ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಇಂದು (ಡಿ. 21) ಮಾಡಿದೆ. ಈ ವಿಚಾರವನ್ನು ಇಂದಿನ ವಿಧಾನಸಭೆಯಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್ ಪ್ರಸ್ತಾಪ ಮಾಡಿದರು.

ಹುಬ್ಬಳ್ಳಿಯ ಭೈರಿದೇವರಕೊಪ್ಪ ದರ್ಗಾ, ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಬರುವ ಭೈರಿದೇವರಕೊಪ್ಪ ದರ್ಗಾ (Byridevarakoppa Dargah) ರಸ್ತೆ ಅಗಲೀಕರಣಕ್ಕಾಗಿ ಮುಖ್ಯರಸ್ತೆಯಿಂದ 44 ಮೀಟರ್ ಭೂಮಿಯನ್ನಯ BRTS (Bus Rapid Transit System) ವಶಕ್ಕೆ ಪಡೆದಿದೆ. ರಸ್ತೆ ಅಗಲೀಕರಣ ಹಿನ್ನೆಲೆ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ (Highcourt Order) ನೀಡಿದ್ದು ಇಂದು (ಡಿ. 21) ಭೈರಿದೇವರಕೊಪ್ಪದಲ್ಲಿರುವ ದರ್ಗಾವನ್ನು ಜಿಲ್ಲಾಡಳಿತ ತೆರವು ಮಾಡಿದೆ. ಹೀಗಾಗಿ ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾ ಸುತ್ತ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಭೂಸ್ವಾಧೀನ ಪ್ರಶ್ನಿಸಿ ದರ್ಗಾ ಕಮಿಟಿ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಸ್ಟೇ ಅವಧಿ ಮುಗಿದ ಹಿನ್ನೆಲೆ ತೆರವು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ದರ್ಗಾ ಕಮಿಟಿಯ ಸದಸ್ಯರ ಜೊತೆ ಸೌಹಾರ್ದ ತೆರವಿಗೆ ಜಿಲ್ಲಾಡಳಿತ ಮನವಿ ಮಾಡಿತ್ತು. ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ತೆರವಿಗೆ ಅವಕಾಶ ನೀಡಲಾಗಿತ್ತು.
ನನ್ನ ಜಾಗ ಸಹ ಹೋಗಿದೆ: ಸಿಎಂ ಬೊಮ್ಮಾಯಿ
ಈ ವಿಚಾರವನ್ನು ಶೂನ್ಯವೇಳೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ರಸ್ತೆ ಅಗಲೀಕರಣದಿಂದ ನನ್ನ ಜಾಗ ಸಹ ಹೋಗಿದೆ. ನನ್ನ 19 ಗುಂಟೆ ಜಾಗ ಹೋಗಿದೆ, 5 ಲಕ್ಷ ಮಾತ್ರ ಪರಿಹಾರ ಸಿಕ್ಕಿದೆ. ದರ್ಗಾ ಒಡೆಯುವ ವಿಚಾರದಲ್ಲಿ ಯಾರ ಭಾವನೆಗಳಿಗೆ ಧಕ್ಕೆ ತರಲ್ಲ. ಕೋರ್ಟ್ ಆದೇಶದಂತೆ ನಡೆಯುತ್ತಿದೆ. ಶುಕ್ರವಾರ ಹುಬ್ಬಳ್ಳಿಗೆ ಹೋಗಿ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ, ಬೇಕಾದ ಅನುಕೂಲ ಮಾಡಿಕೊಡುವೆ. ಮುಂದಿನ ಕಾರ್ಯಾಚರಣೆ ಮಾತುಕತೆ ಮೂಲಕ ಒಪ್ಪಿಸಿ ಮಾತನಾಡುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.