Happy Birthday Shankar Nag: ಇಂದು ಶಂಕರ್ ನಾಗ್ ಜನ್ಮದಿನ; ಕನ್ನಡಿಗರ ಕಣ್ಮಣಿ ನೆನೆದ ಸೆಲೆಬ್ರಿಟಿಗಳು | Happy Birthday Shankar Nag celebrities and Fans Remembering Shankar Nag


Happy Birthday Shankar Nag: ಇಂದು ಶಂಕರ್ ನಾಗ್ ಜನ್ಮದಿನ; ಕನ್ನಡಿಗರ ಕಣ್ಮಣಿ ನೆನೆದ ಸೆಲೆಬ್ರಿಟಿಗಳು

ಶಂಕರ್​ ನಾಗ್​

ಶಂಕರ್​ ನಾಗ್ ಇಂದು (ನವೆಂಬರ್​ 9) ಬದುಕಿದ್ದರೆ 67ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ನಟನೆ, ನಿರ್ದೇಶನ, ನಿರ್ಮಾಣದ ಮೂಲಕ ಜನರ ಮನ ಗೆದ್ದ ಅವರು 36 ನೇವಯಸ್ಸಿನಲ್ಲೇ ನಿಧನ ಹೊಂದಿದ್ದರು. ಜನ್ಮದಿನದಂದು ಅವರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ‘ಆಟೋ ರಾಜ’ ಸಿನಿಮಾ ಮೂಲಕ ಶಂಕ್ರಣ್ಣ ಅಸಂಖ್ಯಾತ ಆಟೋ ಚಾಲಕರಲ್ಲಿ ಸ್ವಾಭಿಮಾನದ ಭಾವನೆ ಮೂಡಿಸಿದ್ದರು. 1954ರಲ್ಲಿ ಹೊನ್ನಾವರದಲ್ಲಿ ಜನಿಸಿದರು ಶಂಕರ್ ನಾಗ್. ಮರಾಠಿ ನಾಟಕಗಳಿಂದ ಪ್ರಭಾವಿತರಾಗಿ ಕನ್ನಡದಲ್ಲಿ ಹೊಸ ಪ್ರಯೋಗಗಳನ್ನು ಕೈಗೊಂಡಿದ್ದರು. ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಮುಂದೆ ಹಲವು ಪ್ರಯೋಗಗಳನ್ನು ಮಾಡಿದರು.

ಶಂಕರ್​ ನಾಗ್​ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರು ನಿರ್ದೇಶಿಸಿದ ಮೊದಲ ಚಿತ್ರ ‘ಮಿಂಚಿನ ಓಟ’  ಜನ ಮೆಚ್ಚುಗೆ ಗಳಿಸಿಕೊಂಡಿತ್ತು. ದೂರದರ್ಶನಕ್ಕಾಗಿ ಖ್ಯಾತ ಬರಹಗಾರ ಆರ್.ಕೆ. ನಾರಾಯಣ್ ಅವರು ರಚಿಸಿದ ‘ಮಾಲ್ಗುಡಿ ಡೇಸ್​​’​ನ ನಿರ್ದೇಶಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನ ಸೆಳೆದರು. ಆಗುಂಬೆ, ತೀರ್ಥಹಳ್ಳಿ ಮುಂತಾದೆಡೆ ಚಿತ್ರೀಕರಣಗೊಂಡ ‘ಮಾಲ್ಗುಡಿ ಡೇಸ್’ ಮತ್ತು ‘ಸ್ವಾಮಿ’ ಧಾರಾವಾಹಿ ಸರಣಿಗಳು ಕರ್ನಾಟಕದ ಗರಿಮೆ ಹೆಚ್ಚಿಸಿದ್ದವು.

ಸಾಂಗ್ಲಿಯಾನ, ಗೀತಾ, ಮಿಂಚಿನ ಓಟ, ಒಂದು ಮುತ್ತಿನ ಕಥೆ, ನೋಡಿ ಸ್ವಾಮಿ ನಾವಿರೋದೆ ಹೀಗೆ ಅವರ ಹತ್ತು ಹಲವಾರು ಸಿನಿಮಾಗಳನ್ನು ಕನ್ನಡ ಚಿತ್ರಪ್ರೇಮಿಗಳು ಎಂದಿಗೂ ಮರೆಯಲಾರರು. ಕನ್ನಡ ಚಿತ್ರರಂಗವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಬಲ್ಲ ಸಾಮರ್ಥ್ಯ ಅವರಿಗಿತ್ತು. ರಂಗಭೂಮಿ, ಸಾಹಿತ್ಯ ಮತ್ತು ನಿರ್ದೇಶನದಲ್ಲಿ ಅವರದ್ದು ಎತ್ತಿದ ಕೈ.

