ಪ್ರಾತಿನಿಧಿಕ ಚಿತ್ರ
ವಿಶ್ವ ಯಕೃತ್ತಿನ ದಿನ 2022: ದೇಹದ ಒಟ್ಟಾರೆ ಆರೋಗ್ಯದಲ್ಲಿ ಯಕೃತ್ತಿನ ಪಾತ್ರ ಬಹಳ ಮುಖ್ಯವಾದದ್ದು. ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮತ್ತು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಜನರಿಗೆ ಹೆಚ್ಚು ತಿಳುವಳಿಕೆ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 19ರಂದು ವಿಶ್ವ ಯಕೃತ್ತಿನ ದಿನವನ್ನು (World Liver Day) ಆಚರಿಸಲಾಗುತ್ತದೆ. ಜೀರ್ಣಕ್ರಿಯೆ ಸೇರಿದಂತೆ ನಮ್ಮನ್ನು ಆರೋಗ್ಯವಾಗಿಡಲು ಪಿತ್ತಜನಕಾಂಗ ಮುಖ್ಯ. ನಾವು ತಿನ್ನುವ ಆಹಾರದಿಂದ ಹಿಡಿದು ಕುಡಿಯುವ ಎಲ್ಲವೂ ಯಕೃತ್ತಿನ ಮೂಲಕ ಹಾದು ಹೋಗುತ್ತದೆ. ಆಹಾರವನ್ನು ಕಲುಷಿತದಿಂದ ಬೇರ್ಪಡಿಸಿ, ಪೌಷ್ಠಿಕಾಂಶಯುಕ್ತ ಆಹಾರವನ್ನು ನಮ್ಮ ದೇಹಕ್ಕೆ ನೀಡುವ ಕ್ರಿಯೆ ಪಿತ್ತಜನಕಾಂಗ ನಡೆಸುತ್ತದೆ. ಸಾಮಾನ್ಯವಾಗಿ, ಹೆಪಟೈಟಿಸ್ ಬಿ, ಸಿ ಕಾಯಿಲೆಗಳು, ಆಲ್ಕೋಹಾಲ್ ಅಥವಾ ಡ್ರಗ್ ವ್ಯಸನಗಳು ಯಕೃತ್ತಿನ ಆರೋಗ್ಯಕ್ಕೆ ಋಣಾತ್ಮಕ ಪರಿಣಾಮ ಬೀರುತ್ತದೆ. ವಿಶ್ವ ಯಕೃತ್ತಿನ ದಿನವಾದ ಇಂದು ಆರೋಗ್ಯಕರ ಪಿತ್ತಜನಕಾಂಗವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು; ಯಾವುದರಿಂದ ದೂರವಿರಬೇಕು.. ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಯಕೃತ್ತಿನ ಆರೋಗ್ಯಕ್ಕೆ ಇದು ಸಹಕಾರಿ:
ಪಾಲಕ್, ಕೋಸುಗಡ್ಡೆ, ಕೇಲ್ ಮುಂತಾದ ಹಸಿರು ಮತ್ತು ಎಲೆಗಳ ತರಕಾರಿಗಳನ್ನು ಉತ್ತಮ ಪ್ರಮಾಣದಲ್ಲಿ ಸೇವಿಸಿ. ಈ ತರಕಾರಿಗಳು ದೇಹದಲ್ಲಿ ನೈಸರ್ಗಿಕ ಶುದ್ಧೀಕರಣ ಪ್ರಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ವಾಲ್ನಟ್ಸ್, ಆವಕಾಡೋಸ್, ಆಲಿವ್ ಆಯಿಲ್ನಲ್ಲಿ ಕಂಡುಬರುವ ‘ಗುಡ್ ಫ್ಯಾಟ್’ಗೆ ನಿಮ್ಮ ಆಹಾರ ಶೈಲಿ ಬದಲಾಯಿಸಿಕೊಳ್ಳಿ.
ಹೆಚ್ಚು ನೀರನ್ನು ಕುಡಿಯಿರಿ. ಇದು ದೇಹದಿಂದ ಕಲ್ಮಶವನ್ನು ಹೊರಹಾಕಲು ಯಕೃತ್ತಿಗೆ ಮತ್ತಷ್ಟು ಶಕ್ತಿ ನೀಡುತ್ತದೆ.
ನಿಮ್ಮ ಆಹಾರದಲ್ಲಿ ಹಣ್ಣುಗಳ ಪ್ರಮಾಣವನ್ನು ಹೆಚ್ಚಿಸಿ. ಇದಲ್ಲದೆ, ನೀವು ವಿಟಮಿನ್ ಹೊಂದಿರುವ ಹಣ್ಣುಹಂಪಲುಗಳನ್ನು ತಿನ್ನುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಉತ್ತಮ ವ್ಯಾಯಾಮ, ನಡಿಗೆ, ಯೋಗ ಮೊದಲಾದವುಗಳು. ಯಕೃತ್ತಿನ ಆರೋಗ್ಯಕ್ಕೂ ಇದು ಅನ್ವಯಿಸುತ್ತದೆ.
