
ಮೂವರನ್ನು ವಶಕ್ಕೆ ಪಡೆದ ಪೊಲೀಸರು.
2022ರ ಏ.19ರಂದು ರಾಜಶ್ರೀ ಥಿಯೇಟರ್ನಲ್ಲಿ ನಡೆದಿದ್ದ ಫೈರಿಂಗ್ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮಂಜುನಾಥ ಅಲಿಯಾಸ್ ಸಂತೋಷ್ ಮಲ್ಲಿಕ್ ಪಾಟೀಲ್ ಬಂಧನ ಬಳಿಕ, ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ: ಜಿಲ್ಲೆಯ ಶಿಗ್ಗಾಂವಿಯ ಚಿತ್ರಮಂದಿರದಲ್ಲಿ ಫೈರಿಂಗ್ ಪ್ರಕರಣ ಸಂಬಂಧ ಮತ್ತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಸ್ತೂಲ್, ಗುಂಡುಗಳನ್ನು ತಯಾರಿಸಿ ಕೊಟ್ಟಿದ್ದ ಮೂವರನ್ನ ವಶಕ್ಕೆ ಪಡೆಯಲಾಗಿದ್ದು, ಬಿಹಾರದ ಮುಂಗೇರ ಜಿಲ್ಲೆಯ ಮಿರ್ಜಾಪುರ ಬರದಾದಲ್ಲಿ ಬಂಧಿಸಿ, ಹಾವೇರಿಗೆ ಕರೆತರಲಾಗುತ್ತಿದೆ. ಮೊಹಮ್ಮದ್ ಸಮ್ಸದ್ ಅಲಾಮ, ಮೊಹಮ್ಮದ್ ಆಸೀಫ್ ಅಲಾಮ ಮತ್ತು ಮೊಹಮ್ಮದ್ ಸಾಹೀದ್ ಚಾಂದ್ನನ್ನು ಬಂಧಿತ ಆರೋಪಿಗಳು. ಶಿಗ್ಗಾಂವಿ ಸಿಪಿಐ ಬಸವರಾಜ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. 2022ರ ಏ.19ರಂದು ರಾಜಶ್ರೀ ಥಿಯೇಟರ್ನಲ್ಲಿ ಫೈರಿಂಗ್ ನಡೆದಿತ್ತು. ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ಅಲಿಯಾಸ್ ಸಂತೋಷ್ ಮಲ್ಲಿಕ್ ಪಾಟೀಲ್ನನ್ನು ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಶಿಗ್ಗಾಂವಿ ಠಾಣೆ ಪೊಲೀಸರ ಕಾರ್ಯಕ್ಕೆ ಡಿಜಿ ಮತ್ತು ಐಜಿಪಿ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿಬ್ಬಂದಿಗೆ ಒಂದು ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ. ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ:
ಏಪ್ರಿಲ್ 19,2022. ಸಮಯ ರಾತ್ರಿ ಹತ್ತು ಗಂಟೆ. ಸ್ಥಳ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಲನಚಿತ್ರ ಮಂದಿರ. ಚಿತ್ರಮಂದಿರದಲ್ಲಿದ್ದ ಜನರೆಲ್ಲ ಕೆಜಿಎಫ್ 2 ಚಿತ್ರ ವೀಕ್ಷಣೆ ಮಾಡ್ತಿದ್ರು. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಚಿತ್ರಮಂದಿರದಲ್ಲಿ ಗುಂಡಿನ ಸದ್ದು ಮೊಳಗಿತ್ತು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಎಂಬ ಯುವಕನ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡಿನ ದಾಳಿಗೆ ಒಳಗಾಗಿದ್ದ ಯುವಕ ರಕ್ತಸಿಕ್ತವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೆ ಗಾಯಾಳುವಿಗೆ ಶಿಗ್ಗಾಂವಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ರು. ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆಗೆ ಇಳಿದಿದ್ರು.