ಬಡವ ರಾಸ್ಕಲ್ ತಂಡ
ಸಿನಿಮಾ: ಬಡವ ರಾಸ್ಕಲ್
ಪಾತ್ರವರ್ಗ: ಧನಂಜಯ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ತಾರಾ, ನಾಗಭೂಷಣ ಇತರರು
ನಿರ್ದೇಶನ: ಶಂಕರ್ ಗುರು
ನಿರ್ಮಾಣ: ಡಾಲಿ ಪಿಕ್ಚರ್
ಸ್ಟಾರ್: 3/5
ಶಂಕರ್ (ಧನಂಜಯ) ಪಕ್ಕಾ ಮಧ್ಯಮ ವರ್ಗದ ಹುಡುಗ. ಆತನಿಗೆ ಮನೆಯ ಕಷ್ಟ ಏನು ಎಂಬುದು ಗೊತ್ತು. ಓದಿದ್ದು ಎಂಬಿಎ ಆದರೂ ಯಾರಿಗೋ ಸಲಾಂ ಹೊಡೆದುಕೊಂಡು ಕೆಲಸ ಮಾಡೋದು ಆತನಿಗೆ ಕಿಂಚಿತ್ತೂ ಇಷ್ಟವಿಲ್ಲ. ಈ ಕಾರಣಕ್ಕೆ ಅಪ್ಪನ ಆಟೋವನ್ನು ಓಡಿಸಿ ಜೀವನ ನಡೆಸುತ್ತಿರುತ್ತಾನೆ. ಗೆಳೆಯರಿಗೋಸ್ಕರ ಆತ ಪ್ರಾಣ ಕೊಡೋಕೂ ರೆಡಿ. ಇದು ಶಂಕರ್ ಅಲಿಯಾಸ್ ಬಡವ ರಾಸ್ಕಲ್ನ ಪ್ಲಸ್ ಆ್ಯಂಡ್ ವೀಕ್ನೆಸ್ ಎರಡೂ ಹೌದು. ಈ ಶಂಕರ್ ಪ್ರಭಾವಿ ರಾಜಕಾರಣಿ ಮಗಳು ಸಂಗೀತಾಳನ್ನು (ಅಮೃತಾ ಅಯ್ಯಂಗರ್) ಪ್ರೀತಿಸುತ್ತಿರುತ್ತಾನೆ. ಇಬ್ಬರ ಮಧ್ಯೆ ವಿಲನ್ ಆಗಿ ಬರೋದು ಯಾರು? ಶಂಕರ್ ಆ ಪ್ರೀತಿಯನ್ನು ಹೇಗೆ ಪಡೆದುಕೊಳ್ಳುತ್ತಾನೆ? ಪ್ರೀತಿ ಹಾಗೂ ಕುಟುಂಬವನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾನೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.
‘ಬಡವ ರಾಸ್ಕಲ್’ ಸಿನಿಮಾದಲ್ಲಿ ಮಧ್ಯಮ ವರ್ಗದವರ ಜೀವನವನ್ನು ಅದ್ಭುತವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಶಂಕರ್ ಗುರು ಮಾಡಿದ್ದಾರೆ. ಈ ಸಿನಿಮಾದಲ್ಲಿ ಹೀರೋಯಿಸಂಗೆ ಬೇಕಾಗುವ ಅಂಶ ಇದೆ. ಪಂಚಿಂಗ್ ಡೈಲಾಗ್, ಎಮೋಷನ್, ಫ್ರೆಂಡ್ಶಿಪ್, ಪ್ರೀತಿ-ಪ್ರೇಮ ಹೀಗೆ ಹಲವು ವಿಚಾರಗಳಿವೆ. ಈ ಸಿನಿಮಾ ಮಧ್ಯಮ ವರ್ಗದವರಿಗೆ ಹೆಚ್ಚು ಕನೆಕ್ಟ್ ಆಗುತ್ತದೆ. ಮಿಡಲ್ ಕ್ಲಾಸ್ ಮಂದಿಯ ಕಷ್ಟಗಳನ್ನು ಮನಸ್ಸಿಗೆ ಮುಟ್ಟುವಂತೆ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಚಿತ್ರಕ್ಕೆ ಗಟ್ಟಿ ಕಥೆ ಇಲ್ಲ. ಆದರೆ, ಸಿನಿಮಾ ಉದ್ದಕ್ಕೂ ಬರುವ ಪಂಚಿಂಗ್ ಡೈಲಾಗ್ಗಳು ಸಿನಿಮಾಗೆ ಬೆನ್ನೆಲುಬಾಗಿ ನಿಂತಿವೆ. ಕಥೆಯಲ್ಲಿ ಗಟ್ಟಿತನ ಇಲ್ಲ ಎಂಬ ಕೊರಗನ್ನು ಕೊಂಚ ಮಟ್ಟಿಗೆ ನೀಗಿಸುವ ಪ್ರಯತ್ನ ಮಾಡುತ್ತೆ. ಸಿನಿಮಾದ ಉದ್ದಕ್ಕೂ ಫ್ರೆಂಡ್ಶಿಪ್ ವಿಚಾರವನ್ನು ಹೈಲೈಟ್ ಮಾಡುತ್ತಾ ಹೋಗಲಾಗಿದೆ. ಫ್ರೆಂಡ್ಶಿಪ್ನಲ್ಲಿದ್ದ ಗಟ್ಟಿತನವನ್ನು, ಕಥೆಯಲ್ಲೂ ತೋರಿಸಿದ್ದರೆ ಸಿನಿಮಾ ಮತ್ತಷ್ಟು ಇಷ್ಟವಾಗುತ್ತಿತ್ತು.
