ಹಿರಿಯ ನಟ ರಾಜೇಶ್ (ಸಂಗ್ರಹ ಚಿತ್ರ)
ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾ ತಪಸ್ವಿ ಎಂದೇ ಗುರುತಿಸಿಕೊಂಡಿದ್ದ ರಾಜೇಶ್ (Actor Rajesh) ಇಂದು ಮುಂಜಾನೆ (ಫೆ.19) 2.20ರ ಸುಮಾರಿಗೆ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಸುಮಾರು 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಪ್ರೇಕ್ಷಕರ ಮನಗೆದ್ದಿದ್ದ ರಾಜೇಶ್, ರಂಗಭೂಮಿ ಕಲಾವಿದರೂ ಹೌದು. ಹಿರಿಯ ನಟನ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಗಣ್ಯರು ಸೇರಿದಂತೆ ಚಿತ್ರರಂಗ ಕಂಬನಿ ಮಿಡಿದಿದೆ. ಮುಖ್ಯಮಂತ್ರಿ ಬೊಮ್ಮಾಯಿ (CM Basavaraj Bommai), ‘‘ರಾಜೇಶ್ ಅವರು ನಿಧನರಾದ ವಿಷಯ ತುಂಬಾ ನೋವುಂಟುಮಾಡಿದೆ. ಅಗಲಿದ ಹಿರಿಯ ಕಲಾ ಚೇತನದ ಆತ್ಮಕ್ಕೆ ಶಾಂತಿ ನೀಡಿ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’’ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ರಾಜೇಶ್ ಅವರೊಂದಿಗೆ ಒಡನಾಟದ ಸಂದರ್ಭವನ್ನು ನೆನಪು ಮಾಡಿಕೊಂಡಿದ್ದಾರೆ. ‘‘ದೀರ್ಘಕಾಲದಿಂದ ನನ್ನ ಸ್ನೇಹಿತರಾಗಿದ್ದ ರಾಜೇಶ್ ಹುಟ್ಟು ಪ್ರತಿಭೆ ಮತ್ತು ಸ್ವಂತ ಪರಿಶ್ರಮದಿಂದ ಬೆಳೆದು ನಮ್ಮನ್ನೆಲ್ಲ ರಂಜಿಸಿದವರು. ಅವರ ಕುಟುಂಬದ ಸದಸ್ಯರಷ್ಟೇ ನಾನು ದುಃಖಿತನಾಗಿದ್ದೇನೆ. ಅಗಲಿದ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ’’ ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದು, ಅವರ ಸಾವು ಆಘಾತಕಾರಿಯಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಸಿದ್ದರಾಮಯ್ಯ ಹಂಚಿಕೊಂಡ ಟ್ವೀಟ್ ಇಲ್ಲಿದೆ:
ಕನ್ನಡದ ಹಿರಿಯ ನಟ ರಾಜೇಶ್ ಸಾವು ಅನಿರೀಕ್ಷಿತ ಅಷ್ಟೇ ಆಘಾತಕಾರಿ.
ದೀರ್ಘಕಾಲದಿಂದ ನನ್ನ ಸ್ನೇಹಿತರಾಗಿದ್ದ ರಾಜೇಶ್ ಹುಟ್ಟು ಪ್ರತಿಭೆ ಮತ್ತು ಸ್ವಂತ ಪರಿಶ್ರಮದಿಂದ
ಬೆಳೆದು ನಮ್ಮನ್ನೆಲ್ಲ ರಂಜಿಸಿದವರು.ಅವರ ಕುಟುಂಬದ ಸದಸ್ಯರಷ್ಟೇ ನಾನು ದುಃಖಿತನಾಗಿದ್ದೇನೆ. ಅಗಲಿದ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. pic.twitter.com/JcCaQ6BnVr
— Siddaramaiah (@siddaramaiah) February 19, 2022
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿ, ರಂಗಭೂಮಿ ಹಿನ್ನೆಲೆಯಿಂದ ಬೆಳ್ಳಿತೆರೆ ಪ್ರವೇಶಿಸಿದ್ದ ರಾಜೇಶ್ ಅವರ ನಿಧನದಿಂದ ಚಿತ್ರರಂಗ ಹಿರಿಯ ನಟನನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ‘ರಾಜೇಶ್ ಸಹಜ ಅಭಿನಯದಿಂದ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದರು, ಕನ್ನಡಿಗರ ಮನೆ-,ಮನಗಳನ್ನು ತುಂಬಿಸಿದ್ದರು’ ಎಂದು ಸಂತಾಪ ಸೂಚಿಸಿದ್ದಾರೆ. ಜಗದೀಶ್ ಶೆಟ್ಟರ್, ಬಿ.ಸಿ.ಪಾಟೀಲ್, ಸದಾನಂದ ಗೌಡ ಮೊದಲಾದ ರಾಜಕೀಯ ಗಣ್ಯರು ಹಿರಿಯ ನಟನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಯುವನಟ ನಿಖಿಲ್ ಕುಮಾರ್, ದೊಡ್ಡಣ್ಣ ಸೇರಿದಂತೆ ಚಿತ್ರರಂಗ ಹಾಗೂ ಅಭಿಮಾನಿಗಳು ರಾಜೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ:
ರಾಜೇಶ್ ಅಂತ್ಯಕ್ರಿಯೆಯ ಕುರಿತು ಅವರ ಅಳಿಯ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ. 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಮಧ್ಯಾಹ್ನ 3.30ಕ್ಕೆ ಮೇಡಿ ಅಗ್ರಹಾರ ಲಕ್ಷ್ಮೀಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆಯಬಹುದು ಎಂದು ಅರ್ಜುನ್ ಸರ್ಜಾ ತಿಳಿಸಿದ್ದಾರೆ.