ಬಾಲಿವುಡ್ನ ಬಾಕ್ಸ್ ಆಫೀಸ್ ಕಿಂಗ್ ಆಗಿರೋ ಸಲ್ಮಾನ್ ಖಾನ್ ಅದೆಷ್ಟು ಜನರಿಗೆ ನ್ಯಾಯ ಕೊಡಿಸಿದ್ದಾರೆ. ಕಷ್ಟದಲ್ಲಿದ್ದವರ ಕಣ್ಣೀರು ಒರೆಸಿದ್ದಾರೆ. ಕಳ್ಳರಿಂದ, ದರೋಡೆಕೋರರಿಂದ ಜನರನ್ನು ರಕ್ಷಿಸಿದ್ದಾರೆ, ಭೂಮಾಪಿಯಾಗಳ ವಿರುದ್ಧ ಗುಡುಗಿದ್ದಾರೆ…. ಆದ್ರೆ, ಇದೆಲ್ಲವೂ ತೆರೆಯ ಮೇಲಿನ ಕಥೆ. ಇದೇ ಸಲ್ಲು ಭಾಯ್ನ ರಿಯಲ್ ಕಿರಿಕ್ ಸ್ಟೋರಿ ತೋರಿಸುತ್ತೇವೆ ನೋಡಿ. ಅದನ್ನು ನೋಡಿ, ಸಲ್ಲು ರಿಯಲ್ ಹೀರೋನಾ ಅಥವಾ ವಿಲನ್ನಾ? ಅನ್ನೋದನ್ನು ನೀವೇ ನಿರ್ಧರಿಸಿ.
ಸಲ್ಮಾನ್ ಖಾನ್ ಬಾಲಿವುಡ್ನ ಟಾಪ್ ಹೀರೋ. ಕೆಲವು ವರ್ಷಗಳಿಂದ ಈತ ಮುಟ್ಟಿದೆಲ್ಲ ಚಿನ್ನ ಅನ್ನುವಂತೆ ಅಭಿನಯಿಸಿದ ಚಿತ್ರಗಳೆಲ್ಲಾ ಗಲ್ಲಾ ಪೆಟ್ಟಿಗೆಯಲ್ಲಿ ಧೂಳ್ ಎಬ್ಬಿಸುತ್ತಿವೆ. ಈತನ ಚಿತ್ರಕ್ಕೆ ನಿರ್ಮಾಪಕರು ಎಷ್ಟು ಬಂಡವಾಳ ಹೂಡುತ್ತಾರೋ ಅದರ ನಾಲ್ಕು ಪಟ್ಟು ಲಾಭಗಳಿಸುತ್ತಾರೆ. ಹೀಗಾಗಿ ಸಲ್ಲು ಕಾಲ್ ಶೀಟ್ಗಾಗಿ ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ. ಇನ್ನು ಹೀರೋಯಿನ್ಗಳಿಗೆ ಜೀವಮಾನದಲ್ಲಿ ಒಮ್ಮೆಯಾದ್ರೂ ಸಲ್ಮಾನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಬೇಕು ಅನ್ನೋ ಆಸೆ ಇರುತ್ತೆ. ಯೆಸ್, ಸಲ್ಲು ಅಷ್ಟೊಂದು ಜನಪ್ರಿಯ ನಾಯಕ. ಇನ್ನು ಯಾವಾಗ ನೋಡಿದ್ರೂ ಸಿನಿಮಾ ಶೂಟಿಂಗ್ನಲ್ಲಿ ಬ್ಯೂಸಿ ಇರೋ ಸಲ್ಲು, ಬಿಡುವಿರೋದೇ ಕಡಿಮೆ. ಹಾಗೊಮ್ಮೆ ಬಿಡುವು ಇದ್ರೆ ಏನು ಮಾಡ್ತಾರೋ ಗೊತ್ತಾ?
