ಸತ್ಯಕಾಮ (ಅನಂತಕೃಷ್ಣ ಶಹಪೂರ) ಬರೆದ ‘ಪಂಚ‘ಮ’ಕಾರಗಳ ನಡುವೆ’ ಕಾದಂಬರಿಯಿಂದ ಆಯ್ದ ಭಾಗ.
*
ಪೈಠಣಕ್ಕೆ ಬರಬೇಕಿದ್ದರೆ ನಾನು ಮರಳಿ ಜಾಂಬಿಗೆ ಬರಬೇಕಿತ್ತು. ಅಮಾವಾಸ್ಯೆ ನಾಳೆ ಇರುವಾಗಲೆ ಇಂದು ಪೈಠಣಕ್ಕೆ ಹೋಗಿದ್ದೆ. ಹೊಸತು ನನ್ನ ಬುದ್ಧಿಗೆ ಒಪ್ಪುವ ಹುಡುಕಾಟ, ನಾನು ನನ್ನ ಬಗ್ಗೆ ಹಲವು ಸಲ ಚಿಂತಿಸಿದೆ.
ನನಗೆ ಗೀತಗೋವಿಂದ ಸೇರಿತ್ತು.
ಗೋಪೀಗೀತ ತುಂಬ ಆಪ್ಯಾಯಮಾನವಾಗಿತ್ತು. ಆದರೆ ಅದರಲ್ಲಿಯ ರತಿ ಎಷ್ಟರ ಮಟ್ಟಿಗೆ ಸ್ಥಾಯಿ? ಎಲ್ಲಕ್ಕಿಂತ ದೊಡ್ಡ ಚಮತ್ಕಾರವೆಂದರೆ ಗೋಪೀಗೀತವನ್ನು ಓದಿದಷ್ಟು ಸಲ ನನ್ನ ರತಿ ಗೋಪಿಯದಾಗಿತ್ತೇ ಹೊರತು ಕೃಷ್ಣನದಾಗಿರಲಿಲ್ಲ. ಅಂತೆಯೆ ಅದು ನನಗೆ ಬರಿ ಶೃಂಗಾರ ರಸಾನುಭೂತಿಯಾಗದ ಅದಕ್ಕೆ ನೆರೆಯದಾದ ಇನ್ನೊಂದು ಅನುಭವವಾಗಿತ್ತು.
ಏನು ರಸಾನುಭವ?
ನೂರು ಲಕ್ಷಣ ಗ್ರಂಥ ಓದಿದ್ದೆ. ಹೊಸತನ್ನು ಬರೆಯುವ ಸಿದ್ಧತೆಯಲ್ಲೂ ಇದ್ದೆ. ಆದರೆ ಇಂದು ರಸಶಾಸ್ತ್ರಕ್ಕೆ ಮನೋವಿಜ್ಞಾನ ಜತೆಯಾಗಿದೆ. ಮಮ್ಮಟ, ವಿಶ್ವನಾಥ, ಜಗನ್ನಾಥರಿಗೆ ಮನಶ್ಯಾಸ್ತ್ರ ಗೊತ್ತಿದ್ದರೆ ಅವರ ಕಾವ್ಯಶಾಸ್ತ್ರದ ದಿಕ್ಕೇ ಬದಲಾಗುತ್ತಿತ್ತು.
ಆನಂದವರ್ಧನ ಧ್ವನ್ಯಾಲೋಕ ಬರೆದ.
ಆದರೆ ಅವನಿಗೆ ಧ್ವನಿಯ ಆಲೋಕಪಥ ಹತ್ತಲಿಲ್ಲ.
ನಾನು ಈ ಮಾತನ್ನು ವಿವರಿಸುವಾಗ ರಸ ಶಾಸ್ತ್ರಜ್ಞರು ರತಿಯನ್ನು ಲೈಂಗಿಕ ಪ್ರವೃತ್ತಿಯ ಆಘಾತಕ್ಕೊಳಗಾಗಿಸದೆ ಅವಳ ಪಾತಿವ್ರತ್ಯ ರಕ್ಷಿಸಿ ಕೊಂಡುಬಂದರು.
ಆದರೆ ಕಾವ್ಯದಲ್ಲಿ ಕವಿಗೆ, ಓದುಗನಿಗೆ ಪರಿರಕ್ಷಕ ರತಿ ಇದ್ದಳೆ? ಅದೆಲ್ಲ ನನ್ನ ಮನಸ್ಸಿಗೀಗ ವಿಷಯವಲ್ಲ.
ಕಾವ್ಯದ ರತಿಯಿಂದ
ಭಕ್ತಿಯ ರತಿ ಬೇರೆಯಾಗಿರದಿದ್ದರೆ ಗತಿಯಿಲ್ಲ.
ನಾನು ಪೈಠಣಕ್ಕೆ ಬಂದೆ. ಹಗಲನ್ನು ಅತ್ತಿತ್ತ ಅಲೆಯುವಲ್ಲಿ ಕಳೆದೆ. ರಾತ್ರಿ ಹತ್ತಿರವಾಗಲೆಂದು ಹಗಲನ್ನು ಒತ್ತಡದಿಂದ ನೂಕುತ್ತಿದ್ದೆ.
