು ಮ್ಯಾನೇಜ್ಮೆಂಟ್ ನಡೆಯನ್ನ ಪರೀಕ್ಷಿಸುವಂತಿದೆ ಎಂದಿದ್ದಾರೆ ಎಂಎಸ್ಕೆ ಪ್ರಸಾದ್.
ಹಾರ್ದಿಕ್ ಆಯ್ಕೆಗೂ ಮುನ್ನ ಫಿಟ್ನೆಸ್ ವರದಿ ಕೇಳಬೇಕಿತ್ತು..?
ಪ್ಲೇಯಿಂಗ್ ಇಲೆವೆನ್ಗೆ ಹಾರ್ದಿಕ್ ಆಯ್ಕೆಯು ನಾಯಕ ಮತ್ತು ಕೋಚ್ಗೆ ಬಿಟ್ಟದ್ದು. ಆದರೆ ಮೂಲಭೂತವಾಗಿ ಆಟಗಾರನು ಫಿಟ್ ಆಗದಿದ್ದರೆ, ಪ್ರಶ್ನಿಸಬೇಕಾಗಿರೋದು ಆಯ್ಕೆದಾರರನ್ನ. IPLನಲ್ಲಿ ಬೌಲಿಂಗ್ ಮಾಡದ ಹಾರ್ದಿಕ್ರನ್ನ ವಿಶ್ವಕಪ್ಗೆ ಆಯ್ಕೆಗೆ ಮೊದಲು, ಫಿಟ್ನೆಸ್ ವರದಿ ಕೇಳಬೇಕಾಗಿತ್ತು. ಇದನ್ನೇಕೆ ಮಾಡಲಿಲ್ಲ ಎಂದು ಸಂದೀಪ್ ಪಾಟೀಲ್ ಪ್ರಶ್ನಿಸಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆಗಳ ನಂತರ ಹಾರ್ದಿಕ್ರ ಫಿಟ್ನೆಸ್ ವರದಿಯನ್ನ ಸಲ್ಲಿಸುವಂತೆ ಟೀಮ್ ಮ್ಯಾನೇಜ್ಮೆಂಟ್ ಮತ್ತು ಸೆಲೆಕ್ಷನ್ ಕಮಿಟಿಗೆ ಬಿಸಿಸಿಐ ಸೂಚಿಸಿದೆ.