Rohit Sharma: ಕೆಲವು ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದೆವು, ಇದು ಮೊದಲೆರಡು ಪಂದ್ಯದ ಸೋಲಿಗೆ ಕಾರಣವಾಯಿತು: ರೋಹಿತ್ ಶರ್ಮಾ | Rohit Sharma press conference After India win against Afghanistan in T20 World Cup


Rohit Sharma: ಕೆಲವು ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದೆವು, ಇದು ಮೊದಲೆರಡು ಪಂದ್ಯದ ಸೋಲಿಗೆ ಕಾರಣವಾಯಿತು: ರೋಹಿತ್ ಶರ್ಮಾ

Rohit Sharma India vs afghanistan

ಟಿ20 ವಿಶ್ವಕಪ್ ಟೂರ್ನಿಯನ್ನು (T20 World Cup) ಸತತ ಎರಡು ಸೋಲುಗಳ ಮೂಲಕ ಅತ್ಯಂತ ಕಳಪೆಯಾಗಿ ಆರಂಭಿಸಸಿದ್ದ ಟೀಮ್ ಇಂಡಿಯಾ (Team India) ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಬುಧವಾರ ಅಫ್ಘಾನಿಸ್ತಾನ (India vs Afghanistan) ವಿರುದ್ಧ ಬರೋಬ್ಬರಿ 66 ರನ್​ಗಳ ದೊಡ್ಡ ಅಂತರದ ಗೆಲುವು ಕಾಣುವ ಮೂಲಕ ಸೆಮಿ ಫೈನಲ್ ರೇಸ್​ನಲ್ಲಿ ಇನ್ನೂ ಜೀವಂತವಾಗಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ಯಾರೂ ಕಲೆಹಾಕಲು ಸಾಧ್ಯವಾಗದಷ್ಟು ದೊಡ್ಡ ಮೊತ್ತವನ್ನು ವಿರಾಟ್ ಕೊಹ್ಲಿ (Virat Kohli) ಪಡೆ ಪೇರಿಸಿತು. ಪ್ರಮುಖವಾಗಿ ಭಾರತ ಸೋಲಲು ಓಪನರ್​ಗಳು ಉತ್ತಮ ಅಡಿಪಾಯ ಹಾಕದಿರುವುದು ಕಾರಣ ಎಂದವರಿಗೆ ರೋಹಿತ್ ಶರ್ಮಾ (Rohit Sharma) ಮತ್ತು ಕೆಎಲ್ ರಾಹುಲ್ (KL Rahul) ಮುಟ್ಟಿನೋಡುವಂತಹ ಉತ್ತರ ನೀಡಿದರು. ಈ ಜೋಡಿ 140 ರನ್​ಗಳ ದಾಖಲೆಯ ಜೊತೆಯಾಟ ಆಡಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಜಿಕೊಂಡರು. ಬಳಿಕ ಸುದ್ದಿಗೋಷ್ಠಿಯಲ್ಲಿ (Rohit Sharma’s press conference) ಮಾತನಾಡಿದ ಇವರು ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮೊದಲನೆಯದಾಗಿ ಆರಂಭದ ಎರಡು ಪಂದ್ಯಗಳಲ್ಲಿ ಸೋತ ಬಗ್ಗೆ ಮಾತನಾಡಿದ ರೋಹಿತ್, ನಾವು ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದ್ದು ಮೊದಲೆರಡು ಪಂದ್ಯಗಳಲ್ಲಿ ಸಮಸ್ಯೆ ತಂದೊಡ್ಡಿತು ಎಂದು ಹೇಳಿದ್ದಾರೆ. ‘ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪ್ರತಿಯೊಬ್ಬ ಆಟಗಾರರು ಕೂಡ ಭಿನ್ನವಾಗಿ ಆಟವಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಮೊದಲ ಎರಡು ಪಂದ್ಯಗಳಲ್ಲಿಯೂ ಹೀಗೆಯೇ ಇರಬೇಕಿತ್ತು. ಆದರೆ ಅದು ಸಂಭವಿಸಲಿಲ್ಲ. ನೀವು ದೀರ್ಘಕಾಲದವರೆಗೆ ಟ್ರ್ಯಾಕ್‌ನಲ್ಲಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವಿಕೆಯೂ ಕೂಡ ಕೆಲವೊಮ್ಮೆ ಸಮಸ್ಯೆಯಾಗಬಹುದು. ಮೊದಲ ಎರಡು ಪಂದ್ಯಗಳಲ್ಲಿ ಅದು ನಿಜವಾಗಿದೆ. ತಪ್ಪಾಗಿರುವುದು ನಿಜ. ಅದರಿಂದ ಕಮ್​ಬ್ಯಾಕ್ ಕೂಡ ಮಾಡಿದ್ದೇವೆ’ ಎಂದು ರೋಹಿತ್ ಹೇಳಿದ್ದಾರೆ.