ಕಾಲ ಮತ್ತು ಮನಸ್ಸು ಇವುಗಳಲ್ಲಿ ಯಾವಾಗಲೂ ಒಂದು ಬಗೆಯ ಎಳೆದಾಟ ಇರುತ್ತದೆ. ಭವಿಷ್ಯ ಬೇಗ ಬರಲಿ ಎಂದು ತವಕ ಪಡುವವನ ವರ್ತಮಾನ ದೊಡ್ಡದಿರುತ್ತದೆ. ಭೂತ ಬಹಳ ಬೆಲೆಯುಳ್ಳದ್ದು ಎಂದು ತಿಳಿದವನ ವರ್ತಮಾನ ಹಗುರು, ಭವಿಷ್ಯ ಮಸುಕು. ಕಾಲದ ಮೇಲೆ ಸವಾರಿ ಮಾಡುವ ಶಕ್ತಿ ಬರಬೇಕಾದರೆ ಮನಸ್ಸು ‘ವಿದೇಶಿ’ ಇರಬೇಕು. ದೇಶಕ್ಕೆ ಅಂಟಿಕೊಳ್ಳುವ ಮನಸ್ಸಿನ ಅಶಕ್ತತೆ ನೀಗಬೇಕು. ನನಗೆ ತಿಳಿಯುತ್ತಿತ್ತು, ಆದರೆ ತಿಳಿದದ್ದು ಕೈಗೆ ಎಟಕಿದ್ದೆಷ್ಟು?
ನನಗೆ ಕತ್ತಲಿನ ಕಡೆಗೆ ಕಣ್ಣು.
ಆದರೂ ಕೆಲ ಭೌಗೋಲಿಕ ಪರಿಚಯಕ್ಕಾಗಿ ಪೈಠಣವನ್ನು ಸುತ್ತಿಬಂದೆ. ನನಗೆ…
ಹೊಳೆ ಎಲ್ಲಿದೆ ಬೇಕಾಗಿತ್ತು.
ಸ್ಮಶಾನ ಹೊಳೆಯಿಂದ ಎಷ್ಟು ದೂರ ತಿಳಿಯಬೇಕಿತ್ತು.
ನಾನು ಕಾಯ್ದಿರಬೇಕಾದ ಹಾಳುಮನೆ ಯಾವುದು ಅರಿಯಬೇಕಿತ್ತು. ಎಲ್ಲ ಭೌಗೋಲಿಕ ಜ್ಞಾನ ಸಂಪಾದಿಸಿಕೊಂಡು ಬಂದರೂ ಇನ್ನೂ ಹೊತ್ತು ಮುಳುಗಿದ್ದಿಲ್ಲ.
ಪೈಠಣ ಗೋದಾವರಿ ನದೀ ದಂಡೆಯ ಮೇಲಿರುವ ಊರು. ಸಾಂಪ್ರದಾಯಕರು, ಭಾವಿಕರು ಅದಕ್ಕೊಂದು ಸ್ಥಳ ಮಹಾತ್ಮೆ ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಪ್ರಭಾವಶಾಲಿಯಾದ ಸಂತರಾದ ಏಕನಾಥರು ಇಲ್ಲಿಯವರೆಂದು ಹೇಳುವರು. ನನಗೆ ಆವೂರಿನ ಐತಿಹಾಸಿಕ ಮಹತ್ವ, ಭೌಗೋಲಿಕ ಆಕರ್ಷಣೆ ದೊಡ್ಡವಾಗಿದ್ದಿಲ್ಲ. ಈ ದಿನ ಮಧ್ಯರಾತ್ರಿ ಬದುಕಿನ ಇನ್ನೊಂದು ನಿಟ್ಟು ತೋರಿಸುತ್ತೇನೆ ಎಂದವನ ಮಾತು ತುಂಬ ಮಹತ್ವದ್ದು.

ಪಂಚ‘ಮ’ಕಾರಗಳ ನಡುವೆ
ನಾನು ಚೈತನ್ಯ ಸಂಪ್ರದಾಯದ ಲಾಲಿತ್ಯದ ಜತೆಗೇ ಇವರು ಹೇಳ ಬಹುದಾದ ತೋರಿಸಬಹುದಾದ ಭೀಭತ್ಸವನ್ನು ತುಲನೆ ಮಾಡಬೇಕೆಂದೆ. ತಲೆ ಕೆಲಸ ಮಾಡಲಿಲ್ಲ. ಪ್ರತಿಭೆ-ಬುದ್ಧಿ ಯಾವ ವಸ್ತುಗಳೂ ನೆರವಿಗೆ ಬರಲಿಲ್ಲ. ನಿರ್ಭಯತೆಯ ಬಗ್ಗೆ ನಿಶ್ಚಯ ಇದ್ದವ, ಗಾಢ ಅನುಭವ ಇದ್ದವ ಭಯದ ಆಳವನ್ನು ಅಳೆಯಬಹುದೆ? ನನಗೆ ನನ್ನ ಮನಸ್ಸು ಸರಿಯಾದ ಪ್ರತಿಕ್ರಿಯೆ ತೋರಿಸಲಿಲ್ಲ.
