ಕನಕದಾಸ ಜಯಂತಿ 2021
ಕನಕದಾಸರು ಕೀರ್ತನೆಗಳು ಮತ್ತು ಉಗಾಭೋಗ (ಕನ್ನಡ ಭಾಷೆಯಲ್ಲಿ ಕರ್ನಾಟಕ ಸಂಗೀತ ಸಂಯೋಜನೆಗಳು), ಕಾವ್ಯ ಮುಂತಾದ ಕ್ಷೇತ್ರದಲ್ಲಿ ಬಹಳ ಪ್ರಸಿದ್ಧವಾದ ಹೆಸರು. 1509 ರ ಡಿಸೆಂಬರ್ 3 ರಂದು ತಿಮ್ಮಪ್ಪ ನಾಯಕರಾಗಿ ಜನಿಸಿದ ಕನಕದಾಸರು, ಪ್ರಸಿದ್ಧ ತತ್ವಜ್ಞಾನಿ, ಕವಿ ಮತ್ತು ಸಂಗೀತಗಾರರಾಗಿದ್ದಾರೆ. ಪ್ರತಿ ವರ್ಷ ಅವರ ಜನ್ಮದಿನವನ್ನು ಕನಕದಾಸರ ಜಯಂತಿ (Kanakadasa Jayanti 2021) ಎಂದು ಕರ್ನಾಟಕ ರಾಜ್ಯಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಮಹಾನ್ ಸಂತರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಕರ್ನಾಟಕದಲ್ಲಿ ನವೆಂಬರ್ 22 ರಂದು ಪ್ರಾದೇಶಿಕ ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗಿದೆ.
ಕನಕದಾಸರ ಜಯಂತಿಯನ್ನು ಮುಖ್ಯವಾಗಿ ಕುರುಬ ಸಮುದಾಯದವರು ಆಚರಿಸುತ್ತಾರೆ. ಈ ವರ್ಷ ಕನಕದಾಸರ 527 ನೇ ಕನಕ ಜಯಂತಿಯನ್ನು ಆಚರಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಕನಕದಾಸರಿಗೆ ಗೌರವ ಸಲ್ಲಿಸಲು ರಾಜ್ಯಾದ್ಯಂತ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಕನಕದಾಸರು ಸಮಾಜ ಸುಧಾರಕರಾಗಿ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದರು. ಅವರು ಸಮಾಜದಲ್ಲಿ ಹೇಗೆ ಬದಲಾವಣೆ ತಂದರು? ಅವರು ಹೇಗೆ ಸಮಾನತೆಯ ಸಂದೇಶಗಳನ್ನು ಹರಡುವಲ್ಲಿ ಮತ್ತು ಸಾಮಾಜಿಕ ಸಮುದಾಯವನ್ನು ಉನ್ನತೀಕರಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದರು. ಕರ್ನಾಟಕ ಸಂಗೀತ ಮತ್ತು ಕೀರ್ತನೆಗಳಲ್ಲಿ ಸ್ಥಳೀಯ ಭಾಷೆಯ ಬಳಕೆ. ಅವರ ಕಾರ್ಯಗಳ ಬಗ್ಗೆ ಇಂದಿನ ಯುವಜನತೆಗೆ ತಿಳಿಸುವ ಸಲುವಾಗಿ ಕನಕಜಯಂತಿಯನ್ನು ಆಚರಿಸಲಾಗುತ್ತದೆ.
ಕನಕದಾಸ ಜಯಂತಿಯನ್ನು ವಿವಿಧ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಹಲವಾರು ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳೊಂದಿಗೆ ಆಚರಿಸುತ್ತವೆ. ಸಂತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಾರೆ. ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಈ ದಿನದಂದು ಏರ್ಪಡಿಸಲಾಗುತ್ತದೆ. ಬೆಂಗಳೂರು, ಉಡುಪಿ, ಮೈಸೂರು ಮುಂತಾದ ನಗರಗಳಲ್ಲಿ ಹೆಚ್ಚಿನ ಆಚರಣೆಗಳು ನಡೆಯುತ್ತವೆ.
ವಿವಿಧ ಸಂಸ್ಥೆಗಳ ಪ್ರಾಧ್ಯಾಪಕರು ಕನಕದಾಸರ ಜೀವನ ಮತ್ತು ಅವರ ಕೊಡುಗೆಯ ಕುರಿತು ಭಾಷಣ ಮಾಡುತ್ತಾರೆ. ಕೆಲವು ಸ್ಥಳಗಳು ಕನಕದಾಸರ ಪ್ರತಿಮೆಯನ್ನು ಸ್ಥಾಪಸಿ ಅವರ ಮೂರ್ತಿಗೆ ಹೂವಿನಿಂದ ಅಲಂಕಾರ ಮಾಡಿ ವಿಶೇಷವಾಗಿ ಗೌರವ ಸಲ್ಲಿಸುತ್ತಾರೆ. ಈ ಮಹಾನ್ ಹರಿದಾಸ ಸಂತನ ಗೌರವಾರ್ಥವಾಗಿ, ರಾಜ್ಯದಲ್ಲಿ ಪ್ರತಿ ವರ್ಷ ಹಿಂದೂ ಮಾಸದ ಕಾರ್ತಿಕದ ಹದಿನೆಂಟನೇ ದಿನದಂದು ಕನಕದಾಸರ ಜಯಂತಿಯನ್ನು ಆಚರಿಸುತ್ತದೆ.
ಇದನ್ನೂ ಓದಿ:
ಧಾನ್ಯ ಲಕ್ಷ್ಮಿಯನ್ನು ಭತ್ತದ ಗದ್ದೆಯಿಂದ ಮನೆಗೆ ತರುವ ಹುತ್ತರಿ ಹಬ್ಬದ ಆಚರಣೆ; ಕೊಡಗಿನ ಸಂಸ್ಕೃತಿ ಅನಾವರಣ
Guru Nanak Jayanti 2021: ಗುರು ನಾನಕ್ ಜಯಂತಿ ಯಾವಾಗ? ಈ ಪವಿತ್ರ ದಿನದಂದು ಸಿಖ್ ಧರ್ಮದ ಆದಿ ಗುರು ಬಗ್ಗೆ ತಿಳಿಯೋಣ