ವ್ಹಾವ್! ಬಾಲಿವುಡ್ನ ಟಾಪ್ 1 ಹೀರೋ ಆಗಿದ್ರು ಸಲ್ಲು ಏನು ಮಾಡ್ತಾ ಇದ್ದಾರೆ ನೋಡಿ. ಇದು ಯಾವುದೇ ಸಿನಿಮಾದ ಸೀನ್ಗಳು ಅಲ್ಲ. ರಿಯಲ್ ಸೀನ್ಗಳು. ಹೌದು, ಮುಂಬೈನ ಹೊರ ಭಾಗದಲ್ಲಿ ಸಲ್ಲು ದೊಡ್ಡ ಫಾರ್ಮ್ಹೌಸ್ವೊಂದನ್ನು ಖರೀದಿಸಿದ್ದಾರೆ. ಅದರ ಹೆಸರು ಪಾನ್ವೆಲ್ ಫಾರ್ಮ್ಹೌಸ್, ಸುಮಾರು 150 ಎಕರೆಯಲ್ಲಿ ವಿಶಾಲವಾಗಿ ಹರಡಿಕೊಂಡಿದೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಸಲ್ಲು ಅಲ್ಲಿಗೆ ಹಾಜರ್ ಆಗುತ್ತಾರೆ. ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಸ್ನೇಹಿತರನ್ನು ಸ್ನೇಹಿತರೆಯರನ್ನು ಕರೆದುಕೊಂಡು ಹೋಗಿ ಪಾರ್ಟಿ ಮಾಡುತ್ತಾರೆ. ಇಷ್ಟೇ ಆದ್ರೆ, ಸಲ್ಲು ಬಗ್ಗೆ ಹೆಮ್ಮೆ ಪಡಬಹುದಿತ್ತು. ಆದ್ರೆ, ಸಲ್ಲು ವಿರುದ್ಧ ಒಂದು ಗಂಭೀರ ಆರೋಪ ಕೇಳಿಬಂದಿದೆ.
ನೆರೆಮನೆಯವರೊಂದಿಗೆ ಸಲ್ಮಾನ್ ಖಾನ್ ಕಿರಿಕ್
ಬೇರೆಯವರ ಭೂಮಿ ಮೇಲೆ ಸಲ್ಲು ಕಣ್ಣು ಹಾಕಿದ್ರಾ?
ತೆರೆಯ ಮೇಲೆ ದುಷ್ಟರ ವಿರುದ್ಧ ಹೋರಾಡಿ ನ್ಯಾಯ ಕೊಡಿಸಿದವರು ಸಲ್ಮಾನ್ ಖಾನ್. ಆದ್ರೆ, ಇಲ್ಲಿ ಸಲ್ಲು ವಿರುದ್ಧವೇ ಆರೋಪ ಬಂದಿದೆ. ಹೌದು, ಸಲ್ಲು ಫಾರ್ಮ್ ಹೌಸ್ ಪಕ್ಕವೇ ಕೇತನ್ ಕಕ್ಕಡ್ ಅನ್ನೋರು 2.5 ಎಕರೆ ಭೂಮಿಯನ್ನು 1995 ರಲ್ಲಿ ಖರೀದಿಸಿದ್ದಾರೆ. ವಿಶೇಷ ಅಂದ್ರೆ ಈ ಜಾಗ ಖರೀದಿಗೆ ಸಲಹೆ ನೀಡಿದು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್. ಮುಂಬೈನಲ್ಲಿ ವಾಸವಿದ್ದ ಕೇತನ್ ಕಕ್ಕಡ್ ಕುಟುಂಬ ಆಗಾಗ ತಮ್ಮ ಜಾಗಗಕ್ಕೆ ಭೇಟಿ ನೀಡಿ ಬರ್ತಾ ಇದ್ರು. ಹಾಗೇ ಪಕ್ಕದಲ್ಲೇ ಇರೋ ಸಲ್ಲು ಫಾರ್ಮ್ ಹೌಸ್ಗೂ ಭೇಟಿ ನೀಡ್ತಾ ಇದ್ರು. ಆ ಸಂದರ್ಭದಲ್ಲಿ ಪಾರ್ಮ್ ಹೌಸ್ನಲ್ಲಿ ಇದ್ದವರು ಕೇತನ್ ಕಕ್ಕಡ್ ಅವರನ್ನು ಚೆನ್ನಾಗಿಯೋ ನೋಡಿಕೊಳ್ತಾ ಇದ್ರು.
