ಚಿತ್ರದುರ್ಗದಲ್ಲಿ ಕೃಷಿಯ ಜತೆಗೆ ಉಪಕಸಬುಗಳ ಮೂಲಕ ಭರ್ಜರಿ ಲಾಭವೂ ಗಳಿಸಬಹುದು ಎಂಬುದಕ್ಕೆ ರೈತರೊಬ್ಬರು ಮಾದರಿ
ಆಗಿದ್ದಾರೆ.

ರೈತ ಮಂಜುನಾಥ್
ಚಿತ್ರದುರ್ಗ: ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ರೈತರು (farmer) ಕೃಷಿಯಿಂದ ಕೈಸುಟ್ಟುಕೊಳ್ಳುತ್ತಾರೆ. ಆದ್ರೆ,
ಕೃಷಿಯ ಜತೆಗೆ ಉಪಕಸಬುಗಳ ಮೂಲಕ ಭರ್ಜರಿ ಲಾಭವೂ ಗಳಿಸಬಹುದು ಎಂಬುದಕ್ಕೆ ರೈತರೊಬ್ಬರು ಮಾದರಿ
ಆಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕುಡಿನೀರಕಟ್ಟೆ ಗ್ರಾಮದ ರೈತ ಮಂಜುನಾಥ್ ಸಹ ಜಿಲ್ಲೆಯ ಬಹುತೇಕ ರೈತರಂತೆ ಇತರೆ ಕೃಷಿ ಕಾಯಕದಲ್ಲಿ ಆರಂಭದಲ್ಲಿ ಕೈಸುಟ್ಟುಕೊಂಡಿದ್ದರು. ಹೀಗಾಗಿ, ಅಡಿಕೆ, ತೆಂಗು ಜತೆಗೆ ಮಿಶ್ರ ಕೃಷಿ ಕೈಗೊಂಡಿದ್ದಾರೆ. ಪಪ್ಪಾಯಿ, ಸೀಬೆ, ಸೀತಾಫಲ, ರಾಮಫಲ ಸೇರಿದಂತೆ ಇತರೆ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಅಂತೆಯೇ ಕೃಷಿಗೂ ಉಪಯೋಗ ಮತ್ತು ಕೈತುಂಬ ಕಾಸು ಗಳಿಕೆಯ ಜೇನು ಕೃಷಿಯನ್ನೂ ಕೈಗೆತ್ತಿಕೊಂಡಿದ್ದಾರೆ.
ಕಳೆದ ಮೂರು ವರ್ಷದಿಂದ ತೋಟದ ಮನೆಯ ಟೆರೇಸಿನ ಮೇಲೆ ಮತ್ತು ಗೋಡೆಗಳಿಗೆ ಜೇನು ಸಾಕಣೆಯ ಬಾಕ್ಸ್ ಫಿಟ್ ಮಾಡುವ ಮೂಲಕ ವಿಶೇಷವಾಗಿ ಜೇನು ಕೃಷಿಯಲ್ಲಿ ತೊಡಗಿದ್ದಾರೆ. ಆ ಮೂಲಕ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದೇವೆ. ಜೇನು ಕೃಷಿಗೆ ಹೆಚ್ಚಿನ ಶ್ರಮ ಬೇಕಾಗಲ್ಲ. ಉಪಾಯದಿಂದ ಕೆಲಸ ಮಾಡಿದರೆ ತೋಟದಲ್ಲಿನ ಇತರೆ ಬೆಳೆಗೂ ಜೇನು ಸಾಕಣೆಯಿಂದ ಅನುಕೂಲ ಆಗುತ್ತದೆ. ಅಂತೆಯೇ ಸಾಕಷ್ಟು ಹಣವೂ ಗಳಿಕೆ ಆಗುತ್ತದೆ ಅಂತಾರೆ ರೈತ ಮಂಜುನಾಥ್.