ಇದಕ್ಕೆ ನಾನು ಬೆಳೆದ ಪರಿಸರ ಕಾರಣ ಇರಬಹುದು, ಪರಿಸರದಿಂದ ನಮ್ಮನ್ನು ಹೊರಗು ಮಾಡಿಕೊಳ್ಳುವ ಅಗತ್ಯ ನನಗೆ ಅನ್ನಿಸಿತು. ಬರಿ ಪರಿಸರದ ಪ್ರಭಾವಕ್ಕೆ ಒಳಗಾಗುತ್ತ ಹೋಗುವವನಿಗೆ ಅಸ್ತಿತ್ವ ಎಂತಹದು? ಅಸ್ತಿತ್ವವಾದಿ ಪರಿಸರದ ಮೇಲೆ ತನ್ನ ಪ್ರಭಾವದ ಮುದ್ರೆಯೊತ್ತುತ್ತಾನೆ. ನಾನು ನನ್ನನ್ನು ತುಂಬ ಎಚ್ಚರಿಸಿಕೊಂಡೆ. ನಡೆದು ಬಂದ ದಾರಿಯಲ್ಲಿ ಸಂಸ್ಕಾರ, ಪರಿಸರಗಳನ್ನು ಪ್ರಭಾವ ಬೀರದಂತೆ, ಅವು ನನ್ನನ್ನು ತಮ್ಮ ಅಳವಿನೊಳಗೆ ಎಳೆದುಕೊಳ್ಳಲು ಯತ್ನಿಸಿದಾಗ ಅವುಗಳಿಂದ ನಾನು ಕೊಸರಿಕೊಂಡುದನ್ನೆಲ್ಲ ನೆನೆಸಿಕೊಂಡೆ.
ಈ ಸಿಂಹಾವಲೋಕನದಲ್ಲಿ ನಡೆಯುತ್ತಿರುವ ಮನೋವೇಗವನ್ನು ನಾನು ಅಳೆಯುವ ಯತ್ನ ಎಂದಿನಿಂದಲೂ ಮಾಡುತ್ತಿದ್ದೆ, ಆದರೆ ನನಗೆ ಯತ್ನ ಗೊತ್ತಿತ್ತು. ವಿಧಾನ ತಿಳಿಯದೆ ಹೋಗಿತ್ತು. ಅಂತೆಯೆ ಅದು ತುಂಬ ಸಮಯ ವ್ಯರ್ಥ ಪರಿಶ್ರಮವಾದುದೂ ಉಂಟು.
ಇನ್ನೂ ಹೊತ್ತು ಇರುವಾಗ ನಾನು ನದೀ ದಂಡೆಯಲ್ಲಿ ತಿರುಗಾಡುವಾಗಲೆ ಆ ವ್ಯಕ್ತಿ ಕಂಡಿತು. ನನ್ನನ್ನು ನೋಡಿದೊಡನೆಯೆ ಓಡುತ್ತ ಬಂದು ತನ್ನ ನೀಳ ಬಾಹುಗಳಿಂದ ಅಪ್ಪಿಕೊಂಡಿತು.
“ಬಹುಶಃ ನೀನು ಬರುವುದಿಲ್ಲ ಎಂದುಕೊಂಡಿದ್ದೆ.”
“ನಾನು ಬರುತ್ತೇನೆಂದು ಹೇಳಿದ್ದಿಲ್ಲವೆ?”
“ಹೇಳಿದ್ದಿ. ಆದರೆ…?
”ನಾನು ಬರುತ್ತೇನೆ ಎಂದಾಗ ಅದರಲ್ಲಿ ಬರುವ ಸಾಮರ್ಥ್ಯ ಇದ್ದದ್ದು ಇಲ್ಲದ್ದು ನಿನಗೆ ಗೊತ್ತಾಗಲಿಲ್ಲವೆ?”
ಆತ ಇನ್ನೊಮ್ಮೆ ಅಪ್ಪಿದ.
“ನಿನ್ನ ಮಾತಿನ ಆಳ ನನಗೆ ಹಿಗ್ಗು ತಂದಿತು.”
ರಾತ್ರಿ ನಾನು ಮಾಡಬೇಕಾದ ಕಾರ್ಯಕ್ರಮವನ್ನು ಕುರಿತು ವಿವರವಾಗಿ ಹೇಳಿದ, “ಇಲ್ಲಿ, ಈ ಹಾಳು ಮನೆಯಲ್ಲಿ ಕುಳಿತುಕೊ. ನನ್ನ ಮಂತ್ರ ಧ್ವನಿ ಕೇಳಿಸಿದ ಕೂಡಲೆ ಬಂದುಬಿಡು.”
*
ಸೌಜನ್ಯ : ಐಬಿಎಚ್ ಪ್ರಕಾಶನ, ಬೆಂಗಳೂರು, 080 2225 2385