ವಿದೇಶದಲ್ಲಿ ನೆಲೆಸಿದ್ದ ಕೇತನ್ ಕಕ್ಕಡ್ ಕುಟುಂಬ ಇತ್ತೀಚಿನ ವರ್ಷಗಳಲ್ಲಿ ಮುಂಬೈಗೆ ಬಂದು ನೆಲೆಸಿದೆ. ಹಾಗೇ ದುಡಿಮೆಯ ದುಡ್ಡಿನಲ್ಲಿಯೇ ಸಲ್ಲು ಫಾರ್ಮ್ ಹೌಸ್ ಪಕ್ಕವೇ 2.5 ಎಕರೆ ಜಾಗವನ್ನು ಖರೀದಿಸಿದ್ದಾರೆ. ಇದೇ ಜಾಗದ ಮೇಲೆ ಸಲ್ಲು ಕಣ್ಣು ಹಾಕಿದ್ದಾರೆ ಅನ್ನೋ ಆರೋಪ ಕೇತನ್ ಕುಟುಂಬದ್ದು.
ಸಲ್ಲು ಆದ್ರಾ ವಿಲನ್?
ಖರೀದಿಸಿದ ಆಸ್ತಿಗೆ 2014 ರಲ್ಲಿ ತೆರಳಲು ಕೇತನ್ ಕುಟುಂಬ ಪ್ಲಾನ್
ಅದೇ ಸ್ಥಳದಲ್ಲಿ ಒಂದು ಚಿಕ್ಕ ಆಶ್ರಮ ನಿರ್ಮಿಸಲು ಯೋಜನೆ
ಒಂದು ಚಿಕ್ಕ ದೇವಾಲಯ ನಿರ್ಮಿಸಿ ಆಗಾಗ ಭೇಟಿ ನೀಡಿ ಪೂಜೆ
2019 ರಿಂದ ಆ ಜಾಗಕ್ಕೆ ಹೋಗಲು ಸಲ್ಮಾನ್ ಕುಟುಂಬ ಅಡ್ಡಿ
ಪದೇ ಪದೇ ಮನವಿ ಮಾಡಿದ್ರೂ ಅವಕಾಶ ನೀಡದ ಸಲ್ಲು ಭಾಯ್
ಅರಣ್ಯ, ಕಂದಾಯ ಇಲಾಖೆಗೆ ಮನವಿ ಮಾಡಿದ್ರೂ ನೆರವು ನೀಡ್ತಿಲ್ಲ
ಸಲ್ಲು ವಿರುದ್ಧ ಕೇತನ್ ಕುಟುಂಬ ಮಾಡಿರೋ ಆರೋಪ ನೋಡಿದ್ರೆ ಸಲ್ಲು ವಿಲನ್ ಆಗಿ ಬಿಟ್ರಾ ಅನಿಸೋದು ಸಹಜ. ಹೌದು. 2014 ರಲ್ಲಿ ಕೇತನ್ ಕುಟುಂಬ ಆ ಜಾಗಕ್ಕೆ ಹೋಗಲು ತೀರ್ಮಾನಿಸಿತ್ತು. ಹಾಗೇ ಅದೇ ಸ್ಥಳದಲ್ಲಿ ಒಂದು ಚಿಕ್ಕ ಆಶ್ರಮ ನಿರ್ಮಿಸಲು ಯೋಜನೆ ಮಾಡಿಕೊಂಡಿತ್ತು. ಹಾಗೇ ಒಂದು ಚಿಕ್ಕ ದೇವಾಲಯ ನಿರ್ಮಿಸಿ ಆಗಾಗ ಭೇಟಿ ನೀಡಿ ಕೇತನ್ ಕುಟುಂಬ ಪೂಜೆ ಮಾಡಿ ಬರ್ತಾ ಇತ್ತು. ಆದ್ರೆ, 2019 ರಿಂದ ಸಲ್ಲು ಕುಟುಂಬ ಆ ಜಾಗಕ್ಕೆ ಹೋಗಲು ಅವಕಾಶವನ್ನೇ ನೀಡುತ್ತಿಲ್ಲವಂತೆ. ಪದೇ ಪದೇ ಮನವಿ ಮಾಡಿದ್ರೂ ಹೋಗಲು ಅವಕಾಶ ನೀಡುತ್ತಿಲ್ಲ ಅನ್ನೋದು ಕೇತನ್ ಕುಟುಂಬದ ಆರೋಪ. ಈ ಬಗ್ಗೆ ಅರಣ್ಯ ಇಲಾಖೆ, ಕಂದಾಯ ಇಲಾಖೆಯನ್ನು ಸಂಪರ್ಕಿಸಿದ್ರೂ ಏನೂ ಪ್ರಯೋಜನವಾಗಿಲ್ಲ ಅನ್ನುತ್ತಾರೆ ಕೇತನ್.
