ಬಿಟ್ಕಾಯಿನ್ ಹಗರಣ ಎಫೆಕ್ಟ್ -ಮೊಹಮದ್ ನಲಪಾಡ್ಗೆ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ ದೂರದ ಕನಸು?
ಬೆಂಗಳೂರು: ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಲು ಮೊಹಮದ್ ನಲಪಾಡ್ ಶತಪ್ರಯತ್ನ ಪಡುತ್ತಿದ್ದರೂ, ಆರಂಭದಿಂದಲೂ ಅಡೆತಡೆಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತಲೇ ಇವೆ. ಇದೀಗ ಬಿಟ್ಕಾಯಿನ್ (Bitcoin) ಹೆಸರಲ್ಲಿ ಕಾಂಗ್ರೆಸ್ನಲ್ಲಿಯೇ ಶೀತಲ ಸಮರ ಶುರುವಾದಂತಿದ್ದು, ನಲಪಾಡ್ಗೆ ಅಧ್ಯಕ್ಷ ಸ್ಥಾನ ದೂರದ ಕನಸು ಎಂಬಂತೆ ಭಾಸವಾಗುತ್ತಿದೆ.
ಇದೀಗ ಬಿಟ್ಕಾಯಿನ್ ಹೆಸರಲ್ಲಿ ಕಾಂಗ್ರೆಸ್ನಲ್ಲಿ ಒಳ ರಾಜಕೀಯ ಮೇಲುಗೈ ಆಗಿದ್ದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಈ ವಾರ್ಗೆ ಕಾರಣವಾಗಿದೆ. ನಲಪಾಡ್-ರಕ್ಷಾ ರಾಮಯ್ಯ ನಡುವಣ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ (KPCC) ಫೈಟ್ ಇದಕ್ಕೆ ಹೇತುವಾಗಿದೆ. ಬಿಟ್ಕಾಯಿನ್ ಹಗರಣದಲ್ಲಿ ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ (Nalapad Ahmed Haris) ಅವರ ಪುತ್ರ, ವಿವಾದಿತ ಮೊಹಮದ್ ನಲಪಾಡ್ ಹೆಸರು ಕೇಳಿ ಬರ್ತಿದೆ. ಇಂತಾ ಸಮಯದಲ್ಲಿ ನಲಪಾಡ್ ಅಧ್ಯಕ್ಷನಾದರೆ ತೊಂದರೆಯಾದೀತು. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತೆಂದು ಆಂತರಿಕವಾಗಿ ಚರ್ಚೆ ತೇಲಿಬಿಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಬಣದಿಂದ ಈ ಗಂಭೀರ ಚರ್ಚೆ ನಡೆದಿದೆ. ಆದ್ರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನಲಪಾಡ್ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಧಮ್ ಇದ್ದರೆ ಕ್ರಮ ಕೈಗೊಳ್ಳಿ ಎಂದೂ ಡಿಕೆ ಶಿವಕುಮಾರ್ ಸವಾಲೆಸೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ನಲಪಾಡ್ ಪರ ಡಿ.ಕೆ.ಶಿ ನಿಂತಿರುವುದು ಸ್ಪಷ್ಟವಾಗುತ್ತಿದ್ದಂತೆ ಸಿದ್ದರಾಮಯ್ಯ ಬಣದಿಂದ ಮತ್ತೊಂದು ಪ್ಲ್ಯಾನ್ ತೇಲಿಬಂದಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ವಿಚಾರದಲ್ಲಿ ಸಿದ್ದರಾಮಯ್ಯ ರಕ್ಷಾ ರಾಮಯ್ಯ ಪರ ಇದ್ದಾರೆ. ಹಾಲಿ ರಕ್ಷಾ ರಾಮಯ್ಯ ಅವರನ್ನೇ ಮುಂದುವರಿಸಲು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.
ಜೊತೆಗೆ ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸುವುದಕ್ಕೆ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿಯೇ ವಿಚಾರ ಪ್ರಸ್ತಾಪಕ್ಕೆ ಪ್ಲ್ಯಾನ್ ಸಿದ್ಧವಾಗುತ್ತಿದೆ ಎನ್ನಲಾಗಿದೆ. ನಲಪಾಡ್ ಅಧ್ಯಕ್ಷನಾದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತೆ ಎಂದೇ ಆ ವಿಚಾರ ಹೈಕಮಾಂಡ್ ಮುಂದೆ ಪ್ರಸ್ತಾಪಿಸಲು ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಇದರೊಂದಿಗೆ ಬಿಟ್ ಕಾಯಿನ್ ಹಗರಣ ‘ಕೈ’ ಆಂತರಿಕ ಸಮರಕ್ಕೆ ಕಾರಣವಾಗಿ, ಡಿಕೆಶಿ ವರ್ಸಸ್ ಸಿದ್ದರಾಮಯ್ಯ ಸಮರಕ್ಕೆ ಕಾರಣವಾಗುತ್ತಾ? ಕಾದುನೋಡಬೇಕಿದೆ.
(karnataka congress youth presidentship again elusive for mohammed nalapad due to bitcoin case)