ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದರೂ ಶೇ 25ರಷ್ಟು ಹೆಚ್ಚಳಕ್ಕೆ ಪಟ್ಟುಹಿಡಿದಿರುವ ನೌಕರರು ನಿಗದಿ ಪಡಿಸಿದ ದಿನಾಂಕದಂದೇ ಮುಷ್ಕರ ಹೂಡಲು ಮುಂದಾಗಿದ್ದಾರೆ.

ಮಾರ್ಚ್ 24ರಂದು ಕರ್ನಾಟಕದಲ್ಲಿ ಸಾರಿಗೆ ಸೇವೆ ಬಂದ್
ಬೆಂಗಳೂರು: ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಿಸಿ (Wage Revision Of Transport Employees) ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದರೂ ಸರ್ಕಾರ ಹಾಗೂ ಸಾರಿಗೆ ನೌಕರರ ಸಂಘದ ನಡುವಿನ ಹಗ್ಗಜಗ್ಗಾಟ ಕೊನೆಗೊಂಡಿಲ್ಲ. ಶೇ 25ರಷ್ಟು ಹೆಚ್ಚಳಕ್ಕೆ ಪಟ್ಟುಹಿಡಿದಿರುವ ನೌಕರರು ಮಾರ್ಚ್ 24ರಂದು ಮುಷ್ಕರ ಹೂಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖ, ಮಾರ್ಚ್ 24ರಂದು ರಾಜ್ಯದಲ್ಲಿ ಸಾರಿಗೆ ಸೇವೆ ಬಂದ್ (Karnataka Transport Bus Band) ಆಗಲಿದೆ ಎಂದರು. ರಾಜ್ಯ ಸರ್ಕಾರ ಶೇ. 15ರಷ್ಟು ವೇತನ ಹೆಚ್ಚಳ ಮಾಡುವ ಆದೇಶ ಹೊರಡಿಸಿದೆ. ಆದರೆ ಇದು ನೌಕರರನ್ನು ಆರ್ಥಿಕವಾಗಿ ಮತ್ತಷ್ಟು ತುಳಿಯುವ ಕೆಲಸವಾಗಿದೆ. ಬೆಲೆ ಏರಿಕೆಯಂತಹ ಸಂದರ್ಭದಲ್ಲಿ ನಮಗೆ ಸಿಗುವ ವೇತನದಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಬೇಡಿಕೆ ಈಡೇರದ ಹೊರತು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಸರ್ಕಾರಿ ನೌಕರರು ಮುಷ್ಕರ ಮಾಡಿದ 4 ಗಂಟೆಯಲ್ಲೇ ರಾಜ್ಯ ಸರ್ಕಾರ ಮಧ್ಯಂತರ ಶೇ 17ರಷ್ಟು ವೇತನ ಹೆಚ್ಚಳ ಮಾಡಿ ಆದೇಶಿಸಿದೆ. KPTCL ಮುಷ್ಕರದ ನೋಟಿಸ್ ನೀಡಿದ್ದಕ್ಕೆ ಶೇ 20 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಆದರೆ ನಾವು ಕೇಳಿದ್ದು ಶೇ. 25 ರಷ್ಟು. ಆದರೆ ಸರ್ಕಾರ ಕೇವಲ ಶೇ. 15ರಷ್ಟು ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಾರಿಗೆ ನೌಕರರಿಗೆ ಮುಷ್ಕರ ವೇಳೆ ಲಿಖಿತ ಬರವಸೆ ನೀಡಿದ್ದೀರಿ. ಇದು ಸುಳ್ಳಾ ಎಂದು ಪ್ರಶ್ನಿಸಿದ ಚಂದ್ರು, ಬೆಲೆ ಏರಿಕೆಯಲ್ಲು ನಾವು ಬದುಕಲು ಆಗುತ್ತಿಲ್ಲ. ಶೇ. 15ರಷ್ಟು ವೇತನ ಪರಿಷ್ಕರಣೆಗೆ ನೌಕರರ ಸಮ್ಮತಿ ಇಲ್ಲ. ನಾವು ಜಂಟಿ ಸಮಿತಿಯವರಿಗೆ ಮಾರ್ಚ್ 21 ರಂದು ಮುಷ್ಕರ ಮಾಡಲು ಬೆಂಬಲ ನೀಡಿದ್ದೆವು. ಆ ಬೆಂಬಲವನ್ನ ನಾವು ವಾಪಸ್ಸು ಪಡೆಯುತ್ತಿದ್ದೇವೆ. ನಾವು ಮೊದಲಿನಂತೆ ಕಾರ್ಮಿಕ ಇಲಾಖೆಗೆ ಏನು ನೋಟೀಸ್ ನೀಡಿದ್ದೆವೂ ಅದೇ ರೀತಿಯಲ್ಲಿ ಮಾರ್ಚ್ 24 ರಂದು ಸಮಾನ ಮನಸ್ಕರ ವೇದಿಕೆಯಿಂದ ಮುಷ್ಕರ ಮಾಡುತ್ತೇವೆ ಎಂದು ಹೇಳಿದರು.