ಯೆಸ್, ಸಲ್ಲು ವಿರುದ್ಧ ಇಂತಹವೊಂದು ಗಂಭೀರ ಆರೋಪ ಬಂದಿದೆ. ಕಂದಾಯ, ಅರಣ್ಯ ಇಲಾಖೆಯವರು ಸಹಕಾರ ನೀಡುತ್ತಿಲ್ಲ ಅನ್ನೋದನ್ನು ಹೇಳಿದ್ದಾರೆ. ಹಾಗೇ ನೋಡಿದ್ರೆ, ಪ್ರಭಾವಿ ಆದವರು ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದು ಹೊಸ ವಿಚಾರವಲ್ಲ. ಎಲ್ಲಾ ಕಡೆಯೂ ಆ ರೀತಿಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಹೇಗಿದ್ರು ರಾಜಕೀಯ ಲಿಂಕ್ ಇರೋದ್ರಿಂದ ಅಧಿಕಾರಗಳ ಮೇಲೆ ನೇರವಾಗಿ ಪರಿಣಾಮ ಬೀರಲು ಸಾಧ್ಯವಾಗುತ್ತೆ.
ಸಲ್ಲು ಕುಟುಂಬದ ವಿರುದ್ಧ ಕೇತನ್ ಕುಟುಂಬ ಆಕ್ರೋಶ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್
ಇನ್ನು ಇದೇ ವಿಚಾರವಾಗಿ ಕೇತನ್ ಕುಟುಂಬ ಯೂಟ್ಯೂಬ್ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ, ತಾನು ಭೂಮಿ ಖರೀದಿಸಿದ್ದು ಯಾವಾಗ? ಸಲ್ಲು ಕುಟುಂಬ ಆರಂಭದಲ್ಲಿ ತಮ್ಮ ಜೊತೆ ಹೇಗಿದ್ರು? ಈಗ ಯಾವ ರೀತಿಯ ಕಿರುಕುಳ ನೀಡ್ತಾ ಇದ್ದಾರೆ ಅನ್ನೋದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ತೆರೆಯ ಮೇಲೆ ಸಲ್ಲು ಅನ್ನೋ ಹೀರೋ ಆಗಿ ನೋಡಿದ ಅಭಿಮಾನಿಗಳು ಇದೇನಿದು ಅಂತ ಅಚ್ಚರಿಯಿಂದ ನೋಡಿದ್ದಾರೆ. ಬಾಲಿವುಡ್ನಲ್ಲಿ ಹೀರೋ ಆದವರು ತೆರೆಯ ಹಿಂದೆ ಹೇಗಿರುತ್ತಾರೆ ನೋಡಿ ಅಂತ ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋಗಳನ್ನು ವೈರಲ್ ಮಾಡಲಾಗಿದೆ. ಇನ್ನು ಇದೇ ವಿಚಾರ ಸಲ್ಲು ಕೋಪವನ್ನು ನೆತ್ತಿಗೇರಿಸಿ ಬಿಟ್ಟಿದೆ.