ಇನ್ನು ಐಪಿಎಲ್​ನಲ್ಲಿ ನೀಡುವ ಪ್ರದರ್ಶನ ಮತ್ತು ಭಾರತ ತಂಡಕ್ಕೆ ನೀಡುವ ಪ್ರದರ್ಶನ ಬಗ್ಗೆ ಪ್ರಶ್ನೆ ಬಂದಾಗ ಉತ್ತರಿಸಿದ ಅವರು, ‘ಐಪಿಎಲ್​ನಲ್ಲಿ ಆಟಗಾರರ ಪ್ರದರ್ಶನದ ಬಗ್ಗೆ ನಾನು ಕಮೆಂಟ್ ಮಾಡಲಾರೆ, ಯಾಕಂದ್ರೆ ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಟೀಮ್ ಇಂಡಿಯಾದಲ್ಲಿ ಪ್ರತಿಯೊಬ್ಬರ ಪಾತ್ರವೂ ಸ್ಪಷ್ಟವಾಗಿದೆ. ಮೈದಾನದಲ್ಲಿ ಯಾವ ರೀತಿ ಆಡಬೇಕು ಎನ್ನುವ ಬಗ್ಗೆ ತಿಳಿಸಲಾಗಿದೆ. ಆಟಗಾರರು ಇಲ್ಲಿ ಭಾರತಕ್ಕಾಗಿ ಆಡುವಾಗ ಏನು ಮಾಡುತ್ತಾರೆ ಎಂಬುದು ಮುಖ್ಯ. ಅವರು ಬಿಡುವಿನ ವೇಳೆ ತಂಡದಿಂದ ಹೊರಗಿದ್ದಾಗ ಏನು ಮಾಡಬೇಕು ಎಂಬುದರ ಕುರಿತುಕೂಡ ನಾವು ಸ್ಪಷ್ಟವಾಗಿ ಹೇಳಿದ್ದೇವೆ’ ಎಂದು ರೋಹಿತ್ ಖಡಕ್ ಆಗು ಉತ್ತರಿಸಿದ್ದಾರೆ.

 

‘ವಿಶ್ವಕಪ್‌ನಂತಹ ಟೂರ್ನಿಯ ಸಂದರ್ಭದಲ್ಲಿ ನಿಮ್ಮ ಸಂಪೂರ್ಣ ಗಮನ ಈ ಟೂರ್ನಿಯ ಮೇಲಿರಬೇಕಾಗುತ್ತದೆ. ನಾವು ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಂದ ಮಾತ್ರಕ್ಕೆ ನಮ್ಮದು ಕೆಟ್ಟ ತಂಡ ಅಥವಾ ಕೆಟ್ಟ ಆಟಗಾರರು ಎಂದು ಪರಿಗಣಿಸಲು ಸಾಧ್ಯವಿಲ್ಲ. ನಾವು ಈ ವರ್ಷದ ಆರಂಭದಿಂದಲೂ ತುಂಬಾ ಉತ್ತಮ ಕ್ರಿಕೆಟ್‌ ಅನ್ನು ಆಡಿಕೊಂಡು ಬಂದಿದ್ದೇವೆ’ ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.

ಇನ್ನು ಇದೇವೇಳೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಿ ಆಯ್ಕೆ ಆದ ಬಗ್ಗೆ ಮಾತನಾಡಿದ ರೋಹಿತ್, ‘ಹೋ, ಇದು ಅಧಿಕೃತವೇ?, ನಾವು ಪಂದ್ಯವನ್ನು ಆಡುತ್ತಿದ್ದೆವು, ದ್ರಾವಿಡ್ ಕೋಚ್ ಆದ ಬಗ್ಗೆ ನನಗೆಎ ಯಾವುದೇ ಮಾಹಿತಿ ತಿಳಿದಿಲ್ಲ. ಅವರು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದು ನಮಗೆ ಸಂತೋಷದ ವಿಚಾರ. ದ್ರಾವಿಡ್ ಭಾರತೀಯ ಕ್ರಿಕೆಟ್ ನ ಧೀಮಂತ ಕ್ರಿಕೆಟಿಗ. ಅವರ ಜೊತೆ ಕೆಲಸ ಮಾಡುವದೇ ಖುಷಿ. ಭಾರತೀಯ ಕ್ರಿಕೆಟ್​ಗೆ ಮತ್ತೊಂದು ರೂಪದಲ್ಲಿ ಕಮ್ ಬ್ಯಾಕ್ ಮಾಡುತ್ತಿರುವುದಕ್ಕೆ ಅವರಿಗೆ ಸ್ವಾಗತ’ ಎಂದು ರೋಹಿತ್ ಖುಷಿ ಹಂಚಿಕೊಂಡರು.

Rahul Dravid: ರಾಹುಲ್ ದ್ರಾವಿಡ್ ಭಾರತದ ಕೋಚ್ ಆದ ಬಗ್ಗೆ ರೋಹಿತ್ ಶರ್ಮಾರಿಂದ ಅಚ್ಚರಿಯ ಹೇಳಿಕೆ

Matt Cross: ಇಡೀ ಭಾರತ ದೇಶದ ಬೆಂಬಲ ನಮಗಿದೆ: ನ್ಯೂಜಿಲೆಂಡ್ ಸೋಲಿಸಲು ಸ್ಕಾಟ್ಲೆಂಡ್ ಕೀಪರ್ ಮಾಡಿದ ರಣತಂತ್ರ ನೋಡಿ

(Rohit Sharma press conference After India win against Afghanistan in T20 World Cup)

TV9 Kannada


Leave a Reply

Your email address will not be published. Required fields are marked *