ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ದಾರೆ.
ಉಪಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದು ಭೇಟಿ ಬಳಿಕ ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜ್ಯದಲ್ಲಿ ಭುಗಿಲೆದ್ದಿರುವ ಬಿಟ್ಕಾಯಿನ್ ಪ್ರಕರಣದಲ್ಲಿ ಕಮಲ ಪಕ್ಷದ ನಾಯಕರ ಹೆಸರು ಆರೋಪ ಕುರಿತು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಇಂದು ಕೆಲವು ಕೇಂದ್ರ ಸಚಿವರನ್ನು ಕೂಡ ಭೇಟಿ ಮಾಡುತ್ತಿದ್ದೇನೆ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮಯ ಕೂಡ ಕೇಳಿದ್ದೇನೆ. ಆ ಮೇಲೆ ಖಾಸಗಿ ಮಾಧ್ಯಮದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ ಎಂದರು. ಈ ವೇಳೆ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಿಟ್ ಕಾಯಿನ್ ನಲ್ಲಿ ಕಾಂಗ್ರೆಸ್ಸಿಗರ ಹೆಸರು ಇದೆ ಅದರ ಬಗ್ಗೆ ಯೋಚನೆ ಮಾಡಲಿ ಎಂದರು.
ಕರ್ನಾಟಕದ 30 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಯಶಸ್ವಿ 100 ದಿನಗಳನ್ನು ಪೂರೈಸಿದ್ದಾರೆ. ಆದರೆ ಅವರು ಈ ನೂರು ದಿನಗಳಲ್ಲಿ ಬರೋಬ್ಬರಿ 6 ಬಾರಿ ದೆಹಲಿ ಪ್ರವಾಸ ಕೈಗೊಂಡಿರೋದು ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ಇನ್ನು ಸಿಎಂ ಬೊಮ್ಮಾಯಿಯ ಈ ಹಿಂದಿನ ದೆಹಲಿ ಯಾತ್ರೆಗೂ ಈ ಬಾರಿಯ ಪ್ರವಾಸಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯಾಕಂದ್ರೆ ಈ ಬಾರಿ ಹೈಕಮಾಂಡ್ ಕರೆದಿಲ್ಲ, ದೆಹಲಿಯಲ್ಲಿ ಹೇಳಿಕೊಳ್ಳುವ ಕೆಲಸಗಳು ಸದದ್ಯಕ್ಕಿಲ್ಲ. ಸಭೆಗಳಂತೂ ಇಲ್ಲವೇ ಇಲ್ಲ. ಹೀಗಿದ್ರೂ ಸಿಎಂ ಕರೆಯದೇ ಹೋಗಿದ್ಯಾಕೆ ಅನ್ನೋದು ನಿಗೂಢ ರಹಸ್ಯವಾಗಿದೆ…