ಮಾನನಷ್ಟ ಮೊಕದ್ದಮೆ ಹಾಕಿದ ಸಲ್ಮಾನ್ ಖಾನ್
ಧರ್ಮದ ವಿಚಾರ ಎಳೆತಂದಿದ್ದಾರೆ ಅಂದ ಸಲ್ಲು
ಕೇತನ್ ಕುಟುಂಬ ಹೇಳಿಕೆ ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತೋ ಅದನ್ನು ನೋಡಿ ಸಲ್ಲು ಕ್ರುದ್ಧರಾಗಿ ಹೋಗಿದ್ದಾರೆ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ತನ್ನ ಧರ್ಮದ ವಿಚಾರ ಎತ್ತಲಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ತಂದೆ ಮುಸ್ಲಿಂ, ತಾಯಿ ಹಿಂದೂ, ನನ್ನ ಸಹೋದರರು ಹಿಂದು ಧರ್ಮದವನ್ನು ವಿವಾಹವಾಗಿದ್ದಾರೆ. ನಮ್ಮ ಮನೆಯಲ್ಲಿ ಹಿಂದೂ ಮುಸ್ಲಿಂ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಭೂಮಿ ವಿಚಾರದಲ್ಲಿ ಧರ್ಮದ ವಿಚಾರ ಎಳೆತಂದಿದ್ದು ಯಾಕೆ ಅಂತ ಕೋರ್ಟ್ನಲ್ಲಿ ತಮ್ಮ ವಕೀಲರ ಮೂಲಕ ಹೇಳಿಸಿದ್ದಾರೆ. ಇನ್ನು ಯುಟ್ಯೂಬ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಡಿರೋ ಎಲ್ಲಾ ಆರೋಪಗಳ ವಿಡಿಯೋವನ್ನು ರದ್ದು ಮಾಡಬೇಕು ಅಂತ ವಕೀಲರ ಮೂಲಕ ಕೋಟ್ಗೆ ಮನವಿ ಮಾಡಿದ್ದಾರೆ.
ಸಲ್ಲು, ಕೇತನ್ ಕುಟುಂಬದ ನಡುವೆ ಆಗಿದ್ದಾದ್ರೂ ಏನು?
ಏನೂ ಇಲ್ಲದೇ ಸುಮ್ಮನೇ ಆರೋಪ ಮಾಡಲು ಸಾಧ್ಯನಾ?
ಸಲ್ಲು ಮತ್ತು ಕೇತನ್ ಕುಟುಂಬ ಮೊದಲಿನಿಂದಲೂ ಪರಿಚಯಸ್ಥರು. ಆರಂಭದಲ್ಲಿಯೂ ಎರಡೂ ಕುಟುಂಬಗಳ ನಡುವೆ ಅನ್ಯೂನ್ಯ ಸಂಬಂಧ ಇತ್ತು. ಆದ್ರೆ, ಅದ್ಯಾವಾಗ ಆ ಭೂಮಿಗೆ ಹೋಗಲು ಕೇತನ್ ಕುಟುಂಬ ನಿರ್ಧರಿಸಿತೋ ಆವಾಗಲೇ ಕಿರಿಕ್ ಆರಂಭವಾಗಿದೆ. ಇಲ್ಲಿ ಕೇತನ್ ಕುಟುಂಬ ಹೇಳುತ್ತಿರುವುದು ಮೇಲ್ನೋಟಕ್ಕೆ ಸರಿ ಇರುವಂತೆ ಕಾಣಿಸುತ್ತಿದೆ. ಏನೂ ಇಲ್ಲದೇ ಹೊಗೆ ಆಡಲು ಸಾಧ್ಯವೇ ಇಲ್ಲ. ಆದ್ರೆ, ಇದೇ ವಿಚಾರವಾಗಿ ಧರ್ಮದ ವಿಚಾರವನ್ನು ಕೇತನ್ ಕುಟುಂಬ ಎತ್ತಿದ್ರೆ ಅದು ತಪ್ಪು. ಹಾಗೇ ಈ ವಿಚಾರವಾಗಿ ಸಲ್ಲು ಕುಟುಂಬ ಏನೂ ಸ್ಪಷ್ಟನೆ ಕೊಟ್ಟಿಲ್ಲ. ಧರ್ಮದ ವಿಚಾರ ಎತ್ತಿ ಮಾನಹಾನಿ ಮಾಡಲಾಗಿದೆ ಅಂತ ಮಾತ್ರ ಹೇಳಿದ್ದಾರೆ. ಹೀಗಾಗಿ ಸಲ್ಲು ಹೇಳಿಕೆ ಹೊರ ಬಿದ್ದಷ್ಟು ಸತ್ಯಾಂಶ ಏನು ಅನ್ನೋದು ಬೆಳಕಿಗೆ ಬರಲ್ಲ.
