
ರೆಬಲ್ ಸ್ಟಾರ್ ಅಂಬರೀಷ್ ಬರ್ತಡೆ ಆಚರಣೆಗೆ ತೊಡಕಾದ ನೀತಿ ಸಂಹಿತೆ ಶಿಷ್ಟಾಚಾರ
Sumalatha Ambareesh: ಅಂಬರೀಷ್ ಪತ್ನಿ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ನಾಳೆ ಮಂಡ್ಯ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ರಾಮನಗರ, ಚನ್ನಪಟ್ಟಣ ಬಳಿಕ ಮದ್ದೂರಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಅಂಬಿ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮಕ್ಕೆ ಭೇಟಿ ಕೊಡಲಿದ್ದಾರೆ.
ಮಂಡ್ಯ: ದಿವಂಗತ ರೆಬಲ್ ಸ್ಟಾರ್ ಅಂಬರೀಷ್ ಬರ್ತಡೆ ಆಚರಣೆಗೆ (Ambareesh Birth Anniversary) ನೀತಿ ಸಂಹಿತೆ ಪಾಲನೆ ಶಿಷ್ಟಾಚಾರದಿಂದ ತೊಡಕುಂಟಾಗಿದೆ. ಹಾಗಾಗಿ, ಶ್ರವಣದೋಷ ಇರುವ ಮಕ್ಕಳಿಗೆ ಶ್ರವಣ ಸಾಧನ ವಿತರಣಾ ಕಾರ್ಯಕ್ರಮ ರದ್ದು ಪಡಿಸಲಾಗಿದೆ. ಈ ಸಂಬಂಧ, ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಜಿಲ್ಲಾಡಳಿತವು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿ ಸಂಘಕ್ಕೆ ನೋಟಿಸ್ ನೀಡಿದೆ. ನಾಳೆ ಅಂಬರೀಷ್ ಅವರ 70ನೇ ಹುಟ್ಟುಹಬ್ಬ ದಿನವಾಗಿದೆ.
ಮಂಡ್ಯದ ಪ್ರೇರಣಾ ಶಾಲೆಯಲ್ಲಿ ಶಿಬಿರಕ್ಕೆ ತಯಾರಿ ನಡೆಸಲಾಗಿತ್ತು. ನೀತಿ ಸಂಹಿತೆ ಹಿನ್ನೆಲೆ ಶಿಬಿರದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮವನ್ನು ಇದೀಗ ರದ್ದುಗೊಳಿಸಲಾಗಿದೆ. ಉಳಿದಂತೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕಷ್ಟೆ ಅವಕಾಶ. ಅಂಬರೀಷ್ (Rebal Star Ambareesh) ಹುಟ್ಟುಹಬ್ಬದ ಪ್ರಯುಕ್ತ ಕೆ.ಎಂ. ದೊಡ್ಡಿ, ದೊಡ್ಡರಸಿನಕೆರೆ ಸೇರಿದಂತೆ ಹಲವೆಡೆ ಸಂಭ್ರಮಾಚರಣೆ ನಡೆಯುವುದಿತ್ತು. ಆದರೀಗ ಶಿಬಿರ ನಡೆಸದಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.