ಲಿವರ್ ಉತ್ತಮವಾಗಿಡಲು ಇವುಗಳಿಂದ ದೂರವಿರಿ:
ಸಂಸ್ಕರಿತ ಆಹಾರಗಳು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗಬಹುದು. ಅಲ್ಲದೇ ಅವುಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಸಹ ಹೆಚ್ಚಿಸುತ್ತವೆ. ಹೀಗಾಗಿ ಸಂಸ್ಕರಿತ ಆಹಾರಗಳಿಂದ ಸಾಧ್ಯವಾದಷ್ಟು ದೂರವಿರಿ.
ಕೆಟ್ಟ ಕೊಬ್ಬುಗಳು ಎಂದು ಕರೆಯಲ್ಪಡುವ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ಗಳನ್ನು (ಕೊಬ್ಬು) ತಪ್ಪಿಸಿ. ಇದರಲ್ಲಿ ಕರಿದ ತಿಂಡಿಗಳೂ ಸೇರಿವೆ.
ಯಕೃತ್ತಿನ ಆರೋಗ್ಯಕ್ಕೆ ಆಲ್ಕೊಹಾಲ್ ಸೇವನೆ ಬಹಳ ಕೆಟ್ಟದ್ದು. ಮದ್ಯಪಾನದಿಂದ ಯಕೃತ್ತಿಗೆ ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ಕಷ್ಟವಾಗುತ್ತದೆ. ಇದರಿಂದ ಬೇರೆಬೇರೆ ಕಾಯಿಲೆಗಳಿಗೆ ತುತ್ತಾಗಬಹುದು.
ಅತಿ ಕೆಂಪು ಮಾಂಸಹಾರ ಸೇವನೆ ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತವೆ ವರದಿಗಳು. ಇವು ಯಕೃತ್ ದಪ್ಪಗಾಗಲು ಕಾರಣವಾಗುತ್ತವೆ.
ಚಾಕೊಲೇಟ್ಗಳು, ಮಿಠಾಯಿಗಳು ಮತ್ತು ತಂಪು ಪಾನೀಯಗಳಂತಹ ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ.
ಬೆಳ್ಳುಳ್ಳಿ, ಸೊಪ್ಪು ತರಕಾರಿಗಳು, ಸೇಬು ಹಣ್ಣು, ದ್ರಾಕ್ಷಿಹಣ್ಣು ಮತ್ತು ಕ್ಯಾರೆಡ್ಗಳನ್ನು ಹೆಚ್ಚು ಸೇವಿಸಬೇಕು. ನಿಂಬೆ ರಸ, ಗ್ರೀನ್ ಟೀ ಹೆಚ್ಚು ಕುಡಿಯಬೇಕು. ಆಹಾರದಲ್ಲಿ ಅರಿಶಿಣ ಬಳಸಿ ಆಹಾರ ಸೇವಿಸಬೇಕು.
ಯಕೃತ್ತಿನ ಕಾಯಿಲೆಗೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ:
ಯಕೃತ್ತಿನ ಕಾಯಿಲೆ ಅನುವಂಶಿಕವಾಗಿಯೂ ಬರಬಹುದು. ಅನಾರೋಗ್ಯಕರ ಆಹಾರ ವ್ಯವಸ್ಥೆ ಮತ್ತು ತಿನ್ನುವ ಆಹಾರದ ಮಾದರಿಯ ಮೇಲೆ ಸಾಆನ್ಯವಾಗಿ ಯಕೃತ್ತಿನ ಕಾಯಿಲೆಗಳು ಉಂಟಾಗುತ್ತದೆ. ಆಲ್ಕೊಹಾಲ್, ಬೀದಿಯಲ್ಲಿ ಸಿಗುವ ಜಂಕ್ ಫುಡ್ಗಳ ಸೇವನೆ ಕಾಯಿಲೆಗೆ ಕಾರಣವಾಗಬಲ್ಲದು. ದೇಹದಲ್ಲಿ ಹೆಚ್ಚು ಬೊಜ್ಜು, ಡಯಾಬಿಟಿಸ್ ಉಂಟಾದಾಗ ಯಕೃತ್ತಿನ ಆರೋಗ್ಯದಲ್ಲಿ ಏರು-ಪೇರು ಉಂಟಾಗುತ್ತದೆ.
ಯಕೃತ್ತಿನ ಹಾನಿಯ ಲಕ್ಷಣಗಳು:
ಕಾಮಾಲೆ, ಕಡಿಮೆ ತೂಕ, ಹಸಿವಾಗದಿರುವುದು, ವಾಕರಿಕೆ ಮತ್ತು ವಾಂತಿ, ದೇಹಕ್ಕೆ ಸುಸ್ತು ಅಥವಾ ಆಯಾಸ, ಹೊಟ್ಟೆ ನೋವು ಇತ್ಯಾದಿಗಳಿಂದ ಯಕೃತ್ ಸಮಸ್ಯೆ ಆಗಿರುವುದು ತಿಳಿದು ಬರುತ್ತದೆ.