ಬ್ಯಾಡ್ ಭಾಯ್ ಸಲ್ಲುಗೆ ವಿವಾದಗಳು ಕಾಮನ್
ಬಿಟೌನ್ನಲ್ಲಿಯೇ ಹೆಚ್ಚು ವಿವಾದ ಹೊಂದಿರೋ ವ್ಯಕ್ತಿ
ಸಲ್ಲು ಅಂದ್ರೆ ಬಾಲಿವುಡ್, ಬಾಲಿವುಡ್ ಅಂದ್ರೆ ಸಲ್ಲು ಅನ್ನೋ ರೇಂಜ್ಗೆ ಹೆಸರು ಮಾಡಿದ್ದು ನಟ. ಅದ್ಯಾಕೋ ವಿವಾದಕ್ಕೂ ಈ ನಟನಿಗೂ ಅವಿನಾಭಾವ ಸಂಬಂಧ. ಸದಾ ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಇದ್ದೇ ಇರುತ್ತಾನೆ. ಹಿಟ್ ಅಂಡ್ ರನ್, ಕೃಷ್ಣ ಮೃಗಬೇಟೆ, ಬಾಲಿವುಡ್ ನಟರ ಜೊತೆ ಗಲಾಟೆ…..ಹೀಗೆ ಸಾಲು ಸಾಲು ವಿವಾದಗಳನ್ನು ಸಲ್ಲು ಹೊಂದಿದ್ದಾನೆ. ಜೈಲಿಗೂ ಹೋಗಿ ಬಂದಿದ್ದಾನೆ. ಇದೇ ಕಾರಣಕ್ಕೆ ಸಲ್ಲುಗೆ ವಿವಾದ ಅನ್ನೋದು ಹೊಸದು ಅಲ್ಲವೇ ಅಲ್ಲ. ಆದ್ರೆ, ಈ ವಿವಾದ ಬಡವರ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂಗೆ ಇದೆ. ಆದಷ್ಟು ಬೇಗ ಕೇತನ್ ಕುಟಂಬಕ್ಕೆ ನ್ಯಾಯ ದೊರಕಿಸಬೇಕು.
ನೋಡಿದ್ರಲ್ವ, ತೆರೆಯ ಮೇಲೆ ಅನ್ಯಾಯದ ವಿರುದ್ಧ ಅಬ್ಬರಿಸಿ ನ್ಯಾಯ ಕೊಡಿಸುವ ಹೀರೋ ತೆರೆದ ಹಿಂದೆ ಹೇಗಿದ್ದಾರೆ ಅಂತ. ಆರೋಪ ಸತ್ಯನೋ ಸುಳ್ಳೋ ಅನ್ನೋದನ್ನು ಕೋರ್ಟ್ ನಿರ್ಧರಿಸುತ್ತೆ. ಆದ್ರೆ, ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಅಲ್ವ? ಈಗ ನೀವು ಹೇಳಿ ಸಲ್ಲು ಹೀರೋನಾ? ವಿಲನ್ನಾ?
The post ಸಾವಿರಾರು ಕೋಟಿ ಆಸ್ತಿಯಿದ್ರೂ ನೆರೆಮನೆಯವ್ರ ಪ್ರಾಪರ್ಟಿ ಮೇಲೆ ಸಲ್ಮಾನ್ ಕಣ್ಣು.. ಏನಿದು ಕೇಸ್? appeared first on News First Kannada.