ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಹೋರಾಟ ತಾರಕ್ಕಕ್ಕೇರಿರುವ ಬೆನ್ನಲ್ಲೇ, ಸರ್ಕಾರ ಯಾವುದೇ ಕಾರಣಕ್ಕೂ ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡಬಾರದು ಎಂದು ಶಿವಮೊಗ್ಗ ಜಿಲ್ಲೆಯಲ್ಲಿ ಸಮಾವೇಶದ ಮೂಲಕ ಈಡಿಗ ಸಮಾಜವು ಹಕ್ಕೋತ್ತಾಯ ಮಾಡಿದೆ.

ಪ್ರಬಲ ಜಾತಿಗಳಿಗೆ ಮೀಸಲಾತಿ ನೀಡಬಾರದೆಂದು ಈಡಿಗ ಸಮಾಜದಿಂದ ಹಕ್ಕೋತ್ತಾಯ ಸಮಾವೇಶ
ಶಿವಮೊಗ್ಗ: ಈಗಾಗಲೇ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ಹೋರಾಟ ಆರಂಭಿಸಿದ್ದು, ಈ ಜಾತಿಗೆ 2ಎ ಮೀಸಲಾತಿ ನೀಡಿದಲ್ಲಿ, ಈಡಿಗ, ಹಾಲುಮತ ಸೇರಿದಂತೆ 102 ಜಾತಿಗಳಿಗೆ ಅನ್ಯಾಯವಾಗಲಿದೆ. ಶೋಷಿತ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ಬಲಾಡ್ಯ ಜಾತಿಗಳಿಗೆ ಮೀಸಲಾಗಲಿದೆ. ಆಗ ಶೋಷಿತ ಸಮಾಜಗಳು ಮತ್ತೆ ಶೋಷಣೆಗೊಳಗಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬಾರದು ಎಂದು ಆಗ್ರಹಿಸಿ ಶ್ರೀನಾರಾಯಣ ಗುರು ವಿಚಾರ ವೇದಿಕೆ ಹಾಗೂ ನಾರಾಯಣ ಗುರು ಸಮಾಜ ಹಿತರಕ್ಷಣಾ ಸಮಿತಿಯಿಂದ ಶಿವಮೊಗ್ಗದಲ್ಲಿ ಬೃಹತ್ ಪಾದಯಾತ್ರೆ ಹಾಗೂ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ 25 ಸಾವಿರಕ್ಕೂ ಅಧಿಕ ಜನರು ಸೇರುವ ಮೂಲಕ ಹೋರಾಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದ್ದರು. ಮೀಸಲಾತಿ ಮಾತ್ರವಲ್ಲದೆ ಶರಾವತಿ ಸಂತ್ರಸ್ತರಿಗೆ ಕೂಡಲೇ ನ್ಯಾಯ ಒದಗಿಸಬೇಕು, ಸಿಗಂದೂರು ದೇವಾಲಯದ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು, ಇನ್ನು ಶೀಘ್ರದಲ್ಲೇ ಉದ್ಘಾಟನೆಯಾಗಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಹೆಸರಿಡಬೇಕು ಎಂದು ಹಕ್ಕೊತ್ತಾಯ ಸಮಾವೇಶದಲ್ಲಿ ಆಗ್ರಹಿಸಿದ್ದು ವಿಶೇಷವಾಗಿತ್ತು.
ಹಕ್ಕೊತ್ತಾಯ ಸಮಾವೇಶದುದ್ದಕ್ಕೂ ಮಾತನಾಡಿದ ಮುಖಂಡರುಗಳು ನಮ್ಮ ಹೋರಾಟ ಯಾವುದೇ ಸಮಾಜದ ವಿರುದ್ಧವಾಗಿಯಲ್ಲ. ಬದಲಿಗೆ ನಾವು ನಮ್ಮ ಮೀಸಲಾತಿ ಉಳಿಸಿಕೊಳ್ಳಲು ಹೋರಾಟ ಮಾಡುತಿದ್ದೇವೆ ಎಂದು ಹೇಳುವ ಮೂಲಕ ಸಮಾವೇಶದಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ಮೀಸಲಾತಿ ವಿಷಯ ಹೈಕೋರ್ಟ್ ನಲ್ಲಿದೆ. ಹೀಗಾಗಿ ಇದರ ಬಗ್ಗೆ ಮಾತನಾಡುವುದು ಸರಿಯಲ್ಲ. ಆದರೆ ಈಡಿಗರಿಗೆ ಸಿಗಬೇಕಾದ ಮೀಸಲಾತಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಒಂದು ವೇಳೆ ಈಡಿಗ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎನ್ನುವುದಾದರೆ ನಾವು ಎಲ್ಲರೂ ಪಕ್ಷಬೇಧ ಮರೆತು ಒಟ್ಟಾಗಿ ಹೋರಾಟ ಮಾಡಲೇಬೇಕು. ಇದಕ್ಕಾಗಿಯಾದರೂ ನಾವೆಲ್ಲ ಒಟ್ಟಾಗಿರಬೇಕು ಎಂದು ಕರೆ ನೀಡಿದರು.