ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ದ್ರಾವಿಡ್ ಏನೋ ಆಯ್ಕೆಯಾದ್ರು. ಇದರಿಂದ ಬಿಸಿಸಿಐಗಿರುವ ಭಾರವೂ ಕಡಿಮೆಯಾಯ್ತು. ಆದರೆ ಬಿಸಿಸಿಐಗೆ ಮತ್ತೊಂದು ಸತ್ವಪರೀಕ್ಷೆ ಎದುರಾಗಿದೆ. ಖಾಲಿ ಇರುವ ಎನ್ಸಿಎ ಮುಖ್ಯಸ್ಥ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಬೇಕೆಂಬ ಗೊಂದಲ ಉಂಟಾಗಿದೆ. ಆದರೆ ದ್ರಾವಿಡೇ ಇದಕ್ಕೆ ಪರಿಹಾರ ಸೂಚಿಸಿದ್ದಾರೆ.
ಭವಿಷ್ಯದ ಕ್ರಿಕೆಟಿಗರನ್ನ ಸಿದ್ಧಪಡಿಸುವ ಕೇಂದ್ರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ. ಇಲ್ಲಿ ತರಬೇತಿ ಪಡೆದ ಅದೆಷ್ಟೋ ಯುವ ಕ್ರಿಕೆಟಿಗರು, ಟೀಮ್ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ. ಅದಕ್ಕೆ NCA ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡೇ ಕಾರಣ. ಯುವಕರ ಪ್ರತಿಭೆ ಗುರುತಿಸಿ, ಪ್ರತಿಭಾನ್ವಿತ ಕ್ರಿಕೆಟಿಗರನ್ನಾಗಿ ರೂಪಿಸುತ್ತಿದ್ದ ದ್ರಾವಿಡ್, ಇದೀಗ ಟೀಮ್ ಇಂಡಿಯಾದ ಹೆಡ್ಕೋಚ್ ಆಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೆ NCA ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಹುಡುಕಾಟ ನಡೆಸಿದೆ. ಆದರೆ ದ್ರಾವಿಡ್, ಲಕ್ಷ್ಮಣ್ರನ್ನ ನೇಮಿಸುವಂತೆ ಮನವಿ ಮಾಡಿದ್ದಾರೆ.
ಹೌದು.. ದ್ರಾವಿಡ್ ಕೋಚ್ ಆಗಿ ನೇಮಕವಾಗ್ತಿದ್ದಂತೆ, ಬಿಸಿಸಿಐಗೆ ಇಟ್ಟಿರುವ 2ನೇ ಬೇಡಿಕೆ ಇದು. ಮೊದಲು ವೈಟ್ಬಾಲ್ ಕ್ರಿಕೆಟ್ನ ಕ್ಯಾಪ್ಟನ್, ಕೋಚಿಂಗ್ ಸ್ಟಾಪ್ ಯಾರೆಲ್ಲಾ ಬೇಕೆನ್ನೋ ಪಟ್ಟಿಯನ್ನ ಬಿಸಿಸಿಐಗೆ ನೀಡಿದ್ರು. ಇದೀಗ NCAಗೆ ಮುಖ್ಯಸ್ಥರಾಗಿ ವಿವಿಎಸ್ ಲಕ್ಷ್ಮಣ್ರನ್ನೇ ನೇಮಿಸುವಂತೆ ಸೂಚಿಸಿದ್ದಾರೆ. ಏಕೆಂದರೆ NCA ಪರಂಪರೆ ಉಳಿಸಿ ಬೆಳೆಸೋದು ಇದರ ಹಿಂದಿನ ಉದ್ದೇಶವಾಗಿದೆ. ಹಾಗಾಗಿ ಹಿರಿಯ ಹಾಗೂ ಅನುಭವಿ ಆಟಗಾರ ಲಕ್ಷ್ಮಣ್ ತನ್ನ ಉತ್ತರಾಧಿಕಾರಿಯಾಗಲು ಬಯಸಿದ್ದಾರೆ ದ್ರಾವಿಡ್.