‘ಬಡವ ರಾಸ್ಕಲ್’ ಎಮೋಷನಲ್ ಆಗಿ ಹೆಚ್ಚು ಕನೆಕ್ಟ್ ಆಗುತ್ತಾನೆ. ತಂದೆ, ತಾಯಿ ಹಾಗೂ ಮಗನ ನಡುವಿನ ಎಮೋಷನಲ್ ದೃಶ್ಯಗಳನ್ನು ತುಂಬಾನೇ ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಸಿನಿಮಾದ ಉದ್ದಕ್ಕೂ ಬರುವ ಪಂಚಿಂಗ್ ಡೈಲಾಗ್ಗಳು ಪ್ರೇಕ್ಷಕರಿಗೆ ನಗು ತರಿಸುತ್ತವೆ. ಧನಂಜಯ ಅವರು ಈ ಸಿನಿಮಾದಲ್ಲಿ ಆಟೋ ಡ್ರೈವರ್ ಆಗಿ, ಮಧ್ಯಮ ವರ್ಗದ ಹುಡುಗನಾಗಿ, ಇವೆಲ್ಲವೂ ತಾವು ಅನುಭವಿಸದ ಕಷ್ಟಗಳೇ ಎಂಬಷ್ಟು ನೈಜವಾಗಿ ನಟಿಸಿ ತೋರಿಸಿದ್ದಾರೆ. ಅವರ ನಟನೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಧನಂಜಯ ಗೆಳೆಯನ ಪಾತ್ರದಲ್ಲಿ ನಾಗಭೂಷಣ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಅವರ ಪಾತ್ರವೂ ಹೈಲೈಟ್ ಆಗಿದೆ.
ಧನಂಜಯ ಅವರ ತಂದೆ-ತಾಯಿ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾರಾ ಅವರದ್ದು ಪ್ರಬುದ್ಧ ನಟನೆ. ಕೆಲ ದೃಶ್ಯಗಳಲ್ಲಿ ಮನಸ್ಸಿಗೆ ನಾಟುವಂತೆ ಅವರು ನಟಿಸಿ ತೋರಿಸಿದ್ದಾರೆ. ಅಮೃತಾ ಅಯ್ಯಂಗಾರ್ ಅವರು ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳದಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪೂರ್ಣಚಂದ್ರ ಮೈಸೂರು ಅವರೂ ನಟನೆಯಲ್ಲಿ ಗಮನ ಸೆಳೆಯುತ್ತಾರೆ.
ಶಂಕರ್ ಗುರು ಅವರ ನಿರ್ದೇಶನ ಮೆಚ್ಚಿಕೊಳ್ಳುವಂತದ್ದು. ಕಥೆ ಗಟ್ಟಿ ಇಲ್ಲದಿದ್ದರೂ ನಿರೂಪಣೆಯಲ್ಲಿ, ಸಂಭಾಷಣೆಯಲ್ಲಿ ಗಟ್ಟಿತನ ಮೆರೆದಿದ್ದಾರೆ. ಕೆ.ಆರ್. ಮಾರುಕಟ್ಟೆ ಸೇರಿ ಅನೇಕ ಸ್ಥಳಗಳನ್ನು ತುಂಬಾನೇ ನೈಜವಾಗಿ ಶೂಟ್ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ ಛಾಯಾಗ್ರಾಹಕಿ ಪ್ರೀತಾ ಜಯರಾಮನ್. ವಾಸುಕಿ ವೈಭವ್ ಸಂಗೀತ ಸಂಯೋಜನೆಯ ಹಾಡುಗಳು ಇಷ್ಟವಾಗುತ್ತವೆ.