ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ನಿರ್ಮಾಣದಲ್ಲಿ ನಮ್ಮದೂ ಪಾಲಿದೆ ಎಂದ ಸಿದ್ದರಾಮಯ್ಯ ವಿರುದ್ಧ ಹಾವೇರಿಯಲ್ಲಿ ವಾಗ್ದಾಳಿ ನಡೆಸಿದ ಸಿಟಿ ರವಿ, ಕೆಲವರು ಸುಮ್ಮನೆ ಕೂರದೆ ನನ್ನದು ಒಂದು ಎಲ್ಲಿ ಇಡಲಿ ಅಂತಾ ಬರುತ್ತಾರೆ ಎಂದಿದ್ದಾರೆ.

ಸಿಟಿ ರವಿ ಮತ್ತು ಸಿದ್ದರಾಮಯ್ಯ
ಹಾವೇರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಗೆ (Bengaluru-Mysuru Expressway) ಹಣ ನೀಡಿದವರು. ಆದರೆ ಸಿದ್ದರಾಮಯ್ಯ ಅವರು ನಾಚಿಕೆ ಮಾನ ಮರ್ಯಾದೆ ಬಿಟ್ಟು ಇದು ನನ್ನ ಕಾಲದಲ್ಲಿ ಆಗಿದ್ದು ಅಂತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಮರ್ಯಾದೆ ಇದ್ದವರು ಬಾಯಿ ಮುಚ್ಚಿಕೊಂಡು ಸುಮ್ಮನೆ ಇರುತ್ತಾರೆ. ಕೆಲವರು ಸುಮ್ಮನೆ ಕೂರದೆ ನನ್ನದು ಒಂದು ಎಲ್ಲಿ ಇಡಲಿ ಅಂತ ಬರುತ್ತಾರೆ. ಕಾಂಗ್ರೆಸ್ ನಾಯಕರಿಂದ ರಾಜ್ಯದ ಜನರಿಗೆ ಹೂ ಇಡುವ ಕೆಲಸ ಆಗಿದೆ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸ್ವಲ್ಪ ದಿನ ಬಿಟ್ಟರೆ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ನಾವೇ ಅನ್ನುತ್ತಾರೆ. ಸ್ವಲ್ಪ ದಿನ ಹೋದರೆ ಅನುಭವ ಮಂಟಪಕ್ಕೆ ಹಣ ನೀಡಿದ್ದು ನಾವೇ ಅಂತಾರೆ. ಅನುಭವ ಮಂಟಪ ಮರು ಅಭಿವೃದ್ಧಿಗೆ ಕಾಂಗ್ರೆಸ್ ಯೋಚಿಸಿರಲಿಲ್ಲ. ಕಾಂಗ್ರೆಸ್ ನಾಯಕರಿಗೆ ಟಿಪ್ಪು ಜಯಂತಿ ಆಚರಿಸಲು ಮಾತ್ರ ಆಸಕ್ತಿ ಇತ್ತು ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿ ವಿಚಾರವಾಗಿ ಮಾತನಾಡಿದ ಅವರು, 29 ರೂಪಾಯಿ ಕೇಂದ್ರ ಸರ್ಕಾರ ಕೊಡುತ್ತದೆ, 3 ರೂಪಾಯಿ ಕರ್ನಾಟಕ ಸರ್ಕಾರ ಕೊಡುತ್ತದೆ. 29 ಜಾಸ್ತಿನಾ? 3 ರೂಪಾಯಿ ಜಾಸ್ತಿನಾ? ಹಾಗಾದರೆ ಇದು ಯಾರ ಯೋಜನೆ ಎಂದು ಪ್ರಶ್ನಿಸಿದ ಸಿಟಿ ರವಿ, ಕೇಂದ್ರ ಸರ್ಕಾರದ ಹಣದಲ್ಲಿ ಸಿದ್ದರಾಮಯ್ಯ ಜಾತ್ರೆ ಮಾಡಿದ್ದರು. ಯಾರದ್ದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡಿದರು ಎಂದು ಟಾಂಗ್ ಕೊಟ್ಟರು.