ಇಬ್ಬರದ್ದೂ ಪರಿಪೂರ್ಣ ಸಂಯೋಜನೆ
‘ಎನ್ಸಿಎ ಮುಖ್ಯಸ್ಥ ಸ್ಥಾನಕ್ಕೆ VVS ಲಕ್ಷ್ಮಣ್ರ ನೇಮಿಸುವಂತೆ ದ್ರಾವಿಡ್ ಸೂಚಿಸಿದ್ದಾರೆ. ಇದು ಗಂಗೂಲಿ, ಜಯ್ ಶಾ ಇಬ್ಬರಿಗೂ ಇಷ್ಟವಾಗಿದೆ. ವಿಶೇಷ ಬಾಂಧವ್ಯ ಹೊಂದಿರುವ ದ್ರಾವಿಡ್ - ಲಕ್ಷ್ಮಣ್ ಒಟ್ಟಾಗಿ ಭಾರತೀಯ ಕ್ರಿಕೆಟ್ಗಾಗಿ ಮತ್ತೊಮ್ಮೆ ಸೇವೆ ಆರಂಭಿಸುವುದು ಅದಕ್ಕಿಂತ ಮಿಗಿಲಾದದ್ದು ಮತ್ತೇನಿದೆ ಹೇಳಿ. ಇಬ್ಬರ ಪರಿಪೂರ್ಣ ಸಂಯೋಜನೆಯಿಂದ ಪ್ರತಿಭಾನ್ವಿತ ಕ್ರಿಕೆಟಿಗರ ದಂಡು ಟೀಮ್ ಇಂಡಿಯಾದಲ್ಲಿ ತುಂಬಿರುತ್ತೆ ಅನ್ನೋದರಲ್ಲಿ ಅನುಮಾನವೇ ಇಲ್ಲ’
-ಬಿಸಿಸಿಐ ಮೂಲಗಳು
ದ್ರಾವಿಡ್ ಮತ್ತು ಲಕ್ಷ್ಮಣ್, ಟೀಮ್ ಇಂಡಿಯಾಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಆಪತ್ಭಾಂದವರಾಗಿ ತಂಡವನ್ನ ರಕ್ಷಿಸುತ್ತಿದ್ದ ಈ ದಿಗ್ಗಜರು, ಆಪ್ತರು ಕೂಡ ಹೌದು. ಹಾಗೇ ಲಕ್ಷ್ಮಣ್ ಬಗ್ಗೆ ಎಲ್ಲವೂ ಗೊತ್ತಿರುವ ಕಾರಣ, ದ್ರಾವಿಡ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಲಕ್ಷ್ಮಣ್ ಎಲ್ಲಿಯೂ ಕೋಚ್ ಆಗದಿದ್ರೂ, ಮುಖ್ಯಸ್ಥರಾಗುವ ಎಲ್ಲಾ ಲಕ್ಷ್ಮಣ ಹೊಂದಿದ್ದಾರೆ ಎಂಬ ವಾದವನ್ನೂ ದ್ರಾವಿಡ್ ಮಂಡಿಸಿದ್ದಾರೆ. ಆ ಮೂಲಕ ಜೊತೆಯಾಗಿ ಮತ್ತೊಂದು ಇನ್ನಿಂಗ್ಸ್ ಪುನರಾರಂಭಿಸಲು ಉತ್ಸುಕತೆ ತೋರಿದ್ದು, ಭಾರತೀಯ ಕ್ರಿಕೆಟ್ಗೆ ಮತ್ತೊಂದು ಅಮೂಲ್ಯ ಕೊಡುಗೆ ನೀಡಲು ಮುಂದಾಗಿದ್ದಾರೆ.
ದ್ರಾವಿಡ್ರ ಈ ನಿರ್ಧಾರ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೂ ಇಷ್ಟವಾಗಿದೆ ಎನ್ನಲಾಗ್ತಿದೆ. ದ್ರಾವಿಡ್-ಲಕ್ಷ್ಮಣ್ ಒಟ್ಟಾಗಿ ಕೆಲಸ ಮಾಡುವುದು ಪರಿಪೂರ್ಣ ಸಂಯೋಜನೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ಇದೆ. ಒಟ್ನಲ್ಲಿ ಲಕ್ಷ್ಮಣ್ರನ್ನ ನೇಮಿಸಲು ಗಂಗೂಲಿ ಕೂಡ ಉತ್ಸುಕತೆ ತೋರಿದ್ದು, ಆದಷ್ಟು ಬೇಗನೇ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.