ತಮ್ಮ ಕಾಲಿಗೆ ಬೀಳುವವರು ಮತ್ತು ಮೇಲೆ ಬೀಳುವವರ ಬಗ್ಗೆ ಎಚ್ಚರವಾಗಿರಬೇಕು ಎಂದು ರಮೇಶ್ ಕುಮಾರ್ ಹೇಳಿದರು.

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಕೃಷ್ಣ ಭೈರೇಗೌಡ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.
ದಾವಣಗೆರೆ: ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ದಾವಣಗೆರೆಯಲ್ಲಿ ನಡೆಯುತ್ತಿರುವ ‘ಸಿದ್ದರಾಮೋತ್ಸವ’ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕುರಿತು ಪ್ರಕಟಿಸಿರುವ ಸಮರ ಸೇನಾನಿ, ನುಡಿದಂತೆ ನಡೆ, ಸಿದ್ದನಡೆ 75 ಹೆಸರಿನ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್, ಕರ್ನಾಟಕದಲ್ಲಿ ಇಷ್ಟು ಜನರು ಒಂದೆಡೆ ಸೇರಿದ್ದ ಇತಿಹಾಸವೇ ಬಹುಶಃ ಇಲ್ಲ. ಸಿದ್ದರಾಮಯ್ಯ ಅವರ ಮಾತು ಒರಟಾದರು ಹೃದಯ ಮೃದು. ಪಂಚಾಯತ್ ರಾಜ್ ವ್ಯವಸ್ಥೆ ಗಟ್ಟಿ ಮಾಡಿದವರು ಅವರು. ತಳದಿಂದ ಮೇಲ್ಮಟ್ಟಕ್ಕೆ ಪ್ಲಾನಿಂಗ್ ಆಗಬೇಕು ಎಂಬ ಕಾನೂನು ಮಾಡಿ, ಬಲಗೊಳಿಸಿದರು’ ಎಂದು ಹೇಳಿದರು.
ಶ್ರೀನಿವಾಸಪುರದ ಶಾಸಕ ರಮೇಶ್ಕುಮಾರ್ ಮಾತನಾಡಿ, ‘ಸಿದ್ದರಾಮಯ್ಯ ನಮಗೆಲ್ಲರಿಗೂ ಸೇರಿದವರು. ತಮ್ಮ ಕಾಲಿಗೆ ಬೀಳುವವರು ಮತ್ತು ಮೇಲೆ ಬೀಳುವವರ ಬಗ್ಗೆ ಎಚ್ಚರವಾಗಿರಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳದವರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಇವರ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು’ ಎಂದು ಕಿವಿಮಾತು ಹೇಳಿದರು. ಶಾಸಕ ಜಮೀರ್ ಅಹಮದ್ ಮಾತನಾಡಿ, ‘ಜನರ ಪ್ರೀತಿಯನ್ನು ನೋಡಿದರೆ ಹೃದಯ ತುಂಬಿ ಬರುತ್ತದೆ’ ಎಂದರು. ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಈ ಕಾರ್ಯಕ್ರಮದಿಂದ ರಾಜ್ಯದಲ್ಲಿ ದೊಡ್ಡ ಬದಲಾವಣೆ ಬರಲಿದೆ. ಕಾರ್ಯಕ್ರಮದ ಮೂಲಕ ಸಿದ್ದರಾಮಯ್ಯರಿಗೆ ಶಕ್ತಿ ತುಂಬುವ ಮೂಲಕ ನಮ್ಮ ಕನಸು ನನಸು ಮಾಡಿಕೊಳ್ಳೋಣ’ ಎಂದು ಕರೆ ನೀಡಿದರು.
ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆಗೆ ರಾಹುಲ್ ಗಾಂಧಿ ಆಗಮಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದಾರೆ.