ಸ್ಟಾರ್​ ಹೋಟೆಲ್​ನಲ್ಲಿ ಮತ್ತೆ ಪೊಲೀಸ್ ಬಲೆಗೆ ಬಿದ್ದ ಬಿಟ್ ಕಾಯಿನ್ ಕೇಸ್ ಆರೋಪಿ ಶ್ರೀಕಿ


ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಾರೀ ಚರ್ಚೆಗೆ ಕಾರಣವಾಗಿರುವ ಬಿಟ್​ ಕಾಯಿನ್ ವಿಚಾರಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಎನ್ನಲಾದ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಸ್ಟಾರ್​ ಹೋಟೆಲ್​ನಲ್ಲಿ ಶ್ರೀಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರೀಕಿ ಉಳಿದುಕೊಂಡಿದ್ದ ಹೋಟೆಲ್​ನಲ್ಲಿ ವಿಷ್ಣು ಭಟ್ ಎಂಬಾತ ಹಲ್ಲೆಗೆ ಯತ್ನ ನಡೆಸಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಈ ವೇಳೆ ಹೋಟೆಲ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾಗ ಆರೋಪಿ ಶ್ರೀಕಿ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ.

ಬಿಟ್​ ಕಾಯಿನ್​ ಕೇಸ್​ಗೆ ಸಂಬಂಧಿಸಿದಂತೆ ಆರೋಪಿ ಶ್ರೀಕಿ ಕಳೆದ ಕೆಲವು ದಿನಗಳಿಂದ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ. ಆ ಬಳಿಕ ಯಾರಿಗೂ ಪತ್ತೆಯಾಗದಂತೆ ತಲೆ ಮರೆಸಿಕೊಂಡಿದ್ದ. ಇದೀಗ ಶ್ರೀಕಿ ಮತ್ತೆ ಪೊಲೀಸ್​ ಬಲೆಗೆ ಬಿದ್ದಿದ್ದು ಬಿಟ್​ ಕಾಯಿನ್​ ಪ್ರಕರಣದಲ್ಲಿ ಸಾಕಷ್ಟು ಕೂತುಹಲ ಮೂಡಿಸಿದೆ.

ಇದನ್ನೂ ಓದಿ:ಬಿಟ್​ ಕಾಯಿನ್​ ಗದ್ದಲ; ಪ್ರಕರಣ ತಮಿಳುನಾಡಿತ್ತ ಡೈವರ್ಟ್​ ಮಾಡಲು ಕೇಂದ್ರ ಪ್ಲಾನ್?

ಹೋಟೆಲ್​ ಸಿಬ್ಬಂದಿ ಜೊತೆ ಕಿರಿಕ್​..!
ಕಳೆದ ಎರಡೂವರೆ ತಿಂಗಳಿಂದ ಸ್ಟಾರ್ ಹೋಟೆಲ್​ನಲ್ಲಿದ್ದ ಶ್ರೀಕಿ ಕಳೆದ ಮೂರು ದಿನಗಳ ಹಿಂದೆ ಜ್ಯೂವೆಲರಿ ಗ್ರೂಪ್ಸ್ ಮಾಲೀಕನ ಮಗ ಸಹ ಆತನ ಜೊತೆಗಿದ್ದ ಎನ್ನಲಾಗಿದೆ. ಈ ವೇಳೆ ಇಂದು ಹೋಟೆಲ್ ಸಿಬ್ಬಂದಿ ಜೊತೆಗೆ ಶ್ರೀಕಿ ಗಲಾಟೆ ಮಾಡಿದ್ದನಂತೆ. ವಿಷ್ಣು ಭಟ್ ಎಂಬಾತ ಆತನ ಮೇಲೆ ಹಲ್ಲೆಗೆ ಯತ್ನಿಸಿದ್ದಾನಂತೆ. ಇದರಿಂದ ಗಲಿಬಿಲಿಗೊಂಡ ಹೋಟೆಲ್​ ಸಿಬ್ಬಂದಿ ಜೀವನ್ ಭೀಮಾ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಶ್ರೀಕಿ ಮತ್ತು ವಿಷ್ಣು ಭಟ್ ನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಡ್ರಗ್​ ಗುಂಗಲ್ಲಿ ಸಿಕ್ಕಿಬಿದ್ದ ಆರೋಪಿ..?
ತನ್ನ ಗೆಳೆಯನ ಸಹಾಯದಲ್ಲಿ ರೂಮ್​ ಬುಕ್ ಮಾಡಿ ಹೊಟೇಲ್ ಸೇರಿದ್ದ ಶ್ರೀಕಿ, ಪೊಲೀಸ್​ ಬಲೆಗೆ ಬೀಳಲು ಪ್ರಮುಖ ಕಾರಣ ಡ್ರಗ್​ ಸೇವನೆ ಎನ್ನಲಾಗಿದೆ. ಹೌದು, ಮತ್ತಿನಲ್ಲಿದ್ದ ಶ್ರೀಕಿ ಹೊಟೇಲ್ ನಲ್ಲಿ ಗಲಾಟೆ ಮಾಡಿಕೊಂಡ ಪರಿಣಾಮ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನಂತೆ. ಪರಿಶೀಲನೆ ವೇಳೆ ರೂಮ್​ನಲ್ಲಿ ಕೆಲ ಮಾದಕವಸ್ತುಗಳು ಪತ್ತೆಯಾಗಿದ್ದು, ಮತ್ತೆ ಶ್ರೀಕಿ ವಿರುದ್ದ NDPS Act ಕೇಸ್​ ದಾಖಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ಬಾರಿ ಜಾಮೀನು ಸಿಗೋದು ಡೌಟ್..​
ಇವರೆಗೂ ಜಾಮೀನಿನ ಮೇಲೆ ಹೊರಗೆ ಬಂದು ತಲೆ ಮರೆಸಿಕೊಂಡಿದ್ದ ಆರೋಪಿಯ ಮೇಲೆ ಈ ಸಲ NDPS Act ಅಡಿ ಕೇಸ್ ದಾಖಲಾಗುವ ಸಾಧ್ಯತೆಗಳಿದ್ದು, ಮತ್ತೆ ಜಾಮೀನು ಸಿಗೋದು ಡೌಟ್​ ಎನ್ನಲಾಗಿದೆ. ಇನ್ನು ಡ್ರಗ್​ ಪ್ರಕರಣದಲ್ಲಿ ಎರಡನೇ ಬಾರಿ ಸಿಕ್ಕಿಹಾಕಿಕೊಂಡಾಗ NDPS Act ಅಡಿ ಕೇಸ್​ ದಾಖಲಿಸಲು ಅವಕಾಶವಿದೆ. ಒಂದು ವೇಳೆ ಆ ಪ್ರಕಾರ ಕೇಸ್​ ದಾಖಲಿಸಿದರೆ ಚಾರ್ಜ್ ಶೀಟ್ ಸಲ್ಲಿಸೋ ತನಕ ಬೇಲ್ ಸಾಧ್ಯವಿಲ್ಲ ಎನ್ನಲಾಗಿದೆ. ಸದ್ಯ ಪೊಲೀಸ್​ ಕಸ್ಟಡಿಯಲ್ಲಿರೋ ಆರೋಪಿಯನ್ನ  ಡಿಸಿಪಿ ಶರಣಪ್ಪ ವಿಚಾರಣೆ ನಡೆಸುತ್ತಿದ್ದಾರೆ.

News First Live Kannada


Leave a Reply

Your email address will not be published. Required fields are marked *