Sushant Singh Rajput Case: ಕೂಪರ್ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ರೂಪ್ಕುಮಾರ್ ಶಾ ಅವರು ಹೊಸ ವಿಚಾರಗಳನ್ನು ಬಯಲು ಮಾಡಿದ್ದಾರೆ. ಇದರಿಂದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಂತೆ ಆಗಿದೆ.

ಸುಶಾಂತ್ ಸಿಂಗ್ ರಜಪೂತ್
ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರನ್ನು ಅಭಿಮಾನಿಗಳು ಇಂದಿಗೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಬಿಐ (CBI) ತಂಡ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಅವರನ್ನು ಯಾರೋ ಕೊಲೆ ಮಾಡಿರಬಹುದು ಎಂಬುದು ಕುಟುಂಬದವರ ಮತ್ತು ಅಭಿಮಾನಿಗಳ ಅನುಮಾನ. ಆ ಅನುಮಾನಕ್ಕೆ ಪುಷ್ಟಿ ನೀಡುವಂತಹ ಘಟನೆ ಇತ್ತೀಚೆಗೆ ನಡೆದಿದೆ. ಸುಶಾಂತ್ ಅವರ ಮೃತದೇಹದ ಮೇಲೆ ಗಾಯದ ಕಲೆಗಳಿದ್ದವು ಎಂದು ಕೂಪರ್ ಆಸ್ಪತ್ರೆಯ ಸಿಬ್ಬಂದಿ ಬಾಯಿ ಬಿಟ್ಟಿದ್ದಾರೆ. ಈ ವಿಚಾರದ ಬಗ್ಗೆ ಗಮನ ಹರಿಸುವಂತೆ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ (Shweta Singh Kirti) ಅವರು ಆಗ್ರಹಿಸಿದ್ದಾರೆ.
2020ರ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಬಳಿಕ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಆ ವೇಳೆ ಕೆಲಸ ಮಾಡುತ್ತಿದ್ದ ಶವಾಗಾರದ ಸಿಬ್ಬಂದಿ ರೂಪ್ಕುಮಾರ್ ಶಾ ಅವರು ಈಗ ಹೊಸ ವಿಚಾರಗಳನ್ನು ಬಯಲು ಮಾಡಿದ್ದಾರೆ. ಸುಶಾಂತ್ ದೇಹದ ಮೇಲೆ ಗಾಯದ ಗುರುತುಗಳು ಇದ್ದವು ಎಂದು ಅವರು ಹೇಳಿದ್ದಾರೆ. ಇದರಿಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತೆ ಆಗಿದೆ.