ಬೆಂಗಳೂರು ಮೆಟ್ರೋವನ್ನು ನಿರ್ಮಿಸಲು ಆ ಕಾಲದಲ್ಲೇ ಚಿಂತನೆ ನಡೆಸಿದ್ದರು ನಮ್ಮ ಶಂಕ್ರಣ್ಣ. ಸಣ್ಣ ವಯಸ್ಸಿನಲ್ಲೇ ತೀರಿಕೊಂಡರೂ ಕನ್ನಡ ನಾಡಿಗೆ ಅವರು ನೀಡಿದ ಕೊಡುಗೆ ಇಂದಿಗೂ ಚಿರಸ್ಮರಣೀಯ. ಅವರ ಹುಟ್ಟುಹಬ್ಬವನ್ನು ಕನ್ನಡದ ಹಬ್ಬವೆಂದೇ ಲಕ್ಷಾಂತರ ಅಭಿಮಾನಿಗಳು ಇಂದಿಗೂ ಆಚರಿಸುತ್ತಿದ್ದಾರೆ.

ಅವರ ಮಡದಿ ಅರುಂಧತಿ ನಾಗ್ ಶಂಕರ್ ಅವರ ನೆನಪಿನಲ್ಲಿ ಬೆಂಗಳೂರಿನ ಜೆ.ಪಿ.ನಗರದಲ್ಲಿ ರಂಗಶಂಕರವನ್ನು ಪ್ರಾರಂಭಿಸಿದರು. ರಂಗಭೂಮಿ,ಕಲೆ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಎಂದೇ ಮೀಸಲಾಗಿರುವ ರಂಗ ಶಂಕರ ಹಲವು ದೇಶಗಳಲ್ಲೂ ಮನೆಮಾತಾಗಿದ್ದು ಈ ಮೂಲಕ ಶಂಕ್ರಣ್ಣರ ಹೆಸರು ಮತ್ತು ಕೆಲಸ ಎಲ್ಲೆಡೆಗೆ ಪಸರಿಸಿದೆ.

ಮೃತಪಟ್ಟಿದ್ದು ಹೇಗೆ?

ಅದು 1990ರ ಸಮಯ. ‘ಜೋಕುಮಾರಸ್ವಾಮಿ’ ಆ ಕಾಲಕ್ಕೆ ಭಾರಿ ಯಶಸ್ಸು ಕಂಡ ನಾಟಕ. ಈ ನಾಟಕವನ್ನು ಸಿನಿಮಾ ಮಾಡಬೇಕು ಎನ್ನುವ ಕನಸು ಶಂಕರ್ ​ನಾಗ್ ಅವರದ್ದಾಗಿತ್ತು. ಆ ಸಲುವಾಗಿ ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಲೋಕಾಪುರಕ್ಕೆ ಹೋಗಬೇಕಿತ್ತು. 1990ರಂದು ಸೆ.30ರಂದು ಶಂಕರ್​ ನಾಗ್ ತಮ್ಮ ಪತ್ನಿ ಅರುಂಧತಿ ನಾಗ್ ಮತ್ತು ಮಗಳು ಕಾವ್ಯಾ ಜೊತೆ ಬೆಂಗಳೂರಿನಿಂದ ಹೊರಟಿದ್ದರು. ಆದರೆ, ದಾವಣಗೆರೆಯ ಅನಗೋಡು ಬಳಿ ಲಾರಿಗೆ ಶಂಕರ್ ನಾಗ್‌ ಕಾರು ಡಿಕ್ಕಿಯಾಗಿತ್ತು. ಘಟನೆಯಲ್ಲಿ ಶಂಕರ್ ನಾಗ್ ಮತ್ತು ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಂಕರ್​ ನಾಗ್​ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಸಿಡಿಲು ಬಡಿದಂತಾಗಿತ್ತು.

ಇದನ್ನೂ ಓದಿ: ಶಂಕರ್​ ನಾಗ್​ ಪುಣ್ಯಸ್ಮರಣೆ: 31 ವರ್ಷ ಕಳೆದರೂ ಅಭಿಮಾನಿಗಳ ಎದೆಯಲ್ಲಿ ‘ಆಟೋ ರಾಜ’ ಅಮರ

 

TV9 Kannada


Leave a Reply

Your email address will not be published. Required fields are marked *